ಲಕ್ನೋ: ಮದರಸಾಗಳು ಎಲ್ಲೇ ಇದ್ದರೂ ಅವು ಅನಧಿಕೃತವಾಗಿ ಉಗ್ರರನ್ನು ಉತ್ಪಾದಿಸುತ್ತಿವೆ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದು, ರಾಜಕೀಯ ಕೋಲಾಹಲ ಎಬ್ಬಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದರಸಾದಲ್ಲಿ ಶಿಕ್ಷಣ ಪಡೆಯುವವರು ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗಲ್ಲ, ‘ವಂದೇ ಮಾತರಂ’ ಹಾಡಲ್ಲ. ಬದಲಿಗೆ ಉಗ್ರರಂತಹ ಮನಸ್ಥಿತಿ ಬೆಳೆಸಿಕೊಳ್ಳುತ್ತಾರೆ ಎಂದಿದ್ದಾರೆ.
ಮದರಸಾ ಬಾಂಗ್ಲಾದೇಶದಲ್ಲಿರಲಿ, ಪಾಕಿಸ್ತಾನದಲ್ಲಿರಲಿ ಅಥವಾ ಭಾರತದಲ್ಲಿರಲಿ, ಮದರಸಾಗಳು ಅನಧಿಕೃತವಾಗಿ ಭಯೋತ್ಪಾದನೆಯನ್ನು ಉತ್ಪಾದಿಸುತ್ತವೆ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ ವಿರುದ್ಧ ಕಿಡಿಕಾರಿರುವ ಸಮಾಜವಾದಿ ಪಕ್ಷ, ಚುನಾವಣೆ ಸಮೀಪಿಸುತ್ತಿದೆ. ಅವರು ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ಉಲ್ಲೇಖಿಸದಿದ್ದರೆ, ತಮ್ಮ ಕಾರ್ಯಸೂಚಿಯನ್ನು ಹೇಗೆ ಅನುಸರಿಸುವುದು ಹೇಗೆ? ಎಂದು ಕಿಡಿಕಾರಿದೆ. ಈ ಹೇಳಿಕೆಯು ಪ್ರಚೋದನಕಾರಿ, ಸಾಮಾಜಿಕ ಸಾಮರಸ್ಯವನ್ನು ಹದಗೆಡಿಸುವಂಥದ್ದು ಎಂದು ಜಮೀಯತ್ ಉಲೆಮಾ ಇ ಹಿಂದ್ ಆಕ್ರೋಶ ವ್ಯಕ್ತಪಡಿಸಿದೆ.