ನಟಿ ತ್ರಿಶಾ ಅವರ ಕುರಿತಾದ ಅಶ್ಲೀಲ ಹೇಳಿಕೆಗಳ ಹಿನ್ನೆಲೆಯಲ್ಲಿ ತಮಿಳುನಾಡು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ವಿರುದ್ಧ ಟಿವಿಕೆ (TVK) ಮಂಗಳವಾರ ತನ್ನ ವಾಗ್ದಾಳಿಯನ್ನು ಮುಂದುವರಿಸಿದ್ದು, 'ಅವರು ಉದಯನಿಧಿ ಅಲ್ಲ, ಬದಲಿಗೆ 'ವಲ್ಗರ್-ನಿಧಿ' ಎಂದು ಟೀಕಿಸಿದೆ.
ತ್ರಿಶಾ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಂಗಳವಾರ ಬೆಳಿಗ್ಗೆ ಡಿಎಂಕೆ ನಾಯಕನನ್ನು ಬಂಧಿಸಿದ ಘಟನೆಗೆ ಪ್ರತಿಕ್ರಿಯಿಸಿದ ಟಿವಿಕೆ ನಾಯಕ ಅಮೆರಿಕೈ ನಾರಾಯಣನ್, ಆ ಡಿಎಂಕೆ ನಾಯಕನ ಭಾಷಣವು 'ಅಸಭ್ಯ'ವಾದುದು ಎಂದರು.
'ಅವರ ಹೆಸರೇನು? 'ವಲ್ಗರ್-ನಿಧಿ'ಯಾ? ಅವರನ್ನು ಉದಯನಿಧಿ ಎಂದು ಕರೆಯಬಾರದು. ಆತ ತನ್ನ ಹೆಸರನ್ನು 'ವಲ್ಗರ್-ನಿಧಿ' ಎಂದು ಬದಲಾಯಿಸಿಕೊಳ್ಳಬೇಕು' ಎಂದು ಬಂಧನದ ನಂತರ ಎನ್ಡಿಟಿವಿ ಜೊತೆ ಮಾತನಾಡುತ್ತಾ ನಾರಾಯಣನ್ ಹೇಳಿದರು.
'ಮುಖ್ಯಮಂತ್ರಿ ವಿಜಯ್ ಅಥವಾ ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕಾಗಿ ಉದಯನಿಧಿ ಅವರನ್ನು ಬಂಧಿಸಿಲ್ಲ. ಮಹಿಳೆಯನ್ನು ಅವಮಾನಿಸಿದ್ದಕ್ಕಾಗಿ ಬಂಧಿಸಲಾಗಿದೆ. ಅವರು ತಮಿಳುನಾಡಿನ ಮಹಿಳೆಯರನ್ನು ಕೀಳಾಗಿ ಕಂಡಿದ್ದಾರೆ' ಎಂದರು.
ನಟಿ ತ್ರಿಶಾ ಅವರ ಕುರಿತಾದ ಹೇಳಿಕೆಗಳ ಸಂಬಂಧ ದಾಖಲಾದ ಪೊಲೀಸ್ ದೂರಿನ ಹಿನ್ನೆಲೆಯಲ್ಲಿ ಉದಯನಿಧಿ ಸ್ಟಾಲಿನ್ ಅವರನ್ನು ಮಂಗಳವಾರ ಬೆಳಗ್ಗೆ ಚೆನ್ನೈನಲ್ಲಿರುವ ಅವರ ನಿವಾಸದಿಂದ ಬಂಧಿಸಲಾಯಿತು.
ಸೋಮವಾರ ತಂಜಾವೂರಿನಲ್ಲಿ ಕಾವೇರಿ ವಿವಾದಕ್ಕೆ ಸಂಬಂಧಿಸಿದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ, ಮುಖ್ಯಮಂತ್ರಿ ವಿಜಯ್ ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಮತ್ತು ತಮಿಳುನಾಡಿಗೆ ಕಾವೇರಿ ನದಿಯ ಒಂದು ಹನಿ ನೀರೂ ಸಿಕ್ಕಿಲ್ಲ ಎಂದು ಆರೋಪಿಸುವ ಮೂಲಕ ಉದಯನಿಧಿ ಅವರು ಮುಖ್ಯಮಂತ್ರಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು.
ಸಭೆಯಲ್ಲಿದ್ದ ಕಾರ್ಯಕರ್ತರು 'ತ್ರಿಶಾ, ತ್ರಿಶಾ' ಎಂದು ಘೋಷಣೆ ಕೂಗಿದಾಗ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ ಉದಯನಿಧಿ, ಮುಖದಲ್ಲಿ ಲೇವಡಿಯ ನಗೆಯೊಂದಿಗೆ ದ್ವಂದ್ವಾರ್ಥದ ಹಾಗೂ ಆಕ್ಷೇಪಾರ್ಹವಾದ ಪ್ರತಿಕ್ರಿಯೆ ನೀಡಿದರು; ಅವರ ಈ ಹೇಳಿಕೆಯು ತೀವ್ರ ರಾಜಕೀಯ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಟಿವಿಕೆ, ಡಿಎಂಕೆ ನಾಯಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದೆ. ಅಲ್ಲದೆ, ಪಕ್ಷವು ಉದಯನಿಧಿ ವಿರುದ್ಧ ಪೊಲೀಸ್ ದೂರು ಕೂಡ ದಾಖಲಿಸಿದೆ.
ಪೊಲೀಸರ ವಶದಲ್ಲಿದ್ದಾಗ ನಗುತ್ತಲೇ ಕಂಡುಬಂದ ಉದಯನಿಧಿ ಸ್ಟಾಲಿನ್, ತಮ್ಮ ಬಂಧನವನ್ನು 'ಹಾಸ್ಯ'ದಂತೆ ಪರಿಗಣಿಸುವುದಾಗಿ ಮತ್ತು ಇದರ ವಿರುದ್ಧ 'ಕಾನೂನುಬದ್ಧವಾಗಿ ಹೋರಾಡುವುದಾಗಿ' ಹೇಳಿದರು.