ನವದೆಹಲಿ: ಮತ್ತೊಂದು ಪಕ್ಷ ಸೇರುವುದಕ್ಕಿಂತ ಸ್ವಂತ ಪಕ್ಷವನ್ನೇಕೆ ಸ್ಥಾಪಿಸಬಾರದು ಎಂಬ Instagram ಬಳಕೆದಾರರೊಬ್ಬರ ವಿಡಿಯೋ ಪೋಸ್ಟ್ಗೆ ಕುತೂಹಲಕಾರಿ ಆಲೋಚನೆ ಎಂದು ಎಎಪಿ ರಾಜ್ಯಸಭೆ ಸದಸ್ಯ ರಾಘವ್ ಚಡ್ಡಾ ಪ್ರತಿಕ್ರಿಯಿಸಿದ್ದಾರೆ.
ರಾಘವ್ ಚಡ್ಡಾ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪುಸ್ತಕವೊಂದರ ‘ನೆವರ್ ಔಟ್ಶೈನ್ ದ ಮಾಸ್ಟರ್’ ಎಂಬ ಪಠ್ಯದ ಶೀರ್ಷಿಕೆ ಹಾಕಿ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ತಿರುಗೇಟು ನೀಡಿದ್ದರು. ಇದನ್ನು ಹಂಚಿಕೊಂಡಿದ್ದ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ವಿಡಿಯೋ ಪೋಸ್ಟ್ ಮಾಡಿದ್ದರು.
ಕಳೆದ ವಾರ ಚಡ್ಡಾ ಅವರನ್ನು ಆಮ್ ಆದ್ಮಿ ಪಕ್ಷ ರಾಜ್ಯಸಭೆಯ ಉಪನಾಯಕನ ಸ್ಥಾನದಿಂದ ತೆರವು ಮಾಡಿತ್ತು. ಅಲ್ಲದೆ, ಪ್ರಧಾನಿ ಮೋದಿ ವಿರುದ್ಧ ಚಡ್ಡಾ ಪ್ರಶ್ನೆ ಎತ್ತುತ್ತಿಲ್ಲ ಎಂದು ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಚಡ್ಡಾ ‘ನನ್ನ ಧ್ವನಿ ಅಡಗಿಸಲಾಗಿದೆ, ಸೋಲಿಸಲಾಗಿಲ್ಲ’ ಎಂದಿದ್ದರು. ನಾಲ್ಕು ವಿಡಿಯೊ ಮತ್ತು ಎರಡು ಪೋಸ್ಟ್ಗಳನ್ನು ಬಿಡುಗಡೆ ಮಾಡುವ ಮೂಲಕ ‘ಪಕ್ಷದ ನಿರ್ಧಾರದಿಂದ ನಾನು ಸುಮ್ಮನೆ ಕೂರುವುದಿಲ್ಲ’ ಎಂದು ಸಂದೇಶ ರವಾನಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಅಥವಾ ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಎತ್ತುವುದನ್ನು ಚಡ್ಡಾ ತಪ್ಪಿಸುತ್ತಿದ್ದಾರೆ ಎಂದು ಎಎಪಿ ಆರೋಪಿಸಿತ್ತು. ನಾನು ಗದ್ದಲ ಸೃಷ್ಟಿಸಲು ಅಲ್ಲ, ಜನರ ಸಮಸ್ಯೆಗಳ ಬಗ್ಗೆ ದನಿ ಎತ್ತಲು ಸಂಸತ್ತಿನಲ್ಲಿದ್ದೇನೆ ಎಂದು ಹೇಳುವ ಮೂಲಕ ಚಡ್ಡಾ ತಿರುಗೇಟು ನೀಡಿದ್ದರು.