ನವದೆಹಲಿ: ವಜಾಗೊಂಡ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ತಂದೆ ದಿಲೀಪ್ ಖೇಡ್ಕರ್ ಮತ್ತು ಅವರ ಅಂಗರಕ್ಷಕರು ಪುಣೆಯಲ್ಲಿ ಟ್ರಕ್ನ ಸಹಾಯಕನನ್ನು ಅಪಹರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಟ್ರಕ್ ನ ಚಾಲಕನನ್ನು ಖೇಡ್ಕರ್ ಮನೆಯಿಂದ ರಕ್ಷಿಸಲಾಗಿದೆ. ಖೇಡ್ಕರ್ ಅವರ ಐಷಾರಾಮಿ ಎಸ್ಯುವಿ ವಾಹನಕ್ಕೆ ಟ್ರಕ್ ಡಿಕ್ಕಿ ಹೊಡೆದಿದ್ದು ಹಾನಿಗೆ ಪರಿಹಾರವನ್ನು ಪಡೆಯುವುದಕ್ಕಾಗಿ ಅವರು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ದಿಲೀಪ್ ಖೇಡ್ಕರ್ ಮತ್ತು ಅವರ ಪತ್ನಿ ಮನೋರಮಾ ಕೂಡ ಪೊಲೀಸ್ ಠಾಣೆಗೆ ಭೇಟಿ ನೀಡುವುದಾಗಿ ಪೊಲೀಸರಿಗೆ ತಿಳಿಸಿದ ನಂತರ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 22 ವರ್ಷದ ಪ್ರಹ್ಲಾದ್ ಕುಮಾರ್ ಎಂದು ಗುರುತಿಸಲಾದ ಸಹಾಯಕನನ್ನು ರಕ್ಷಿಸಲು ಹೋಗಿದ್ದ ಪೊಲೀಸ್ ತಂಡದ ಮೇಲೆ ಮನೋರಮಾ ಖೇಡ್ಕರ್ ನಾಯಿಗಳನ್ನು ಛೂ ಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನವಿ ಮುಂಬೈನ ಐರೋಲಿಯಲ್ಲಿ ಖೇಡ್ಕರ್ ಮತ್ತು ಅವರ ಅಂಗರಕ್ಷಕ ಪ್ರಫುಲ್ ಸಾಲುಂಕೆ ಪ್ರಯಾಣಿಸುತ್ತಿದ್ದ 2 ಕೋಟಿ ರೂ.ಗಳಿಗೂ ಹೆಚ್ಚು ಬೆಲೆಯ ಲ್ಯಾಂಡ್ ಕ್ರೂಸರ್ಗೆ ಸಿಮೆಂಟ್ ಮಿಕ್ಸರ್ ಡಿಕ್ಕಿ ಹೊಡೆದಿದೆ. ಟ್ರಕ್ ಸಹಾಯಕ ಕುಮಾರ್ ಅವರನ್ನು ಕಾರಿನಲ್ಲಿ ಬಲವಂತವಾಗಿ ಕೂರಿಸುವುದನ್ನು ನೋಡಿದ್ದೇವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಕುಮಾರ್ ಅವರನ್ನು ಪುಣೆಯ ಚತುರ್ಶೃಂಗಿಯಲ್ಲಿರುವ ಖೇಡ್ಕರ್ ಕುಟುಂಬದವರ ಮನೆಗೆ ಕರೆದೊಯ್ದು, ಅಲ್ಲಿ ಅವರನ್ನು ಒತ್ತೆಯಾಳಾಗಿಟ್ಟು ಥಳಿಸಲಾಯಿತು ಎಂದು ಆರೋಪಿಸಲಾಗಿದೆ.
"ಅಪಘಾತ ಸಂಭವಿಸಿದಾಗ ದಿಲೀಪ್ ಖೇಡ್ಕರ್ ಮತ್ತು ಅವರ ಅಂಗರಕ್ಷಕ ಕಾರಿನಲ್ಲಿದ್ದರು. ಟ್ರಕ್ನ ಸಹಾಯಕನಿಂದ ಉಂಟಾದ ಹಾನಿಗೆ ಪರಿಹಾರವನ್ನು ಬಯಸಿ ಅವರು ಅವರನ್ನು ಅಪಹರಿಸಿದರು" ಎಂದು ಉಪ ಪೊಲೀಸ್ ಆಯುಕ್ತ ಪಂಕಜ್ ದಹನೆ ಹೇಳಿದ್ದಾರೆ.
ಟ್ರಕ್ ಮಾಲೀಕರು ಕುಮಾರ್ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದರು ಮತ್ತು ಸಾಕ್ಷಿಗಳ ಹೇಳಿಕೆಯ ಆಧಾರದ ಮೇಲೆ ಅವರು ಖೇಡ್ಕರ್ ಅವರ ಚತುರ್ಶೃಂಗಿ ಮನೆಗೆ ತಲುಪಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿ, ಮನೋರಮಾ ಖೇಡ್ಕರ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದರು ಮತ್ತು ತಂಡದ ಮೇಲೆ ನಾಯಿಯನ್ನು ಬಿಟ್ಟು ಬೆದರಿಸಿದರು ಎಂದು ಆರೋಪಿಸಲಾಗಿದೆ. ಮನೆಯ ಮೇಲೆ ಅಂಟಿಸಲಾದ ನೋಟಿಸ್ ನ್ನು ಸಹ ಹರಿದು ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ಪೊಲೀಸರು ಕುಮಾರ್ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು, ಮತ್ತು ದಿಲೀಪ್ ಮತ್ತು ಮನೋರಮಾ ಖೇಡ್ಕರ್ ಅವರು ಮರುದಿನ ಪೊಲೀಸ್ ಠಾಣೆಗೆ ಭೇಟಿ ನೀಡುವುದಾಗಿ ಹೇಳಿದರು.
ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವುದು, ಅಪರಾಧದ ಪುರಾವೆಗಳನ್ನು ನಾಶಪಡಿಸುವುದು / ತಪ್ಪು ಮಾಹಿತಿ ನೀಡುವುದು ಮತ್ತು ಆರೋಪಿಯನ್ನು ಶಿಕ್ಷೆಯಿಂದ ರಕ್ಷಿಸಲು ಪ್ರಯತ್ನಿಸುವುದು ಮುಂತಾದ ವಿಭಾಗಗಳ ಅಡಿಯಲ್ಲಿ ಖೇಡ್ಕರ್ ಪತ್ನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಎಸ್ಯುವಿ, ಕುಟುಂಬ ನಾಪತ್ತೆ
ಸೋಮವಾರ ಬೆಳಿಗ್ಗೆ ಪೊಲೀಸರು ಮತ್ತೆ ಮನೆಗೆ ತಲುಪಿದಾಗ, ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಯಿತು ಮತ್ತು ಫೋನ್ ವಶಪಡಿಸಿಕೊಳ್ಳಲಾಯಿತು ಆದರೆ ಖೇಡ್ಕರ್ ಕುಟುಂಬ ಎಲ್ಲಿಯೂ ಪತ್ತೆಯಾಗಲಿಲ್ಲ, ಮತ್ತು ಎಸ್ಯುವಿ ಕೂಡ ಪತ್ತೆಯಾಗಲಿಲ್ಲ. ದಿಲೀಪ್ ಮತ್ತು ಮನೋರಮಾ ಖೇಡ್ಕರ್ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೂಜಾ ಖೇಡ್ಕರ್ ಕಳೆದ ವರ್ಷ ಪ್ರೊಬೇಷನರಿ ಐಎಎಸ್ ಅಧಿಕಾರಿಯಾಗಿ ನೇಮಕಗೊಳ್ಳುವಾಗ ಸವಲತ್ತುಗಳನ್ನು ಕೋರಿದ್ದಕ್ಕಾಗಿ ಸುದ್ದಿಯಾಗಿದ್ದರು ಮತ್ತು ನಂತರ ಅವರು ನಾಗರಿಕ ಸೇವೆಗಳಿಗೆ ಪ್ರವೇಶಿಸಲು ತಮ್ಮ ಉಪನಾಮವನ್ನು ಬದಲಾಯಿಸಿದ್ದಾರೆ, ಅಂಗವೈಕಲ್ಯದ ಬಗ್ಗೆ ಸುಳ್ಳು ಹೇಳಿದ್ದಾರೆ ಮತ್ತು ಹಿಂದುಳಿದ ವರ್ಗ ಪ್ರಮಾಣಪತ್ರವನ್ನು ನಕಲಿ ಮಾಡಿದ್ದಾರೆ ಎಂದು ಬೆಳಕಿಗೆ ಬಂದಿತ್ತು. ನಂತರ ಅವರನ್ನು ವಜಾಗೊಳಿಸಲಾಯಿತು ಮತ್ತು ಮತ್ತೆ ಪರೀಕ್ಷೆ ತೆಗೆದುಕೊಳ್ಳದಂತೆ ನಿರ್ಬಂಧಿಸಲಾಗಿದೆ.