ಇಂದೋರ್: ಅತ್ಯಾಚಾರ ಅಪರಾಧಿ ಮತ್ತು ಜೈಲಿನಲ್ಲಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಂ ಅವರ ಪುತ್ರ ನಾರಾಯಣ ಸಾಯಿ ಅವರ ಪತ್ನಿ ವಿಚ್ಛೇದನ ನೀಡಲು ಇಂದೋರ್ ಕೌಟುಂಬಿಕ ನ್ಯಾಯಾಲಯ ತೀರ್ಪು ನೀಡಿದೆ ಮತ್ತು ಮೂರು ತಿಂಗಳೊಳಗೆ 2 ಕೋಟಿ ರೂ. ಶಾಶ್ವತ ಜೀವನಾಂಶವನ್ನು ಪಾವತಿಸುವಂತೆ ಆದೇಶಿಸಿದೆ ಎಂದು ಮಹಿಳೆ ಪರ ವಕೀಲರು ಮಂಗಳವಾರ ತಿಳಿಸಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ನಂತರ ನಾರಾಯಣ ಸಾಯಿ ಗುಜರಾತ್ನ ಸೂರತ್ ಜಿಲ್ಲೆಯ ಜೈಲಿನಲ್ಲಿದ್ದಾರೆ. ನ್ಯಾಯಾಲಯದ ಏಪ್ರಿಲ್ 2 ರ ಆದೇಶವು ಅವರ 18 ವರ್ಷದ ದಾಂಪತ್ಯ ಜೀವನವನ್ನು ಕೊನೆಗೊಳಿಸಿತು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣ ಸಾಯಿ ಅವರ ಪತ್ನಿ ಜಾನಕಿ ಹರ್ಪಲಾನಿ ಪರ ವಕೀಲ ಅನುರಾಗಚಂದ್ರ ಗೋಯಲ್, ತಮ್ಮ ಕಕ್ಷಿದಾರರು 2018 ರಲ್ಲಿ ಸ್ಥಳೀಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದ್ದರು. ಅವರ ಪತಿ ವಿರುದ್ಧ ಮಾನಸಿಕ ಕ್ರೌರ್ಯ ಮತ್ತು ಇತರ ಆರೋಪಗಳನ್ನು ಹೊರಿಸಿ 5 ಕೋಟಿ ರೂ. ಜೀವನಾಂಶ ಕೋರಿದ್ದರು ಎಂದು ತಿಳಿಸಿದರು.
ನಾರಾಯಣ ಸಾಯಿ ನ್ಯಾಯಾಲಯದಲ್ಲಿ ಈ ಆರೋಪಗಳನ್ನು ನಿರಾಕರಿಸಿದರೂ, ತಮ್ಮ ಕಕ್ಷಿದಾರರು ಅವರ ಪತಿ ವಿರುದ್ಧ ಸಲ್ಲಿಸಿದ ವಿಚ್ಛೇದನ ಅರ್ಜಿಯಲ್ಲಿ ದೃಢವಾದ ಸಾಕ್ಷ್ಯಗಳನ್ನು ಪ್ರಸ್ತುತಪಡಿಸಿದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ವಿಚ್ಚೇದನ ಅರ್ಜಿಯನ್ನು ಅನುಮೋದಿಸಿದರು.
ಅಲ್ಲದೇ ನಾರಾಯಣ ಸಾಯಿ, ಮೂರು ತಿಂಗಳೊಳಗೆ ಜಾನಕಿಗೆ 2 ಕೋಟಿ ರೂ. ಶಾಶ್ವತ ಜೀವನಾಂಶ ಪಾವತಿಸಲು ಆದೇಶಿಸಿದರು ಎಂದು ವಕೀಲರು ಹೇಳಿದರು. 2008 ರಲ್ಲಿ ವಿವಾಹವಾದ ದಂಪತಿಗೆ ಮಕ್ಕಳಿಲ್ಲ ಎಂದು ಗೋಯಲ್ ಹೇಳಿದರು.