ಚೆನ್ನೈ: ಜಾತ್ಯಾತೀತತೆಯನ್ನು ಉಳಿಸಲು ನಿಜವಾದ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ ಎಂಬ ಟಿವಿಕೆ ಮುಖ್ಯಸ್ಥ ವಿಜಯ್ ಅವರ ಹೇಳಿಕೆಗೆ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಈ ಹೇಳಿಕೆಯನ್ನು ಅಲ್ಲಗಳೆದ ಶಿವಕುಮಾರ್, ರಾಷ್ಟ್ರೀಯವಾಗಿರುವ ಕಾಂಗ್ರೆಸ್ ಡಿಎಂಕೆಯೊಂದಿಗೆ ದೃಢವಾಗಿ ನಿಂತಿದೆ. ತಳಮಟ್ಟದ ಕಾರ್ಯಕರ್ತರು ಟಿವಿಕೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಯಾವುದೇ ಹೇಳಿಕೆಯನ್ನು ತಳ್ಳಿಹಾಕಿದರು. ವಿಜಯ್ ಒಬ್ಬ ಅಪಕ್ವ ರಾಜಕಾರಣಿ. ಅವರಿಗೆ ಪ್ರಬುದ್ಧತೆ ತಿಳಿದಿಲ್ಲ. ಆ ತೃಣಮೂಲ ಕಾಂಗ್ರೆಸ್ (TMC) ಅವರ ಜೊತೆ ಇರಬಹುದು ಎಂದು ನಾನು ಭಾವಿಸುತ್ತೇನೆ ಅಷ್ಟೇ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಲ್ಲ.ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಡಿಎಂಕೆ ಜೊತೆಗಿದೆ... ಮೈತ್ರಿಕೂಟ ಮೂರನೇ ಎರಡರಷ್ಟು ಬಹುಮತ ಹೊಂದಿರುತ್ತದೆ ಎಂದು ಶಿವಕುಮಾರ್ ಹೇಳಿದರು.
ತಿರುಚಿರಾಪಳ್ಳಿ ಪೂರ್ವ ಮತ್ತು ಪೆರಂಬೂರು ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವ ಟಿವಿಕೆ ಮುಖ್ಯಸ್ಥ ವಿಜಯ್, ಡಿಎಂಕೆ ನೇತೃತ್ವದ ಮೈತ್ರಿಯನ್ನು ‘ಹಣದ ಪೆಟ್ಟಿಗೆ ಮೈತ್ರಿ’ ಎಂದು ಕರೆದಿದ್ದು ಇದಕ್ಕೆ ಬಿಜೆಪಿ–ಎಐಎಡಿಎಂಕೆ ಒಕ್ಕೂಟವು ಹೊರತಾಗಿಲ್ಲ ಎಂದು ವರ್ಣಿಸಿದ್ದರು. ಡಿಎಂಕೆ ಮತ್ತು ಬಿಜೆಪಿ ಬಣಗಳೆರಡೂ TVK ಅಧಿಕಾರಕ್ಕೆ ಬರದಂತೆ ತಡೆಯುವ ಗುರಿಯನ್ನು ಹೊಂದಿವೆ ಎಂದು ಆರೋಪಿಸಿದರು.
ಡಿಎಂಕೆ ಮೈತ್ರಿಕೂಟ ಮತ್ತು ಬಿಜೆಪಿ ಮೈತ್ರಿಕೂಟ ಹೊರಗೆ ಪ್ರತ್ಯೇಕವಾಗಿ ಕಾಣಿಸಬಹುದು. ಆದರೆ ಒಳಗೆ ನಿಜವಾಗಿ ನೋಡಿದರೆ, ಇವೆರಡರದ್ದೂ ಒಂದೇ ಮುಖ. ಇವರ ಗುರಿ ವಿಜಯ್ ಆಗಿದ್ದು ನಿಮಗಾಗಿ ಕೆಲಸ ಮಾಡಲು ಮುಂದೆ ಬರಬಾರದು. ನಿಮ್ಮ ಜೊತೆ ನಿಲ್ಲಬಾರದು ಎಂಬುದನ್ನು ಖಚಿತಪಡಿಸಿಕೊಳ್ಳುವುದು. ನಾನು ರಾಜಕೀಯಕ್ಕೆ ಬಂದ ದಿನದಿಂದಲೂ, ಇವರು ನಡೆಸಿದ ಅನೇಕ ಭ್ರಷ್ಟಾಚಾರಗಳನ್ನು ಬಹಿರಂಗಪಡಿಸಿದ್ದೇನೆ. ಅದರ ಪರಿಣಾಮವಾಗಿ, ಇವರು ಹಿಂದಿನಂತೆ ನಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದಕ್ಕೇ ಇವತ್ತು ನನ್ನ ಮೇಲೆ ಕೋಪಗೊಂಡಿದ್ದಾರೆ. ಇವರ ಎಲ್ಲಾ ರಾಜಕೀಯ ಲೆಕ್ಕಾಚಾರಗಳು, ಮೈತ್ರಿ ಲೆಕ್ಕಗಳು ಈಗ ನೆಲಸಮವಾಗಿವೆ ಎಂದು ಅವರು ಹೇಳಿದರು.
ಹಣ ಬಲದ ಮೇಲೆ ನಿಂತಿದ್ದ 'ಕ್ಯಾಶ್ಬಾಕ್ಸ್ ಮೈತ್ರಿ' ಕೂಡ ಈಗ ಕುಸಿದುಬಿದ್ದಿದೆ. ಇಂದಿನ ಪರಿಸ್ಥಿತಿಯಲ್ಲಿ ಮೈತ್ರಿಯೊಳಗಿನ ಪಕ್ಷಗಳೇ ಪರಸ್ಪರರಿಗೆ ಮತ ಹಾಕುತ್ತಾರೆಯೇ ಎಂಬ ಅನುಮಾನ ಉಂಟಾಗಿದೆ. ಇದೇ ಡಿಎಂಕೆ ಮೈತ್ರಿಯ ಸ್ಥಿತಿ. ಬಿಜೆಪಿಯ ನೇತೃತ್ವದ ಮೈತ್ರಿಯ ಪರಿಸ್ಥಿತಿ ಇದಕ್ಕಿಂತಲೂ ಭಿನ್ನವಾಗಿಲ್ಲ. ಅದಕ್ಕೇ ಈ ಎರಡೂ ಮೈತ್ರಿಗಳು ನನ್ನ ಮೇಲೆ ಕೋಪಗೊಂಡಿವೆ. ಆ ಕೋಪಕ್ಕೆ ಕಾರಣವಿದೆ ಎಂದು ಅವರು ಮತ್ತಷ್ಟು ಹೇಳಿದರು.
ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ರಾಜ್ಯದ ಒಟ್ಟು 234 ಕ್ಷೇತ್ರಗಳನ್ನು ಒಳಗೊಂಡಿರುತ್ತದೆ. ಮತ ಎಣಿಕೆ ಮೇ 4ರಂದು ನಡೆಯಲಿದೆ. ತನ್ನ ಪಕ್ಷದ ಮೂಲಕ ಮೊದಲ ಬಾರಿಗೆ ಚುನಾವಣಾ ರಣರಂಗಕ್ಕೆ ಇಳಿಯುತ್ತಿರುವ ವಿಜಯ್, ಆಡಳಿತಾರೂಢ ಡಿಎಂಕೆ ಮೈತ್ರಿ ಮತ್ತು ಎನ್ಡಿಎ ನಡುವೆ ನಡೆಯುವ ಸ್ಪರ್ಧೆಯನ್ನು ತ್ರಿಕೋನ ಸ್ಪರ್ಧೆಯಾಗಿ ಪರಿವರ್ತಿಸಲು ಯತ್ನಿಸುತ್ತಿದ್ದಾರೆ.