ನವದೆಹಲಿ: ವೈಜ್ಞಾನಿಕ ಚಾಲನಾ ತರಬೇತಿ ಮೂಲಕವಷ್ಟೇ ಅಪಘಾತದ ಮೂಲಕ ಸಂಭವಿಸುವ ಸಾವುಗಳ ತಡೆಯಬಹುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ನಾಮನಿರ್ದೇಶಿತ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿವರ್ಷ 1,80,000 ಮಂದಿ ಸಾವನ್ನಪ್ಪುತ್ತಿದ್ದಾರೆ ಎಂಬುದು ತುಂಬಾ ನೋವಿನ ಸಂಗತಿ. ಚಾಲಕರಿಗೆ ಲೇನ್ ಶಿಸ್ತು ಹಾಗೂ ಸಂಚಾರ ನಿಯಮಗಳ ಕುರಿತು ಸೂಕ್ತ ತರಬೇತಿ ನೀಡುವುದು ಅತ್ಯಂತ ಮುಖ್ಯ ಎಂದು ಒತ್ತಿ ಹೇಳಿದರು.
ಅಲ್ಲದೆ ಇಂತಹ ಸಾವುಗಳಿಗೆ ಹಲವು ಕಾರಣಗಳಿವೆ. ಆದರೆ, “ಅತ್ಯಂತ ಪ್ರಮುಖವಾದದ್ದು ಮನುಷ್ಯನ ವರ್ತನೆ. ನಮ್ಮ ದೇಶದಲ್ಲಿ ಚಾಲಕರಿಗೆ ಉತ್ತಮ ತರಬೇತಿಯ ಅಗತ್ಯವಿದೆ. ಲೇನ್ ಶಿಸ್ತು ಮತ್ತು ಸಂಚಾರ ನಿಯಮಗಳ ಕುರಿತು ಚಾಲಕರಿಗೆ ವೈಜ್ಞಾನಿಕ ರೀತಿಯಲ್ಲಿ ತರಬೇತಿ ನೀಡುವುದು ಬಹಳ ಮುಖ್ಯ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿರುವ ಗಡ್ಕರಿ ಹೇಳಿದರು.
ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ: ಸುಧಾಮೂರ್ತಿ ಆತಂಕ
ಇನ್ನು ದೇಶದಲ್ಲಿ “ಅತ್ಯುತ್ತಮ ರಸ್ತೆಗಳಿವೆ, ಆದರೆ ಅಪಘಾತಗಳ ಸಂಖ್ಯೆ ಮಾತ್ರ ಹೆಚ್ಚಾಗಿದೆ” ಎಂದು ಗಮನಸೆಳೆದ ಸುಧಾಮೂರ್ತಿ, ಚಾಲನಾ ಪರವಾನಗಿ ನೀಡುವ ನೈಜ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಖಚಿತಪಡಿಸಲು ಸರ್ಕಾರದ ಬಳಿ ಯಾವುದೇ ನಿರ್ದಿಷ್ಟ ಕ್ರಮ ಅಥವಾ ಹೊಸ ಯೋಜನೆ ಇದೆಯೇ ಎಂದು ಪ್ರಶ್ನಿಸಿದರು.
ನಂತರ ಪಿಟಿಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಸುಧಾಮೂರ್ತಿ, ರಾಷ್ಟ್ರೀಯ ಹೆದ್ದಾರಿಗಳು ಉತ್ತಮವಾಗಿವೆ. ಆದರೆ ಅನೇಕ ಸಂದರ್ಭಗಳಲ್ಲಿ ಅಜಾಗರೂಕ ಹಾಗೂ ಬೇಜವಾಬ್ದಾರಿ ಚಾಲಕರಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ಹೇಳಿದರು.
“ಇಂತಹ ಹೆಚ್ಚಿನ ಪ್ರಕರಣಗಳಲ್ಲಿ ಚಾಲಕರಿಗೆ ಸರಿಯಾದ ತರಬೇತಿ ಇರುವುದಿಲ್ಲ. ಕೆಲವರು ಹಿಂಬಾಗಿಲಿನ ಮಾರ್ಗಗಳ ಮೂಲಕ ಚಾಲನಾ ಪರವಾನಗಿ ಪಡೆದಿರುವ ಸಾಧ್ಯತೆಯೂ ಇದೆ. ಅವರು ಹೇಗೆ ವಾಹನ ಚಲಾಯಿಸುತ್ತಾರೆ ಎಂಬುದಕ್ಕೆ ಯಾವುದೇ ದಾಖಲೆ ಅಥವಾ ಚಾಲನಾ ಪರೀಕ್ಷೆಯಲ್ಲಿ ಅವರು ಹೇಗೆ ಉತ್ತೀರ್ಣರಾಗಿದ್ದಾರೆ ಎಂಬುದನ್ನು ತೋರಿಸುವ ವಿಡಿಯೋ ಸಾಕ್ಷ್ಯವೂ ಇಲ್ಲ. ಪರಿಣಾಮಗಳ ಅರಿವಿಲ್ಲದೆ ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸುವ ಹಲವು ಪ್ರಕರಣಗಳೂ ಇವೆ” ಎಂದು ಅವರು ಹೇಳಿದರು.