ಕೋಲ್ಕತ್ತಾ: ಪಶ್ಚಿಮ ಬಂಗಾಳದ ಚುನಾವಣಾ ಭಾಷಣಗಳಲ್ಲಿ ಪದೇ ಪದೇ ಒಳನುಸುಳುವಿಕೆ ವಿಷಯವನ್ನು ಎತ್ತುವ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಟಿಎಂಸಿಯ ಹಿರಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಶುಕ್ರವಾರ ತಿರುಗೇಟು ನೀಡಿದ್ದಾರೆ. ಕಳೆದ ವರ್ಷ ಪಹಲ್ಗಾಮ್ ಮತ್ತು ನವದೆಹಲಿಯಲ್ಲಿ ನಡೆದ ಭಯೋತ್ಪಾದಕ ದಾಳಿಗಳನ್ನು ತಡೆಯುವಲ್ಲಿ ಕೇಂದ್ರದ ಪಾತ್ರವನ್ನು ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾನರ್ಜಿ, ಬಿಜೆಪಿ ನೇತೃತ್ವದ ಕೇಂದ್ರದಿಂದ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ನುಸುಳುಕೋರರು ಎಂದು ಪರಿಗಣಿಸಬೇಕೇ ಎಂದು ಸ್ಪಷ್ಟಪಡಿಸುವಂತೆ ಶಾ ಅವರನ್ನು ಕೇಳಿದರು.
ಒಳನುಸುಳುಕೋರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಕುರಿತು ಅಮಿತ್ ಶಾ ಅವರ ಟೀಕೆಗಳನ್ನು ಉಲ್ಲೇಖಿಸಿದ ಅಭಿಷೇಕ್ ಬ್ಯಾನರ್ಜಿ, ಕೇಂದ್ರ ಸಚಿವರು ಪದೇ ಪದೇ ಅದೇ ರಾಗ ಹಾಡುತ್ತಿದ್ದಾರೆ. ಈ ವಿಷಯದ ಬಗ್ಗೆ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದರು.
ನಾವು ಒಳನುಸುಳುವಿಕೆಯ ಬಗ್ಗೆ ಮಾತನಾಡಿದರೆ, ಕಳೆದ ಒಂದೂವರೆ ವರ್ಷಗಳಿಂದ ಭಾರತದಲ್ಲಿ ಉಳಿದುಕೊಂಡಿರುವ ಪದಚ್ಯುತ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಸ್ಥಿತಿ ಏನು? ಅವರು ಬಾಂಗ್ಲಾದೇಶಿ ನುಸುಳುಕೋರರೇ? ಎಂದು ಪ್ರಶ್ನಿಸಿದರು.
26 ಭಾರತೀಯರನ್ನು ಕೊಂದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದನಾ ದಾಳಿಯನ್ನು ತಡೆಯಲು ಅಮಿತ್ ಶಾ ಹೇಗೆ ವಿಫಲರಾದರು? ಉಗ್ರರು ದೆಹಲಿಗೆ ನುಸುಳಿ 10 ಜನರನ್ನು ಹೇಗೆ ಕೊಂದರು? ಅವರಿಗೆ ಭದ್ರತೆ ನೀಡಲು ಶಾ ಏಕೆ ವಿಫಲರಾದರು? ಎಂದು ವಾಗ್ದಾಳಿ ನಡೆಸಿದರು.
ಕಟ್ ಮನಿ ಕಲ್ಚರ್ ಬಗ್ಗೆ ಶ್ವೇತಪತ್ರ ಹೊರಡಿಸುವುದಾಗಿ ಷಾ ನೀಡಿದ ಭರವಸೆಯ ವಿರುದ್ಧ ವಾಗ್ದಾಳಿ ನಡೆಸಿದ ಅಭಿಷೇಕ್ ಬ್ಯಾನರ್ಜಿ, MGNNREGA ನಂತಹ ಕೇಂದ್ರ ಯೋಜನೆಯಡಿ ಬಂಗಾಳಕ್ಕೆ ಕಳುಹಿಸಲಾದ ಹಣದ ಮೊತ್ತದ ಬಗ್ಗೆ ಶ್ವೇತಪತ್ರ ಪ್ರಕಟಿಸಬೇಕು ಎಂದರು. ಮಾರ್ಚ್ 14, 2024 ರಂದು ರಾಜ್ಯಕ್ಕೆ ಬಿಡುಗಡೆಯಾದ ಹಣದ ಕುರಿತು ಕೇಂದ್ರ ಸರ್ಕಾರ ಶ್ವೇತಪತ್ರವನ್ನು ಎಕ್ಸ್ ಪೋಸ್ಟ್ನಲ್ಲಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದೆ ಆದರೆ ಇದುವರೆಗೆ ಉತ್ತರ ಬಂದಿಲ್ಲ ಎಂದು ಟಿಎಂಸಿ ನಾಯಕ ಹೇಳಿದರು.