ನವದೆಹಲಿ: ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸದೆ ಇರುವ ಮೂಲಕ ವಿರೋಧ ಪಕ್ಷಗಳು ತಪ್ಪು ಮಾಡಿದ್ದು, ತಕ್ಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟಕ್ಕೆ ತಿಳಿಸಿದ್ದಾರೆ.
ವಿಶೇಷ ಸಂಸತ್ ಅಧಿವೇಶನದಲ್ಲಿ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಹೆಚ್ಚಿಸುವ ಗುರಿ ಹೊಂದಿದ್ದ ಮಸೂದೆ ಸೋಲಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಸಂವಿಧಾನ (131 ನೇ ತಿದ್ದುಪಡಿ) ಮಸೂದೆಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಸ್ಥಾನಗಳನ್ನು ಮೀಸಲಿಡುವ ಗುರಿಯನ್ನು ಹೊಂದಿತ್ತು. ಆದರೆ ಲೋಕಸಭೆಯಲ್ಲಿ ಅಂಗೀಕರಿಸಲು ಮೂರನೇ ಎರಡರಷ್ಟು ಬಹುಮತ ಪಡೆಯುವಲ್ಲಿ ವಿಫಲವಾಯಿತು.
ಗುರುವಾರ ಪ್ರಾರಂಭವಾಗಿ ಶುಕ್ರವಾರ ಮಧ್ಯರಾತ್ರಿಯವರೆಗೆ ನಡೆದ ಬಿಸಿ ಚರ್ಚೆಯ ನಂತರ ಮಸೂದೆಯು ಪರವಾಗಿ ಕೇವಲ 298 ಮತಗಳು ಬಿದ್ದವು. ಆದರೆ 230 ಸಂಸದರು ಅದನ್ನು ವಿರೋಧಿಸಿದರು.
ಈ ಕುರಿತು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮಹಿಳಾ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದ ವಿರೋಧ ಪಕ್ಷಗಳು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ದೇಶದ ಮಹಿಳೆಯರಿಗೆ ಉತ್ತರಿಸಬೇಕು ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ವಿರೋಧ ಪಕ್ಷಗಳು ದೇಶದ ಮಹಿಳೆಯರನ್ನು ನಿರಾಸೆಗೊಳಿಸಿದ್ದಾರೆ. ಈ ಸಂದೇಶವನ್ನು ಪ್ರತಿಯೊಬ್ಬ ವ್ಯಕ್ತಿಗೂ, ಪ್ರತಿಯೊಂದು ಹಳ್ಳಿಗೂ ತಲುಪಿಸಬೇಕು" ಎಂದು ಸಂಪುಟದ ಸಹೋದ್ಯೋಗಿಗಳಿಗೆ ಸೂಚಿಸಿರುವುದಾಗಿ ತಿಳಿದುಬಂದಿದೆ.
ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಮಹಿಳಾ ಮೀಸಲಾತಿಯನ್ನು ಬೆಂಬಲಿಸುವುದಾಗಿ ಈ ಹಿಂದೆ ಹೇಳಿದ್ದವು. ಆದರೆ ಸರ್ಕಾರದ ಕಾರ್ಯತಂತ್ರ ರಾಜಕೀಯ ಪ್ರೇರಿತವಾಗಿದೆ ಎಂಬುದನ್ನು ಗುರುತಿಸಿದ್ದವು. ಒಮ್ಮೆ ಕ್ಷೇತ್ರ ಪುನರ್ ವಿಂಗಡಣೆ ನಡೆದರೆ, ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯ ಕಡಿಮೆಯಾಗಬಹುದು ಎಂಬುದು ವಿರೋಧ ಪಕ್ಷಗಳ ಕಳವಳವಾಗಿದೆ. ಆದಾಗ್ಯೂ, ಅಂತಹ ಕಳವಳಗಳನ್ನು ನಿವಾರಿಸಲು ಪ್ರಧಾನಿ ಮೋದಿ ಪ್ರಯತ್ನಿಸಿದ್ದರು. ಲೋಕಸಭೆಯಲ್ಲಿ ಸ್ಥಾನಗಳ ಸಂಖ್ಯೆ 543 ರಿಂದ 816 ಕ್ಕೆ ಏರಿದ ನಂತರ ಯಾವುದೇ ದಕ್ಷಿಣ ರಾಜ್ಯಕ್ಕೆ ಯಾವುದೇ ಅನ್ಯಾಯವಾಗುವುದಿಲ್ಲ ಎಂದು ಅವರು ವೈಯಕ್ತಿಕ ಭರವಸೆ ನೀಡಿದ್ದರು.
ಮಹಿಳೆಯರಿಗೆ ಮೀಸಲಾತಿ ನೀಡುವ ಈ ಪ್ರಮುಖ ಅವಕಾಶವನ್ನು ನಾವೆಲ್ಲರೂ ಕಳೆದುಕೊಳ್ಳಬಾರದು. ಇದನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬೇಡಿ, ಇದು ರಾಷ್ಟ್ರೀಯ ಹಿತಾಸಕ್ತಿಯಲ್ಲಿದೆ ಎಂದು ಪ್ರಧಾನಿ ಮೋದಿ ಮನವಿ ಮಾಡಿಕೊಂಡಿದ್ದರು. ದಕ್ಷಿಣ ರಾಜ್ಯಗಳ ಪ್ರಸ್ತುತ ಪ್ರಾತಿನಿಧ್ಯವನ್ನು ರಕ್ಷಿಸಲಾಗುವುದು ಅಥವಾ ಸ್ವಲ್ಪ ಹೆಚ್ಚಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಸಂಸತ್ತಿಗೆ ಭರವಸೆ ನೀಡಿದ್ದರು.