ನವದೆಹಲಿ: ಅಕ್ರಮ ನಗದು ಸಂಗ್ರಹ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ರಾಷ್ಟ್ರಪತಿಗಳಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.
ಏಪ್ರಿಲ್.9ರಂದು ರಾಜೀನಾಮೆ ಸಲ್ಲಿಸಿರುವ ಅವರು, ತಕ್ಷಣದಿಂದಲೇ ಜಾರಿಗೆ ಬರುವಂತೆ ತಮ್ಮ ಹುದ್ದೆಯಿಂದ ಕೆಳಗಿಳಿಯುತ್ತಿರುವುದಾಗಿ ಹೇಳಿದ್ದಾರೆ. “ಆಳವಾದ ವಿಷಾದ”ದೊಂದಿಗೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದು, ರಾಜೀನಾಮೆಗೆ ಕಾರಣಗಳನ್ನು ವಿವರಿಸಿಲ್ಲ ಎಂದು ತಿಳಿದುಬಂದಿದೆ.
ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುವುದು ಗೌರವದ ವಿಷಯವಾಗಿತ್ತು ಎಂದು ಹೇಳಿದ್ದು, ರಾಜೀನಾಮೆ ಪ್ರತಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೂ ಸಲ್ಲಿಸಿದ್ದಾರೆ.
ದೆಹಲಿ ಹೈಕೋರ್ಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಅವರ ಅಧಿಕೃತ ನಿವಾಸದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿದ್ದ ಪ್ರಕರಣ ಭಾರೀ ಸಂಚಲನಕ್ಕೆ ಕಾರಣವಾಗಿತ್ತು.
ಈ ಹಣ ಪತ್ತೆಯಾದ ನಂತರ ಆರಂಭವಾದ ತನಿಖೆ ಮತ್ತು ಆಡಳಿತಾತ್ಮಕ ಕ್ರಮಗಳ ಹಿನ್ನೆಲೆಯಲ್ಲಿ ಅವರು ದೆಹಲಿ ಹೈಕೋರ್ಟ್ನಿಂದ ಅಲಹಾಬಾದ್ ಹೈಕೋರ್ಟ್ಗೆ ವರ್ಗಾಯಿಸಲ್ಪಟ್ಟಿದ್ದರು.
ತನಿಖೆಯ ವೇಳೆ, ತಮ್ಮ ವಿರುದ್ಧದ ಆರೋಪಗಳನ್ನು ನ್ಯಾಯಮೂರ್ತಿ ವರ್ಮಾ ತಳ್ಳಿಹಾಕಿದ್ದು, ಹಣವು ತಮ್ಮದಾಗಿಲ್ಲ ಮತ್ತು ಘಟನೆ ನಡೆದ ವೇಳೆ ತಾವು ಸ್ಥಳದಲ್ಲಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಪ್ರಕರಣದ ಗಂಭೀರತೆಯನ್ನು ಗಮನಿಸಿ, ಲೋಕಸಭಾ ಸ್ಪೀಕರ್ ಮಹಾಭಿಯೋಗ ಪ್ರಕ್ರಿಯೆ ಆರಂಭಿಸುವ ಸಲುವಾಗಿ ತನಿಖಾ ಸಮಿತಿಯನ್ನು ರಚಿಸಿದ್ದರು. ಇದರ ಮಧ್ಯೆ ತಮ್ಮ ವಿರುದ್ಧದ ತನಿಖಾ ಕ್ರಮವನ್ನು ಪ್ರಶ್ನಿಸಿ ನ್ಯಾಯಮೂರ್ತಿ ವರ್ಮಾ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಸುಪ್ರೀಂ ಕೋರ್ಟ್ ಅವರ ಮನವಿಯನ್ನು ತಿರಸ್ಕರಿಸಿ ತನಿಖೆಗೆ ತಡೆ ನೀಡಲು ನಿರಾಕರಿಸಿತ್ತು.
ಪ್ರಸ್ತುತ, ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ತಮ್ಮ ವಿರುದ್ಧ ಕೇಳಿಬಂದಿರುವ ಈ ನಗದು ಪತ್ತೆ ಆರೋಪಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗದ ಆಂತರಿಕ ವಿಚಾರಣೆಯನ್ನು (ಇನ್-ಹೌಸ್ ಎನ್ಕ್ವೈರಿ) ಎದುರಿಸುತ್ತಿದ್ದಾರೆ. ಈ ತನಿಖೆಯು ಪ್ರಗತಿಯಲ್ಲಿರುವಾಗಲೇ ಇದೀಗ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯುವ ನಿರ್ಧಾರ ಕೈಗೊಂಡಿದ್ದಾರೆ.
ಈ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ, ಸಂಸತ್ತಿನಲ್ಲಿ ಅವರ ವಿರುದ್ಧ ವಜಾ ಪ್ರಕ್ರಿಯೆ (ಮಹಾಭಿಯೋಗ) ಪ್ರಾರಂಭವಾಗುವ ಸಾಧ್ಯತೆಗಳೂ ದಟ್ಟವಾಗಿದ್ದವು. ಸಂಭಾವ್ಯ ಸಂಸದೀಯ ಕ್ರಮಗಳು ಹಾಗೂ ಮುಂದುವರಿದ ಆಂತರಿಕ ವಿಚಾರಣೆಯ ಪ್ರಕ್ರಿಯೆಗಳ ನಡುವೆಯೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಹಿನ್ನೆಲೆ ಅವರ ವಿರುದ್ಧದ ಮಹಾಭಿಯೋಗ ಪ್ರಕ್ರಿಯೆಯು ಅಂತ್ಯಗೊಳ್ಳುವ ಸಾಧ್ಯತೆಯಿದೆ.