ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ ನಿಮಿತ್ತ ಟಿವಿಕೆ ಮುಖ್ಯಸ್ಥ ಹಾಗೂ ನಟ ವಿಜಯ್ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಇದರ ನಡುವೆಯೇ ಅಲ್ಲಲ್ಲಿ ಸಣ್ಣಪುಟ್ಟ ದುರಂತಗಳು ಸಂಭವಿಸುತ್ತಲೇ ಇವೆ.
ತಮಿಳಗಾ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಮತ್ತು ನಟ-ರಾಜಕಾರಣಿ ವಿಜಯ್ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಮತ್ತೊಂದು ದುರಂತ ಸಂಭವಿಸಿದ್ದು, ಶುಕ್ರವಾರ ತಮಿಳುನಾಡಿನ ಶಿವಗಂಗಾದಲ್ಲಿ ನಡೆದ ರೋಡ್ ಶೋ ವೇಳೆ ಮೋಟಾರ್ ಸೈಕಲ್ನಲ್ಲಿದ್ದ ಯುವಕನೊಬ್ಬ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ.
ಈ ಹಿಂದೆಯೂ ಕೂಡ ತೂತುಕುಡಿಯಲ್ಲಿ ವಿಜಯ್ ರೋಡ್ ಶೋ ನಡೆಸುತ್ತಿದ್ದ ವೇಳೆ ಅವರ ಹಿಂದೆಯೇ ನೂರಾರು ಯುವಕರು ಬೈಕ್ ಗಳಲ್ಲಿ ಹಿಂಬಾಲಿಸುತ್ತಿದ್ದಾಗ ಒಂದು ಬೈಕ್ ನಿಯಂತ್ರಣ ತಪ್ಪಿ ಬಿದ್ದಿತ್ತು. ಈ ವೇಳೆ ಅದರ ಹಿಂದೆ ಬರುತ್ತಿದ್ದ ಹಲವು ಬೈಕ್ ಗಳು ಕೂಡ ಅಪಘಾತಕ್ಕೀಡಾಗಿದ್ದವು. ಇದೀಗ ಅಂತಹುದೇ ಮತ್ತೊಂದು ದುರ್ಘಟನೆ ಸಂಭವಿಸಿದೆ.
ಶಿವಗಂಗಾ ಹೆದ್ದಾರಿಯಲ್ಲಿ ನಟ ವಿಜಯ್ ಅವರ ವಾಹನಗಳು ತೆರಳುತ್ತಿದ್ದಾಗ ಕೆಲ ಯುವಕರ ಗುಂಪು ತಮ್ಮ ಬೈಕ್ ಗಳಲ್ಲಿ ಅವರನ್ನು ಹಿಂಬಾಲಿಸಿದ್ದು, ಈ ವೇಳೆ ಓರ್ವ ಯುವಕ ಚಲಿಸುತ್ತಿದ್ದ ಬೈಕ್ ನಿಂದಲೇ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಬೈಕ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದಿದ್ದೆ. ಈ ಅಪಘಾತದಲ್ಲಿ ಚಾಲಕನಿಗೆ ಗಂಭೀರ ಪೆಟ್ಟಾಗಿದೆ ಎಂದು ಹೇಳಲಾಗಿದೆ.
ವಿಡಿಯೋ ವೈರಲ್
ಇನ್ನು ನಟ ವಿಜಯ್ ಪ್ರಚಾರ ಕಾರ್ಯವನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದ ಅವರ ತಂಡ ವಿಡಿಯೋ ಚಿತ್ರೀಕರಿಸುತ್ತಿದ್ದಾಗಲೇ ಈ ದುರ್ಘಟನೆ ಸಂಭವಿಸಿದೆ. ಅಲ್ಲದೆ ಇದು ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಅಂತೆಯೇ ಈ ವಿಡಿಯೋ ಜನಸಂದಣಿಯ ನಿರ್ವಹಣೆಯ ಬಗ್ಗೆ ಹೊಸ ಕಳವಳವನ್ನು ಹುಟ್ಟುಹಾಕಿದೆ.
ಕರೂರ್ ಕಾಲ್ತುಳಿತ
ಇನ್ನು ನಟ ವಿಜಯ್ ಅವರ ಪ್ರಚಾರ ಕಾರ್ಯಕ್ರಮಗಳಲ್ಲಿ ಅಪಘಾತ ಇದೇ ಮೊದಲೇನಲ್ಲ.. ಈ ಹಿಂದೆ ಅಂದರೆ ಕಳೆದ ವರ್ಷ ಕರೂರಿನಲ್ಲೂ ಇದಕ್ಕಿಂತಲೂ ದೊಡ್ಡದಾದ ಕಾಲ್ತುಳಿತ ದುರಂತ ಸಂಭವಿಸಿತ್ತು. ಸೆಪ್ಟೆಂಬರ್ನಲ್ಲಿ, ಕರೂರ್ ಜಿಲ್ಲೆಯಲ್ಲಿ ವಿಜಯ್ ಅವರ ರ್ಯಾಲಿಯೊಂದರಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 41 ಜನರು ಪ್ರಾಣ ಕಳೆದುಕೊಂಡಿದ್ದರು.