ಮಥುರಾ: ವೃಂದಾವನದ ಯಮುನಾ ನದಿಯಲ್ಲಿ ಶುಕ್ರವಾರ ಮಧ್ಯಾಹ್ನ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ದೋಣಿ ಮುಳುಗಡೆಯಾಗಿದ್ದು, ಕನಿಷ್ಠ ಆರು ಜನ ಮೃತಪಟ್ಟಿದ್ದಾರೆ ಮತ್ತು ಹಲವಾರು ಜನ ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ಪ್ರಕಾಶ್ ಸಿಂಗ್ ಅವರು, ಈ ಸಾವುನೋವುಗಳನ್ನು ದೃಢಪಡಿಸಿದ್ದು, ಹಡಗಿನಲ್ಲಿದ್ದ ಎಲ್ಲಾ ಪ್ರವಾಸಿಗರು ಪಂಜಾಬ್ ಮೂಲದವರು ಎಂದು ಹೇಳಿದ್ದಾರೆ.
"ಆರು ಶವಗಳನ್ನು ಹೊರತೆಗೆಯಲಾಗಿದೆ. ಇಲ್ಲಿಯವರೆಗೆ ಹದಿನಾರರಿಂದ ಹದಿನೇಳು ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಕಾಣೆಯಾದವರನ್ನು ಪತ್ತೆಹಚ್ಚುವ ಪ್ರಯತ್ನಗಳು ಮುಂದುವರೆದಿವೆ" ಎಂದು ಅವರು ತಿಳಿಸಿದ್ದಾರೆ.
ದೋಣಿಯಲ್ಲಿ ಎರಡು ಡಜನ್ಗೂ ಹೆಚ್ಚು ಪ್ರವಾಸಿಗರಿದ್ದರು ಎಂದು ಹೇಳಲಾಗಿದ್ದು, ಇಲ್ಲಿಯವರೆಗೆ ಸುಮಾರು 15 ಜನರನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ(SDRF) ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ಹಾಗೂ ಸುಮಾರು 50 ಸ್ಥಳೀಯ ಡೈವರ್ಗಳ ತಂಡಗಳೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಬಿರುಗಾಳಿಯಿಂದಾಗಿ ದೋಣಿ ನದಿಯ ಮಧ್ಯದಲ್ಲಿ ತೂಗಾಡಲು ಪ್ರಾರಂಭಿಸಿತು ಮತ್ತು ಅದರ ವೇಗ ಹೆಚ್ಚಾಗಿ ಅದು ಪಾಂಟೂನ್ ಸೇತುವೆಗೆ ಡಿಕ್ಕಿ ಹೊಡೆದು ಮುಳುಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.