ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದ 21 ವರ್ಷದ ಡೆಲಿವರಿ ಏಜೆಂಟ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಾನ್ಸ್ ಟೇಬಲ್ ಒಬ್ಬರನ್ನು ಬಂಧಿಸಲಾಗಿದೆ.
ನೈಋತ್ಯ ದೆಹಲಿಯ ಜಾಫರ್ಪುರ್ ಕಲಾನ್ ಪ್ರದೇಶದಲ್ಲಿ ವಾಗ್ವಾದದ ಬಳಿಕ ಡೆಲಿವರಿ ಏಜೆಂಟ್ನನ್ನು ಗುಂಡು ಹಾರಿಸಿ ಕೊಂದು, ಆತನ ಸ್ನೇಹಿತನನ್ನು ಗಾಯಗೊಳಿಸಿದ ಆರೋಪದ ಮೇರೆಗೆ ದೆಹಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಕ್ಷೀಪ್ರಗತಿಯಲ್ಲಿ ಆರೋಪಿ ಬಂಧನ: ಘಟನೆ ನಡೆದ 24 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸಲಾಗಿದೆ. ಕೊಲೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್ ಕಾನ್ಸ್ ಟೇಬಲ್ ನೀರಾಜ್ ಅವರನ್ನು ಜಾಫರ್ಪುರ್ ಪ್ರದೇಶದಿಂದ ಮಧ್ಯರಾತ್ರಿಯ ಸುಮಾರಿಗೆ ಬಂಧಿಸಲಾಗಿದೆ. ಸ್ಥಳೀಯ ಪೊಲೀಸ್ ಘಟಕದಲ್ಲಿ ಅವರನ್ನು ನಿಯೋಜಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಆದಾಗ್ಯೂ, ಘಟನೆಯ ಸಮಯದಲ್ಲಿ ಅವರು ಕರ್ತವ್ಯದಲ್ಲಿ ಇರಲಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಭಾನುವಾರ ಮುಂಜಾನೆ, ನೀರಜ್ ಡೆಲಿವರಿ ಏಜೆಂಟ್ ಪಾಂಡವ್ ಕುಮಾರ್ ಮತ್ತು ಅವರ ಸ್ನೇಹಿತ ಕ್ರಿಶನ್ ಮೇಲೆ ತೀವ್ರ ವಾಗ್ವಾದದ ನಂತರ ಗುಂಡು ಹಾರಿಸಿದನೆಂದು ಆರೋಪಿಸಲಾಗಿದೆ. ಕುಮಾರ್ ಗುಂಡೇಟಿನಿಂದ ಸಾವನ್ನಪ್ಪಿದರೆ, ಕ್ರಿಶನ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಳಗಿನ ಜಾವ 2.30 ರ ಸುಮಾರಿಗೆ ಈ ಘಟನೆ ನಡೆದಿದೆ. ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗವಹಿಸಿದ ನಂತರ ಸಂತ್ರಸ್ತರು ರಸ್ತೆಯ ಪಕ್ಕದಲ್ಲಿ ನಿಂತಿದ್ದರು. ಅಲ್ಲಿಯೇ ವಾಸಿಸುತ್ತಿದ್ದ ನೀರಜ್ ಅವರೊಂದಿಗೆ ಜಗಳ ನಡೆದು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಆರೋಪಿ ಕುಮಾರ್ ಮೇಲೆ ಗುಂಡು ಹಾರಿಸಿದಾಗ ಅದು ಅವನ ಎದೆಯನ್ನು ಚುಚ್ಚಿದೆ. ಬಳಿಕ ಆತನ ಸ್ನೇಹಿತನಿಗೂ ತಗುಲಿತು" ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ಇಬ್ಬರೂ ಸಂತ್ರಸ್ತರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ಕುಮಾರ್ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ತನಿಖೆ ಪ್ರಗತಿಯಲ್ಲಿ: ಘಟನೆಯ ನಂತರ ಆರೋಪಿ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದರು. ಜಾಫರ್ಪುರ್ ಕಲಾನ್ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಹಚ್ಚಲು ಹಲವಾರು ತಂಡಗಳನ್ನು ರಚಿಸಲಾಗಿತ್ತು. ಸ್ಥಳೀಯ ಗುಪ್ತಚರ ಮಾಹಿತಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಾಳಿ ಸೇರಿದಂತೆ ನಿರಂತರ ಪ್ರಯತ್ನಗಳ ನಂತರ ನೀರಜ್ನನ್ನು ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ದಾಳಿಗೆ ಕಾರಣವಾದ ಘಟನೆಗಳು ಮತ್ತು ಸಂದರ್ಭಗಳ ನಿಖರವಾದ ಮಾಹಿತಿ ಕಲೆಹಾಕಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.