ನವದೆಹಲಿ: ಆಮ್ ಆದ್ಮಿ ಪಕ್ಷ (AAP)ದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಪಕ್ಷದ ಹಿರಿಯ ನಾಯಕ ಸೌರಭ್ ಭಾರಧ್ವಾಜ್ ಅವರು ರಾಘವ್ ಚಡ್ಡಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಮೋದಿ ಸರ್ಕಾರ ಹಾಗೂ ಬಿಜೆಪಿ ವಿರುದ್ಧದ ಟೀಕಾತ್ಮಕ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣ (ಟ್ವಿಟ್ಟರ್)ದಿಂದ ಡಿಲೀಟ್ ಮಾಡಿದ್ದಾರೆಂದು ಹೇಳಿದ್ದಾರೆ.
ರಾಘವ್ ಚಡ್ಡಾ ಅವರ ಪ್ರೊಫೈಲ್ ನಲ್ಲಿ ಹಿಂದೆ ಮೋದಿ ಮತ್ತು ಬಿಜೆಪಿ ವಿರುದ್ಧ ಕಠಿಣ ಟೀಕೆ ಮಾಡುತ್ತಿದ್ದ ಪೋಸ್ಟ್ಗಳು ಈಗ ಕಾಣುತ್ತಿಲ್ಲ. ಅವುಗಳನ್ನು ಉದ್ದೇಶಪೂರ್ವಕವಾಗಿ ಅಳಿಸಲಾಗಿದೆ ಎಂಬ ಅನುಮಾನ ಇದೆ” ಎಂದು ಹೇಳಿದ್ದಾರೆ.
ಇದೇ ವೇಳೆ ಭಾರದ್ವಾಜ್ ಅವರು ಹಿಂದಿಯಲ್ಲಿ "ಜೋ ಡರ್ ಗಯಾ ಸಮಝೋ ಮರ್ ಗಯಾ" (ಯಾರು ಹೆದರುತ್ತಾರೋ ಅವರು ಸತ್ತಂತೆ) ಎಂಬ ಪದಗಳನ್ನು ಬಳಸುವ ಮೂಲಕ ರಾಘವ್ ಚಡ್ಡಾ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಆದರೆ, ಈ ಆರೋಪಗಳಿಗೆ ಸಂಬಂಧಿಸಿದಂತೆ ರಾಘವ್ ಚಡ್ಡಾ ಅಥವಾ ಪಕ್ಷದ ಕೇಂದ್ರ ನಾಯಕತ್ವದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆಗಳನ್ನು ನೀಡಿಲ್ಲ.
ಆಮ್ ಆದ್ಮಿ ಪಕ್ಷ (ಎಎಪಿ) ಗುರುವಾರ ರಾಜ್ಯಸಭಾ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಸಂಸದ ರಾಘವ್ ಚಡ್ಡಾ ಅವರನ್ನು ಮೇಲ್ಮನೆಯಲ್ಲಿ ಉಪ ನಾಯಕ ಸ್ಥಾನದಿಂದ ತೆಗೆದುಹಾಕುವಂತೆ ಕೋರಿ ಮತ್ತು ಸಂಸದ ಅಶೋಕ್ ಮಿತ್ತಲ್ ಅವರನ್ನು ಅವರ ಬದಲಿಯಾಗಿ ನೇಮಿಸುವಂತೆ ಶಿಫಾರಸು ಮಾಡಿದೆ.
ಈ ಬೆಳವಣಿಗೆಯನ್ನು ಪಕ್ಷವು ತನ್ನ ಆಂತರಿಕ ಪುನರ್ರಚನೆಗಾಗಿ ಎಂದು ಬಣ್ಣಿಸಿತ್ತಾದರೂ ಚಡ್ಡಾ ಈ ಕ್ರಮವನ್ನು ಸಾರ್ವಜನಿಕವಾಗಿ ಪ್ರಶ್ನಿಸಿದ ನಂತರ ಸಮಸ್ಯೆ ಉಲ್ಬಣಗೊಂಡಿತು.
ವೀಡಿಯೊ ಸಂದೇಶವೊಂದರಲ್ಲಿ, ಚಡ್ಡಾ ಅವರು ನಾನು ಏನಾದರೂ ತಪ್ಪು ಮಾಡಿದ್ದೇನೆಯೇ? ಎಂದು ಕೇಳಿದ್ದಲ್ಲದೆ ಸಂಸತ್ತಿನಲ್ಲಿ ತಮಗೆ ಮಾತನಾಡಲು ಅವಕಾಶ ಸಿಕ್ಕಾಗಲೆಲ್ಲಾ ತಾವು ಸಾರ್ವಜನಿಕ ಸಮಸ್ಯೆಗಳನ್ನು ಎತ್ತಿರುವುದಾಗಿ ಹೇಳಿದ್ದಾರೆ.
"ಯಾರಾದರೂ ನನ್ನನ್ನು ಏಕೆ ಮೌನಗೊಳಿಸಲು ಬಯಸುತ್ತಾರೆ? ನನ್ನ ಮೌನ ನನ್ನ ಸೋಲೆಂದು ತಪ್ಪಾಗಿ ಭಾವಿಸಬೇಡಿ" ಎಂದೂ ತಿಳಿಸಿದ್ದಾರೆ.