ರಾಂಚಿ: 24 ವರ್ಷದ ಮಹಿಳೆಯೊಬ್ಬರು ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ರೈಲಿನಡಿ ಸಿಲುಕಿ ಪ್ರಾಣಬಿಟ್ಟಿರುವ ಘಟನೆ ಜಾರ್ಖಂಡ್ನ ಕೊಡೆರ್ಮಾ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಶುಕ್ರವಾರ ಸಂಜೆ ಜಾರ್ಖಂಡ್ ನ ಕೊಡರ್ಮಾ ರೈಲು ನಿಲ್ದಾಣದಲ್ಲಿ ಈ ಹೃದಯವಿದ್ರಾವಕ ಅಪಘಾತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ 24 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಮಹಿಳೆ ಮುಸ್ಕನ್ ಮಾಸಿ, ಪತಿ ತಪನ್ ಮಾಸಿ ಎಂಬುವವರು ರಂಬಂಧ್, ಪೊಲೀಸ್ ಠಾಣೆ ಹಿರಾಪುರ, ವರ್ಧನ್, ಪಶ್ಚಿಮ ಬಂಗಾಳದ, ಸೀಲ್ಡಾ-ಜಲಿಯನ್ ವಾಲಾಬಾಗ್ ಎಕ್ಸ್ ಪ್ರೆಸ್ ನಿವಾಸಿ (ರೈಲು ಸಂಖ್ಯೆ 12379) ನಲ್ಲಿ ಪ್ರಯಾಣಿಸುತ್ತಿದ್ದರು.
ಈ ವೇಳೆ ರೈಲು ನಿಲ್ದಾಣದಿಂದ ಹೊರಡಲು ಪ್ರಾರಂಭಿಸಿದಾಗ ಮಹಿಳೆ ತನ್ನಿಬ್ಬರು ಮಕ್ಕಳೊಂದಿಗೆ ರೈಲನ್ನು ಹತ್ತಲು ಪ್ರಯತ್ನಿಸಿದ್ದಾರೆ.
ಆದರೆ, ಸಮತೋಲನ ತಪ್ಪಿದ ಅವರು ಪ್ಲಾಟ್ಫಾರ್ಮ್ ಮತ್ತು ರೈಲಿನ ನಡುವಲ್ಲಿ ಬಿದ್ದಿದ್ದಾರೆ. ಅಲ್ಲಿದ್ದ ಪ್ರಯಾಣಿಕರು ಕಿರುಚಾಡುವಷ್ಟರಲ್ಲೇ ರೈಲಿನ ಚಕ್ರಗಳು ಆಕೆಯ ಮೇಲೆ ಹರಿದು ಆಕೆಯ ಪ್ರಾಣಪಕ್ಷಿ ಹಾರಿ ಹೋಗಿದೆ.
ಆಗಿದ್ದೇನು?
ಸಂತ್ರಸ್ಥೆ ಮುಸ್ಕನ್ ಮಾಸಿ ಮತ್ತು ಆಕೆಯ ಪತಿ ತಪನ್ ಮಾಸಿ ತಮ್ಮ ಇಬ್ಬರು ಮಕ್ಕಳು ಮತ್ತು ಸೋದರ ಸೊಸೆಯೊಂದಿಗೆ ಅಸನ್ಸೋಲ್ನಿಂದ ದೆಹಲಿಗೆ ತೆರಳುತ್ತಿದ್ದರು ಎಂದು ವರದಿಯಾಗಿದೆ. ಈ ವೇಳೆ ಕೋಡರ್ಮಾ ನಿಲ್ದಾಣದ ಪ್ಲಾಟ್ಫಾರ್ಮ್ ನಂಬರ್ 4ರಲ್ಲಿ ರೈಲು ನಿಲ್ದಾಣದ ಸಮಯದಲ್ಲಿ, ಮಹಿಳೆ ಮುಸ್ಕನ್ ಮಾಸಿ ಕೆಲವು ಸಾಮಾನುಗಳನ್ನು ತೆಗೆದುಕೊಳ್ಳಲು ಕೆಳಗಿಳಿದರು. ಈ ನಡುವೆ ರೈಲು ಚಲಿಸಲು ಮುಂದಾಗಿದೆ. ಈ ವೇಳೆ ಇದನ್ನು ಗಮನಿಸಿದ ಮುಸ್ಕನ್ ಕೂಡಲೇ ರೈಲಿನತ್ತ ದೌಡಾಯಿಸಿ ಚಲಿಸುತ್ತಿದ್ದ ರೈಲು ಹತ್ತಲು ಪ್ರಯತ್ನಿಸಿದ್ದಾರೆ.
ಆದರೆ ಆಯ ತಪ್ಪಿ ರೈಲು ಮತ್ತು ಪ್ಲಾಟ್ ಫಾರ್ಮ್ ನಡುವಿನ ಕಂದಕದೊಳಗೆ ಬಿದ್ದಿದ್ದಾರೆ. ಕೂಡಲೇ ರೈಲುಗಳ ಚಕ್ರಗಳು ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರೈಲು ಆಕೆಯ ಮೇಲೆ ಹರಿಯುತ್ತಲೇ ಸ್ಥಳೀಯರು ಕೂಗಿ ಸಿಬ್ಬಂದಿಗಳನ್ನು ಎಚ್ಚರಿಸಿದ್ದು, ಕೂಡಲೇ ರೈಲ್ವೇ ಸಿಬ್ಬಂದಿ ರೈಲು ನಿಲ್ಲಿಸಿದ್ದಾರೆ. ಆದರೆ ಅಷ್ಟು ಹೊತ್ತಿಗಾಗಲೇ ಮುಸ್ಕನ್ ಪ್ರಾಣಪಕ್ಷಿ ಹಾರಿ ಹೋಗಿತ್ತು ಎನ್ನಲಾಗಿದೆ.
ಇನ್ನು ಅತ್ತ ತಾಯಿ ಹಳಿಗಳ ಮೇಲೆ ಶವವಾಗಿದ್ದರೆ ಇತ್ತ ಆಕೆಯ ನವಜಾತ ಮಕ್ಕಳು ಮಾತ್ರ ಅಪರಿಚಿತರ ಕೈಯಲ್ಲಿ ಮಲಗಿದ್ದ ವಿದ್ರಾವಕ ದೃಶ್ಯಗಳು ಮನಕಲಕುವಂತಿದೆ. ರೈಲ್ವೆ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದಿದ್ದು, ಮಕ್ಕಳನ್ನು ಸುರಕ್ಷಿತವಾಗಿ ಶಿಶು ಪಾಲನಾ ಕೇಂದ್ರಕ್ಕೆ ಹಸ್ತಾಂತರಿಸಿದ್ದಾರೆ. ಮೃತ ಯುವತಿಯ ಕುಟುಂಬದವರನ್ನು ಪತ್ತೆಹಚ್ಚುವ ಕೆಲಸ ಮುಂದುವರೆದಿದೆ.
ಘಟನೆ ಬಳಿಕ ನಿಲ್ದಾಣದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಮಾಹಿತಿ ಪಡೆದ ನಂತರ, ಆರ್ ಪಿಎಫ್ ಸ್ಥಳಕ್ಕೆ ತಲುಪಿದ್ದು, ಘಟನೆಯ ಬಗ್ಗೆ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದೆ.