ಚೆನ್ನೈ: ತಮ್ಮ ಭಾಷಣವನ್ನು ತಪ್ಪಾಗಿ ಬಿತ್ತರಿಸಿ, ತೇಜೋವಧೆ ಮಾಡಲಾಗಿದೆ ಎಂದು ಆರೋಪಿಸಿ ತಮಿಳುನಾಡು ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರು, ದೇಶದ ಎರಡು ಪ್ರಮುಖ ರಾಷ್ಟ್ರೀಯ ಮಾಧ್ಯಮಗಳಾಗ NDTV, India Today ವಿರುದ್ಧ ಕಾನೂನು ಸಮರ ಸಾರಿದ್ದಾರೆ.
NDTV, India Today ಸುದ್ದಿ ವಾಹಿನಿಗಳಿಗೆ 100 ಕೋಟಿ ರೂ. ಮಾನನಷ್ಟ ಪರಿಹಾರ ಕೋರಿ ಕಾನೂನು ನೋಟಿಸ್ ಜಾರಿ ಮಾಡಿದ್ದಾರೆ.
ನೋಟಿಸ್ನಲ್ಲಿ, ಆಗಸ್ಟ್ 3ರಂದು ತಾವು ನೀಡಿದ ಭಾಷಣವನ್ನು ಸುದ್ದಿ ವಾಹಿನಿಗಳು ತಪ್ಪಾಗಿ ವ್ಯಾಖ್ಯಾನಿಸಿ, ಆಕ್ಷೇಪಾರ್ಹ ರೀತಿಯಲ್ಲಿ ವಿಡಿಯೊಗಳನ್ನು ಪ್ರಸಾರ ಮಾಡಿವೆ. ಇದರಿಂದ ತಮ್ಮ ವೈಯಕ್ತಿಕ ಹಾಗೂ ರಾಜಕೀಯ ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ಉದಯನಿಧಿ ಆರೋಪಿಸಿದ್ದಾರೆ.
ಅಲ್ಲದೆ, ಈ ವಾಹಿನಿಗಳ ಪ್ರಸಾರದ ಬಳಿಕ ಇತರ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಮಾಧ್ಯಮಗಳೂ ಅದೇ ರೀತಿಯ ವರದಿಗಳನ್ನು ಪ್ರಸಾರ ಮಾಡಿ, ತಪ್ಪು ಸಂದೇಶವನ್ನು ಮತ್ತಷ್ಟು ವ್ಯಾಪಕಗೊಳಿಸಿವೆ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ನೋಟಿಸ್ನಲ್ಲಿ ಸುದ್ದಿ ವಾಹಿನಿಗಳಿಗೆ ಕೆಲವು ಪ್ರಮುಖ ಬೇಡಿಕೆಗಳನ್ನು ಮುಂದಿರಿಸಲಾಗಿದೆ. ಪ್ರಸಾರಗೊಂಡ ವರದಿಗಳಿಗೆ ಸಂಬಂಧಿಸಿದಂತೆ ಯಾವುದೇ ಷರತ್ತುಗಳಿಲ್ಲದ ಸಾರ್ವಜನಿಕ ಕ್ಷಮೆಯಾಚನೆಯನ್ನು ವಾಹಿನಿಗಳಲ್ಲಿ ಪ್ರಮುಖವಾಗಿ ಪ್ರಸಾರ ಮಾಡಬೇಕು. ಜೊತೆಗೆ, ಅಧಿಕೃತ ಹಾಗೂ ವೈಯಕ್ತಿಕ ಸಾಮಾಜಿಕ ಜಾಲತಾಣ ಖಾತೆಗಳಲ್ಲಿಯೂ ಕ್ಷಮೆಯಾಚನೆ ಪ್ರಕಟಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದಲ್ಲದೆ, ವಿವಾದಕ್ಕೆ ಕಾರಣವಾದ ವಿಡಿಯೊಗಳನ್ನು ಯೂಟ್ಯೂಬ್ ಸೇರಿದಂತೆ ಎಲ್ಲಾ ಅಧಿಕೃತ ಮತ್ತು ವೈಯಕ್ತಿಕ ಸಾಮಾಜಿಕ ಜಾಲತಾಣಗಳಿಂದ ತಕ್ಷಣವೇ ತೆಗೆದುಹಾಕಬೇಕು. ಮುಂದೆಯೂ ಇದೇ ಆರೋಪಗಳನ್ನು ಯಾವುದೇ ರೂಪದಲ್ಲಿ ಪ್ರಕಟಿಸದಂತೆ ತಡೆಯಬೇಕೆಂದೂ ನೋಟಿಸ್ನಲ್ಲಿ ಸೂಚಿಸಲಾಗಿದೆ.
ಇದಲ್ಲದೆ, ಉದಯನಿಧಿ ಅವರು 100 ಕೋಟಿ ರೂ. ಮಾನನಷ್ಟ ಪರಿಹಾರವನ್ನೂ ಕೋರಿದ್ದು, ಆ ಮೊತ್ತ ವಸೂಲಿಯಾದರೆ ಪ್ರಸಕ್ತ ಕೃಷಿ ಹಂಗಾಮಿನಲ್ಲಿ ಕುರವೈ ಬೆಳೆ ವೈಫಲ್ಯದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ದೇಣಿಗೆಯಾಗಿ ನೀಡುವುದಾಗಿ ತಿಳಿಸಿದ್ದಾರೆ.
ಈ ಎಲ್ಲಾ ಬೇಡಿಕೆಗಳನ್ನು 48 ಗಂಟೆಗಳೊಳಗೆ ಈಡೇರಿಸದಿದ್ದರೆ ಸಂಬಂಧಿತ ಮಾಧ್ಯಮ ಸಂಸ್ಥೆಗಳು ಮತ್ತು ಪತ್ರಕರ್ತರ ವಿರುದ್ಧ ಸಿವಿಲ್ ಹಾಗೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ನೋಟಿಸ್ನಲ್ಲಿ ಎಚ್ಚರಿಕೆ ನೀಡಲಾಗಿದೆ. ಆಗಸ್ಟ್ 3 ಮತ್ತು 4ರಂದು ಪ್ರಸಾರವಾದ ಕೆಲವು ಕಾರ್ಯಕ್ರಮಗಳು ಹಾಗೂ ಯೂಟ್ಯೂಬ್ ವಿಡಿಯೊಗಳಾಗಿದ್ದು, ಅವುಗಳ ಲಿಂಕ್ಗಳನ್ನೂ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಈ ನೋಟಿಸ್ಗೆ ಸಂಬಂಧಿಸಿದಂತೆ ಸುದ್ದಿವಾಹಿನಿಗಳಿಂದ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ಏನಿದು ವಿವಾದ?
ತಂಜಾವೂರಿನಲ್ಲಿ ರೈತರ ಸಮಸ್ಯೆ ಹಾಗೂ ಕಾವೇರಿ ನೀರು ಹಂಚಿಕೆ ವಿಚಾರವಾಗಿ ಡಿಎಂಕೆ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಉದಯನಿಧಿ ಸ್ಟಾಲಿನ್ ಭಾಷಣ ಮಾಡುತ್ತಿದ್ದ ವೇಳೆ ಜನಸ್ತೋಮದಲ್ಲಿ ಘೋಷಣೆಗಳು ಕೇಳಿಬಂದಿದ್ದವು. ಇದೇ ವೇಳೆ ಅವರು ಆಡಿದ ಕೆಲವು ಮಾತುಗಳನ್ನು ಆಧರಿಸಿ ವಿವಾದ ಸೃಷ್ಟಿಯಾಗಿತ್ತು.
ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮಹಿಳಾ ಘಟಕ ಸೇರಿದಂತೆ ಹಲವು ಸಂಘಟನೆಗಳು, ಉದಯನಿಧಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಹಾಗೂ ದ್ವಂದ್ವಾರ್ಥದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದವು.
ದೂರಿನ ಆಧಾರದ ಮೇಲೆ ತಂಜಾವೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS), ತಮಿಳುನಾಡು ಮಹಿಳೆಯರ ಕಿರುಕುಳ ನಿಷೇಧ ಕಾಯ್ದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್ಗಳಡಿ ಎಫ್ಐಆರ್ ದಾಖಲಾಗಿತ್ತು.
ನಂತರ ಚೆನ್ನೈನ ನಿವಾಸದಿಂದ ಉದಯನಿಧಿಯನ್ನು ಪೊಲೀಸರು ವಶಕ್ಕೆ ಪಡೆದು ತಂಜಾವೂರು ಸಮೀಪದ ಸೆಂಗಿಪಟ್ಟಿ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದರು. ಬಳಿಕ ಮದ್ರಾಸ್ ಹೈಕೋರ್ಟ್ ಸೂಚನೆಯಂತೆ ವಿಚಾರಣೆ ಪೂರ್ಣಗೊಂಡ ನಂತರ ಠಾಣಾ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಬಿಡುಗಡೆಯಾದ ಬಳಿಕ ಪ್ರತಿಕ್ರಿಯಿಸಿದ್ದ ಉದಯನಿಧಿ, ತಮ್ಮ ಹೇಳಿಕೆಯ ಉದ್ದೇಶ ಮಹಿಳೆಯರನ್ನು ಅವಮಾನಿಸುವುದಲ್ಲ; ರೈತರ ಸಮಸ್ಯೆ ಹಾಗೂ ಸರ್ಕಾರದ ವೈಫಲ್ಯವನ್ನು ಟೀಕಿಸುವುದಾಗಿತ್ತು ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೆ, ತಮ್ಮ ಭಾಷಣದ ಕೆಲವು ಭಾಗಗಳನ್ನು ಮಾತ್ರ ಕತ್ತರಿಸಿ ಪ್ರಸಾರ ಮಾಡುವ ಮೂಲಕ ತಪ್ಪು ಚಿತ್ರಣ ನಿರ್ಮಿಸಲಾಗಿದೆ ಎಂದು ಆರೋಪಿಸಿದ್ದರು.