ಅಜ್ಮೀರ್: ಅಯೋಧ್ಯೆಯ ರಾಮ ಮಂದಿರದಲ್ಲಿ, ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಸ್ತಾವಿತ "ಸಾಂಕೇತಿಕ ಜ್ಯೋತಿ(ಜ್ವಾಲೆ) ಸ್ಮಾರಕ"ದ ವರದಿಗಳಿಗೆ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಸೋಮವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಪರಿಕಲ್ಪನೆಯು "ಹಿಂದೂ ಧಾರ್ಮಿಕ ಸಂಪ್ರದಾಯಗಳಿಗೆ ವಿರುದ್ಧ" ಎಂದು ಕಿಡಿ ಕಾರಿದ್ದಾರೆ.
ಸ್ವಾಮಿ ಅವಿಮುಕ್ತೇಶ್ವರಾನಂದ್ ಅವರು ಈ ವಿಷಯದ ಬಗ್ಗೆ ರಾಮ ಮಂದಿರದ ದೇವಾಲಯ ಟ್ರಸ್ಟ್ನಿಂದ ಸ್ಪಷ್ಟೀಕರಣ ಕೇಳಿದ್ದಾರೆ.
ಇಂದು ಅಜ್ಮೀರ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಂಕರಾಚಾರ್ಯರು, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ಮಾಧ್ಯಮ ವರದಿಗಳು ಮತ್ತು ದೃಶ್ಯಗಳು, ರಾಮ ಮಂದಿರದ ಸ್ಥಳದಲ್ಲಿ "ಜ್ಯೋತಿ"ಯನ್ನು ಪ್ರತಿನಿಧಿಸುವ ಸಾಂಕೇತಿಕ ರಚನೆಯನ್ನು ಸ್ಥಾಪಿಸಲಾಗುತ್ತಿದೆ ಎಂದು ಸೂಚಿಸುತ್ತಿವೆ ಎಂದರು.
"ಅದು ಹಿತ್ತಾಳೆಯಿಂದ ಮಾಡಲ್ಪಟ್ಟಿರಲಿ ಅಥವಾ ಯಾವುದೇ ಇತರ ವಸ್ತುವಿನಿಂದ ಮಾಡಲ್ಪಟ್ಟಿರಲಿ, ನಮ್ಮ ಸಂಪ್ರದಾಯದಲ್ಲಿ, ಧರ್ಮಗ್ರಂಥಗಳಲ್ಲಿ ಸೂಚಿಸಿದಂತೆ ತುಪ್ಪ ಅಥವಾ ಎಣ್ಣೆಯ ನಿಜವಾದ ಜ್ವಾಲೆಯನ್ನು ಬೆಳಗಿಸುವ ಮೂಲಕ ಸ್ಥಳದ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲಾಗುತ್ತದೆ. ಆದರೆ ಜ್ಯೋತಿಯ ಸಾಂಕೇತಿಕ ಸ್ಮಾರಕವನ್ನು ರಚಿಸಿ ಅಲ್ಲಿ ಇಡುವುದು ಹಿಂದೂ ಧರ್ಮದ ವ್ಯವಸ್ಥೆಗೆ ಅನುಗುಣವಾಗಿಲ್ಲ" ಎಂದು ಅವರು ಹೇಳಿದರು.
"ಅಂತಹ ರಚನೆಯನ್ನು ಅಲ್ಲಿ ಇರಿಸಿದ್ದರೆ, ಅದು ಧಾರ್ಮಿಕ ನಿಯಮಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿರುತ್ತದೆ ಮತ್ತು ಅದನ್ನು ತಕ್ಷಣವೇ ತೆಗೆದುಹಾಕಬೇಕು. ಆ ಸ್ಥಳದ ಪಾವಿತ್ರ್ಯವನ್ನು ಸಂರಕ್ಷಿಸಬೇಕಾದರೆ, ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಿರುವಂತೆ ನಿಜವಾದ ಜ್ವಾಲೆಯನ್ನು ಸ್ಥಾಪಿಸಬೇಕು" ಎಂದು ಅವರು ಹೇಳಿದರು.