ನವದೆಹಲಿ: ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ನಡೆದಿದೆ ಎನ್ನಲಾದ ಪೊಲೀಸ್ ದೌರ್ಜನ್ಯದ ಕುರಿತು ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದು, 'ಈ ಅಪರಾಧ'ಕ್ಕಾಗಿ ಬಿಜೆಪಿ ನಾಯಕರು ಒಂದಲ್ಲ ಒಂದು ದಿನ ಉತ್ತರಿಸಲೇಬೇಕಾಗುತ್ತದೆ ಎಂದು ಭಾನುವಾರ ಅವರು ಪ್ರತಿಪಾದಿಸಿದ್ದಾರೆ.
ಶನಿವಾರ ಪ್ರಯಾಗರಾಜ್ನಲ್ಲಿ ನಡೆದ ತಮ್ಮ 'ಛಾತ್ರೋಂ ಕಿ ಗೂಂಜ್' ಕಾರ್ಯಕ್ರಮದ ವೇಳೆ, ವಿದ್ಯಾರ್ಥಿಯೊಬ್ಬ ತನಗೆ 'ಈಗ ಯಾವುದೇ ಆಯ್ಕೆಗಳು ಉಳಿದಿಲ್ಲ' ಎಂದು ಹೇಳಿದ್ದಾಗಿ ಗಾಂಧಿ ತಿಳಿಸಿದ್ದಾರೆ.
'ನಿನ್ನೆ ಪ್ರಯಾಗ್ರಾಜ್ನಲ್ಲಿ ವಿದ್ಯಾರ್ಥಿಯೊಬ್ಬರು ನನಗೆ ಇದನ್ನೇ ಹೇಳಿದರು. ವರ್ಷಗಳ ಸಿದ್ಧತೆ, ಕುಟುಂಬದ ಜಮೀನು ಮಾರಾಟ, ಪೋಷಕರ ಮೇಲೆ ಸಾಲದ ಹೊರೆ - ಆದರೂ ಕೊನೆಗೆ ಕೈಗೆ ಸಿಕ್ಕಿದ್ದು ಶೂನ್ಯ' ಎಂದರು. ಇದು ಆ ವಿದ್ಯಾರ್ಥಿಯ ವೈಫಲ್ಯವಲ್ಲ, ಬದಲಿಗೆ ಅವರ ಕಠಿಣ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ನೀಡಲು ನಿರಾಕರಿಸಿದ ವ್ಯವಸ್ಥೆಯ ವೈಫಲ್ಯ ಎಂದು ರಾಹುಲ್ ಗಾಂಧಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ತಮ್ಮ ಹೋರಾಟ ಕೈಬಿಟ್ಟು ಹಲವು ದಿನಗಳೇ ಕಳೆದಿವೆ; ಆದರೂ, ಅವರ ವಿರುದ್ಧ ದೆಹಲಿ ಪೊಲೀಸರು ಕೈಗೊಂಡ ಕ್ರಮದ ಕುರಿತು ಶಾ ಅವರಿಂದ ಒಂದೇ ಒಂದು ಮಾತೂ ಬಂದಿಲ್ಲ. ಕ್ಷಮೆ ಯಾಚಿಸುವ ಬದಲು, ಮೋದಿಯವರು 'ಕ್ಷಮೆ'ಯನ್ನು ಹಂಚುವ ಕೆಲಸದಲ್ಲಿ ನಿರತರಾಗಿದ್ದಾರೆ' ಎಂದು ಗಾಂಧಿ ಹೇಳಿದರು.
'ಅಮಿತ್ ಶಾ ಅವರೇ, ನಾವು ಹೊಣೆಗಾರಿಕೆಯನ್ನು ಆಗ್ರಹಿಸುವುದನ್ನು ನಿಲ್ಲಿಸುತ್ತೇವೆ ಎಂದು ಕ್ಷಣಮಾತ್ರವೂ ಭಾವಿಸಬೇಡಿ. ರಾಜಧಾನಿಯ ಬೀದಿಗಳಲ್ಲಿ ಯುವಕರ ಮೇಲೆ ಲಾಠಿ ಮತ್ತು ಪೆಲೆಟ್ ಗುಂಡುಗಳನ್ನು ಪ್ರಯೋಗಿಸಲಾಯಿತು - ಆದರೂ ನೀವು ಒಂದೇ ಒಂದು ಮಾತನ್ನೂ ಆಡಲಿಲ್ಲ. ಇಂದು ಅಥವಾ ನಾಳೆ, ಈ ಅಪರಾಧಕ್ಕೆ ನೀವು ಉತ್ತರಿಸಲೇಬೇಕಾಗುತ್ತದೆ' ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ದೇಶದ ಬೆಳಕಾಗಿದ್ದಾರೆ ಎಂದು ಪ್ರತಿಪಾದಿಸಿದ ಗಾಂಧಿ, ತಾವು ಸಂಪೂರ್ಣ ಬಲದೊಂದಿಗೆ ಅವರ ಪರವಾಗಿ ನಿಲ್ಲುವುದಾಗಿ ಹೇಳಿದರು.
ಪ್ರಶ್ನೆಪತ್ರಿಕೆ ಸೋರಿಕೆ ವಿಷಯಕ್ಕೆ ಸಂಬಂಧಿಸಿದಂತೆ ಜುಲೈ 20 ರಂದು ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ವೇಳೆ ನಡೆದಿದೆ ಎನ್ನಲಾದ ಪೊಲೀಸ್ ದೌರ್ಜನ್ಯದ ಕುರಿತು ಶಾ ಅವರು ಸಂಸತ್ತಿನ ಉಭಯ ಸದನಗಳಲ್ಲಿ ಹೇಳಿಕೆ ನೀಡಬೇಕೆಂಬ ವಿರೋಧ ಪಕ್ಷದ ಬೇಡಿಕೆಯಿಂದಾಗಿ ಸದನಗಳಲ್ಲಿ ಬಿಕ್ಕಟ್ಟು ಮುಂದುವರಿದಿದೆ. ಬಹುತೇಕ ಕಲಾಪಗಳು ಗದ್ದಲದ ನಡುವೆಯೇ ನಡೆದಿವೆ.