ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ, ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ತಮ್ಮ ಯೋಜಿತ 'ಛಾತ್ರೋಂ ಕಿ ಗೂಂಜ್' ಕಾರ್ಯಕ್ರಮವನ್ನು ನಡೆಸಲು ಅನುಮತಿ ನೀಡಲಾಗಿದೆ. ಈ ಹಿಂದೆ ಆಡಳಿತ ಮಂಡಳಿಯು ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳದ ಬುಕಿಂಗ್ ಅನ್ನು ರದ್ದುಗೊಳಿಸಿತ್ತು, ಆದರೆ ನಂತರ ಆ ರದ್ದತಿಯನ್ನು ಹಿಂಪಡೆದಿದೆ.
ವಿದ್ಯಾರ್ಥಿಗಳೊಂದಿಗಿನ ಈ ಸಾರ್ವಜನಿಕ ಸಂವಾದ ಕಾರ್ಯಕ್ರಮವು ಆಗಸ್ಟ್ 8 ರಂದು ನಡೆಯಲಿದೆ.
ಕೆಪಿ ಕಾಲೇಜಿನ ಆಡಳಿತ ಮಂಡಳಿಯು ತಮ್ಮ ಕ್ರೀಡಾ ಮೈದಾನವನ್ನು ಕಾರ್ಯಕ್ರಮದ ಸ್ಥಳವಾಗಿ ಬಳಸಲು ನೀಡಿದ್ದ ಅನುಮತಿಯನ್ನು ರದ್ದುಪಡಿಸಿದ್ದರಿಂದ, ಈ ಕಾರ್ಯಕ್ರಮದ ಆಯೋಜನೆಯು ತಾತ್ಕಾಲಿಕವಾಗಿ ಅನಿಶ್ಚಿತತೆಗೆ ಸಿಲುಕಿತ್ತು. ಈ ಕಾರ್ಯಕ್ರಮವು ವಿದ್ಯಾರ್ಥಿಗಳ ಅಧ್ಯಯನದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವೇ ಇದಕ್ಕೆ ಕಾರಣವೆಂದು ಕಾಲೇಜು ತಿಳಿಸಿತು; ಅಲ್ಲದೆ, ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ರೀತಿಯ ಅಡಚಣೆಯಾಗದಂತೆ ನೋಡಿಕೊಳ್ಳಬೇಕೆಂದು ಒತ್ತಿಹೇಳುವ ಅಲಹಾಬಾದ್ ಹೈಕೋರ್ಟ್ನ ಆದೇಶವನ್ನೂ ಅದು ಉಲ್ಲೇಖಿಸಿತು.
ನಗರ ಕಾಂಗ್ರೆಸ್ ಸಮಿತಿಗೆ ಬರೆದ ಪತ್ರದಲ್ಲಿ ಕಾಯಸ್ಥ ಪಾಠಶಾಲೆಯ ಹಂಗಾಮಿ ಅಧ್ಯಕ್ಷ ಚೌಧರಿ ಜಿತೇಂದ್ರ ನಾಥ್ ಸಿಂಗ್, ಬುಕಿಂಗ್ ರದ್ದುಗೊಳಿಸುವ ನಿರ್ಧಾರವನ್ನು ಕಾಲೇಜು ಪ್ರಾಂಶುಪಾಲರಿಂದ ದೊರೆತ ಮಾಹಿತಿ ಹಾಗೂ ಹೈಕೋರ್ಟ್ನ ಆಗಸ್ಟ್ 14, 2025ರ ಆದೇಶದ ಆಧಾರದ ಮೇಲೆ ಕೈಗೊಳ್ಳಲಾಗಿದೆ. ಅಲ್ಲದೆ, ಠೇವಣಿ ಇರಿಸಿದ್ದ ಹಣವನ್ನು ಹಿಂಪಡೆಯುವಂತೆಯೂ ಆಯೋಜಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಆದಾಗ್ಯೂ, ನಂತರ ಆ ರದ್ದತಿಯನ್ನು ಹಿಂತೆಗೆದುಕೊಳ್ಳಲಾಗಿದ್ದು, ಈಗ ಕಾರ್ಯಕ್ರಮ ನಡೆಯಲು ದಾರಿ ಸುಗಮವಾಯಿತು.
ಪ್ರಯಾಗ್ರಾಜ್ಗೆ ಭೇಟಿ ನೀಡುವುದಾಗಿ ಘೋಷಿಸಿದಾಗಿನಿಂದ ಆಡಳಿತವು ಕಾರ್ಯಕ್ರಮ ನಡೆಯದಂತೆ ತಡೆಯಲು ಪ್ರಯತ್ನಿಸುತ್ತಿದೆ ಎಂದು ರಾಹುಲ್ ಗಾಂಧಿ ಗುರುವಾರ ಆರೋಪಿಸಿದರು.
'ಎಕ್ಸ್'ನಲ್ಲಿನ ಪೋಸ್ಟ್ ಒಂದರಲ್ಲಿ, 'ಅಲಹಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಶುಲ್ಕ ಹೆಚ್ಚಳ ಮತ್ತು ಸೀಟುಗಳ ಕಡಿತದ ವಿರುದ್ಧ ತಮ್ಮ ಭವಿಷ್ಯಕ್ಕಾಗಿ ಹೋರಾಡುತ್ತಿದ್ದಾರೆ. ಆದರೆ, ವಿದ್ಯಾರ್ಥಿಗಳ ಮಾತು ಕೇಳುವ ಬದಲು ಆಡಳಿತ ಮಂಡಳಿಯು ಅವರ ವಿರುದ್ಧ ಎಫ್ಐಆರ್ ದಾಖಲಿಸುತ್ತಿದೆ' ಎಂದು ರಾಹುಲ್ ಗಾಂಧಿ ಬರೆದಿದ್ದಾರೆ.
'ನರೇಂದ್ರ ಮೋದಿ ಸರ್ಕಾರವು ಯುವಜನರ ಧ್ವನಿಯನ್ನು ಹತ್ತಿಕ್ಕುತ್ತಿದೆ. ಪ್ರಶ್ನೆ ಕೇಳಿದರೆ ಲಾಠಿಚೆಜ್ಗೆ ಒಳಗಾಗಬೇಕಾಗುತ್ತದೆ, ಪ್ರತಿಭಟಿಸಿದರೆ ಮೊಕದ್ದಮೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ಧ್ವನಿ ಎತ್ತಿದರೆ ಪೆಲೆಟ್ ಗನ್ಗಳ ದಾಳಿಗೆ ಗುರಿಯಾಗಬೇಕಾಗುತ್ತದೆ' ಎಂದರು.
'ವಿದ್ಯಾರ್ಥಿಗಳ ಮಾತುಗಳನ್ನು ಆಲಿಸಲು ಪ್ರಯಾಗ್ರಾಜ್ಗೆ ಬರಲು ನಾನು ನಿರ್ಧರಿಸಿದಾಗಿನಿಂದಲೂ, ನನ್ನ ಕಾರ್ಯಕ್ರಮವನ್ನು ತಡೆಯಲು ಆಡಳಿತವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ವಿದ್ಯಾರ್ಥಿಗಳ ಧ್ವನಿಗೂ ಅವರು ಹೆದರುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ' ಎಂದು ಅವರು ಹೇಳಿದರು.