ಮುಂಬೈ: ವೊರ್ಲಿ ಪ್ರದೇಶದಲ್ಲಿ ಗುರುವಾರ ನಡೆದ ರಾಜಕೀಯ ರ್ಯಾಲಿಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ದಟ್ಟಣೆಯಲ್ಲಿ ಸಿಲುಕಿಕೊಂಡ ಮಹಿಳೆಯೊಬ್ಬರು ಮಹಾರಾಷ್ಟ್ರ ಜಲಸಂಪನ್ಮೂಲ ಖಾತೆ ಸಚಿವ ಗಿರೀಶ್ ಮಹಾಜನ್ ಹಾಗೂ ಸ್ಥಳೀಯ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದೆ.
ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿಯ ವೇಳೆ ಮಹಿಳೆ ಸಚಿವರ ಜತೆ ನೇರ ಸಂಘರ್ಷಕ್ಕೆ ಇಳಿದರು. ಮಹಾ ವಿಕಾಸ ಅಗಾಡಿ ಮೈತ್ರಿಕೂಟದ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳನ್ನು ಗುರಿಯಾಗಿಸಿ ಈ ಪ್ರತಿಭಟನೆ ಆಯೋಜಿಸಲಾಗಿತ್ತು. ಮುಂಬೈನ ವೊರ್ಲಿ ಪ್ರದೇಶದಲ್ಲಿ ಸಚಿವ ಗಿರೀಶ್ ಮಹಾಜನ್ ನೇತೃತ್ವದಲ್ಲಿ ಮಂಗಳವಾರ ರ್ಯಾಲಿ ನಡೆಯುತ್ತಿತ್ತು.
ರ್ಯಾಲಿಯಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ರೊಚ್ಚಿಗೆದ್ದ ಮಹಿಳೆ, ಸಚಿವರನ್ನು ನಿಲ್ಲಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆಕ್ರೋಶಗೊಂಡ ಮಹಿಳೆ ಸಚಿವರನ್ನು ನಿಲ್ಲಿಸಿ, ನಿನ್ನಿಂದಲೇ ಟ್ರಾಫಿಕ್ ಜ್ಯಾಮ್ ಗೆಟ್ಔಟ್ ಎಂದು ಬೈದಿದ್ದಾರೆ.
‘ಗೆಟ್ಔಟ್ ಫ್ರಂ ಹಿಯರ್.. ನೀವು ಟ್ರಾಫಿಕ್ ಜಾಮ್ ಉಂಟುಮಾಡುತ್ತಿದ್ದೀರಿ’ಎಂದು ಮಹಿಳೆ ಜೋರಾಗಿ ಕೂಗಾಡಿದ್ದಾರೆ. ಈ ರೀತಿ ವಾಹನ ಸಂಚಾರಕ್ಕೆ ಅಡ್ಡಿಪಡಿಸುವ ಬದಲು ಹತ್ತಿರದ ತೆರೆದ ಮೈದಾನದಲ್ಲಿ ರ್ಯಾಲಿ ನಡೆಸಲು ಸಾಧ್ಯವಿಲ್ಲವೇ’ಎಂದು ತಿಳಿ ಹೇಳಿದ್ದಾರೆ.
ಮಹಿಳೆಯನ್ನು ಮಹಾಜನ್ ಸಮಾಧಾನಪಡಿಸಲು ಯತ್ನಿಸಿದ್ದಾರೆ. ಇದಕ್ಕೆ ಸೊಪ್ಪು ಹಾಕದ ಮಹಿಳೆ, ನಿಮಗೆ ಅರ್ಥವಾಗಲಿಲ್ಲವೇ? ವಾಟ್ಸ್ ವ್ರಾಂಗ್ ವಿಥ್ ಯು? ನೂರಾರು ಜನರು ಕಾಯುತ್ತಿದ್ದಾರೆ ಎಂದು ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ಮಧ್ಯಪ್ರವೇಶಿಸಿದಾಗ, ಮಾತನಾಡಲು ನಿರಾಕರಿಸಿದ ಮಹಿಳೆ ಯಾರೂ ತನ್ನೊಂದಿಗೆ ಮಾತನಾಡಬಾರದು ಎಂದು ಒತ್ತಾಯಿಸಿದ್ದಾರೆ.
ಮಗುವನ್ನು ಶಾಲೆಯಿಂದ ಕರೆತರಲು ಕಾರು ಚಾಲನೆ ಮಾಡಿಕೊಂಡು ಹೊರಟ ಮಹಿಳೆಯೊಬ್ಬರು ರ್ಯಾಲಿಯಿಂದ ಉಂಟಾದ ಸಂಚಾರ ದಟ್ಟಣೆಯಲ್ಲಿ ಹಲವು ಗಂಟೆಗಳ ಕಾಲ ಸಿಕ್ಕಿಹಾಕಿಕೊಂಡರು. ಈ ಹಂತದಲ್ಲಿ ತಾಳ್ಮೆ ಕಳೆದುಕೊಂಡ ಮಹಿಳೆ, ವಾಹನದಿಂದ ಇಳಿದು ಪಾದಯಾತ್ರೆಯ ಮಧ್ಯಕ್ಕೆ ತೆರಳಿ ಮಹಾಜನ್ ಜತೆ ವಾಗ್ವಾದಕ್ಕೆ ಇಳಿದರು.