ನವದೆಹಲಿ: ನೀಟ್ ಅಕ್ರಮ ಖಂಡಿಸಿ ಜಂತರ್ ಮಂತರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯದ ಕುರಿತು ವಿವರವಾದ ಚರ್ಚೆಗೆ ಸರ್ಕಾರ ಸಂಪೂರ್ಣವಾಗಿ ಸಿದ್ಧವಾಗಿದ್ದಾರೆ. ಆದರೆ ಗೃಹ ಸಚಿವ ಅಮಿತ್ ಶಾ ಅವರ ಅಧಿಕೃತ ಪ್ರತಿಕ್ರಿಯೆಗೆ ಸಂಸದರು ಅಡ್ಡಿಪಡಿಸುವುದನ್ನು ತಡೆಯಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸೋಮವಾರ ಹೇಳಿದ್ದಾರೆ.
ಸಂಸತ್ ಕಲಾಪಕ್ಕೆ ವಿರೋಧ ಪಕ್ಷ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದ ಕಿರಣ್ ರಿಜಿಜು, "ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಗಳ ಕುರಿತು ಪೂರ್ಣ ಮತ್ತು ವಿವರವಾದ ಚರ್ಚೆ ನಡೆಸಲು ಸರ್ಕಾರ ಸಿದ್ಧವಾಗಿದೆ" ಎಂದು ತಿಳಿಸಿದ್ದಾರೆ.
ಅಡೆತಡೆಯಿಲ್ಲದ ಸಂಸದೀಯ ಪ್ರಕ್ರಿಯೆಯ ಅಗತ್ಯವನ್ನು ಒತ್ತಿ ಹೇಳಿದ ರಿಜಿಜು, ಅಧಿಕೃತ ಹೇಳಿಕೆಯ ಸಮಯದಲ್ಲಿ ಅಡ್ಡಿಪಡಿಸದಂತೆ ಪ್ರತಿಪಕ್ಷಗಳಿಗೆ ಎಚ್ಚರಿಕೆ ನೀಡಿದರು. "ವಿಪಕ್ಷಗಳಿಗೆ ನಾನು ಹೇಳುತ್ತಿರುವ ಏಕೈಕ ಅಂಶವೆಂದರೆ ಚರ್ಚೆ ಮತ್ತು ಉತ್ತರ ನೀಡುತ್ತಿರುವಾಗ, ಗೃಹ ಸಚಿವರ ಹೇಳಿಕೆಯನ್ನು ತಡೆಯಲು ವಿರೋಧ ಪಕ್ಷಗಳು ಗೊಂದಲಗಳನ್ನು ಸೃಷ್ಟಿಸಬಾರದು" ಎಂದು ಅವರು ಹೇಳಿದರು.
"ಅವರು ಗೃಹ ಸಚಿವ ಅಮಿತ್ ಶಾ ಮತ್ತು ಸರ್ಕಾರದ ಉತ್ತರವನ್ನು ಕೇಳಬೇಕು. ಚರ್ಚೆ ಪ್ರಾರಂಭವಾದ ನಂತರ, ನಾವು ಒಂದು ಸರಳ ಚರ್ಚೆಯನ್ನು ನಡೆಸಬೇಕು" ಎಂದು ಸಚಿವರು ಹೇಳಿದ್ದಾರೆ.
ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಕ್ರಮದ ಬಗ್ಗೆ ಅಮಿತ್ ಶಾ ಅವರು ಸದನದಲ್ಲಿ ಉತ್ತರ ಕೊಡಬೇಕು ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆಗ್ರಹಿಸಿದ್ದಾರೆ.