ಚೆನ್ನೈ: ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಯಿಂದ ರಾಜ್ಯಗಳ ಹಿತಾಸಕ್ತಿಗೆ ಹಾನಿಯಾದರೆ ಅಥವಾ ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯದ ಮೇಲೆ ಪರಿಣಾಮ ಬೀರಿದರೆ ಬೃಹತ್ ಆಂದೋಲನ ಆರಂಭಿಸುತ್ತೇವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಏಪ್ರಿಲ್ 16 ರಂದು ಪ್ರಾರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನವು ನಾರಿ ಶಕ್ತಿ ವಂದನ್ ಅಧಿನಿಯಮ್, 2023ಗೆ ತಿದ್ದುಪಡಿಗಳ ಕುರಿತು ಚರ್ಚಿಸಲು ಮತ್ತು ಸಂಸತ್ತಿನಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿ ಜಾರಿಗೆ ತರಲು ಪ್ರಸ್ತಾವಿತ ಡಿಲಿಮಿಟೇಶನ್ ಮಸೂದೆಗೆ ಮುಂಚಿತವಾಗಿ ತಮಿಳುನಾಡು ಸಿಎಂ ಈ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ X ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋ ಸಂದೇಶದಲ್ಲಿ, ಕೇಂದ್ರ ಸರ್ಕಾರ ಡಿಲಿಮಿಟೇಶನ್ ಕುರಿತು ಸಾಂವಿಧಾನಿಕ ತಿದ್ದುಪಡಿ ಮೂಲಕ ಬುಲ್ಡೋಜರ್ ಮಾಡಲು ಉದ್ದೇಶಿಸಿದೆ ಎಂದು ಸ್ಟಾಲಿನ್ ಹೇಳಿದ್ದಾರೆ. ಅಲ್ಲದೆ ವಿಶೇಷ ಅಧಿವೇಶನದ ಸಮಯವನ್ನು ಸಹ ಪ್ರಶ್ನಿಸಿದ್ದಾರೆ.
"ಈ ವಿಶೇಷ ಅಧಿವೇಶನವನ್ನು ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಚುನಾವಣೆಗಳ ಮಧ್ಯೆ ಬಲವಂತವಾಗಿ ಕರೆಯಲಾಗಿದೆ" ಎಂದು ಸ್ಟಾಲಿನ್ ಕಿಡಿ ಕಾರಿದ್ದಾರೆ.
"ಆರಂಭದಿಂದಲೂ ನಾವು ಇದರ ವಿರುದ್ಧ ನಿರಂತರವಾಗಿ ಎಚ್ಚರಿಕೆ ನೀಡಿದ್ದೇವೆ. ನಾವು ಜನರಲ್ಲಿ ಜಾಗೃತಿ ಮೂಡಿಸಿದ್ದೇವೆ. ತಮಿಳುನಾಡಿನಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ, ನಾವು ಪರಿಣಾಮ ಬೀರುವ ರಾಜ್ಯಗಳ ಮುಖ್ಯಮಂತ್ರಿಗಳನ್ನು ಮತ್ತು ಪ್ರಮುಖ ರಾಜಕೀಯ ಪಕ್ಷಗಳ ನಾಯಕರನ್ನು ಒಟ್ಟುಗೂಡಿಸಿ, ಚೆನ್ನೈನಲ್ಲಿ ಜಂಟಿ ಕ್ರಿಯಾ ಸಮಿತಿ ಸಭೆಯನ್ನು ಕರೆದಿದ್ದೇವೆ" ಎಂದು ಅವರು ಹೇಳಿದ್ದಾರೆ.
"ವಿವಿಧ ಪಕ್ಷಗಳ ಸಂಸತ್ ಸದಸ್ಯರು ಪ್ರಧಾನಿಯನ್ನು ಖುದ್ದಾಗಿ ಭೇಟಿ ಮಾಡಿ ನಮ್ಮ ಕಳವಳಗಳನ್ನು ಮಂಡಿಸಲು ನಾವು ಸಮಯ ಕೋರಿದ್ದೇವೆ. ಆದರೆ ಅದನ್ನೂ ನಿರಾಕರಿಸಲಾಯಿತು. ಡಿಲಿಮಿಟೇಶನ್ ಜಾರಿಗೆ ತರುವ ಈ ಆತುರದ ಪ್ರಯತ್ನವು ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವದ ಮೇಲಿನ ಸ್ಪಷ್ಟ ದಾಳಿಯಾಗಿದೆ. ಅದಕ್ಕಿಂತ ಹೆಚ್ಚಾಗಿ, ಇದು ರಾಜ್ಯಗಳ ಹಕ್ಕುಗಳ ಮೇಲಿನ ನೇರ ದಾಳಿಯಾಗಿದೆ. ಈ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಹೇಗೆ ಕೈಗೊಳ್ಳಲಾಗುವುದು ಎಂದು ನಮಗೆ ತಿಳಿಸಿಲ್ಲ" ಎಂದು ಸ್ಟಾಲಿನ್ ಆರೋಪಿಸಿದ್ದಾರೆ.