ಲಖನೌ: ಮಹತ್ವದ ಬೆಳವಣಿಗೆಯಲ್ಲಿ ಶಾಲೆಗಳಿಗೆ ಯೂಟ್ಯೂಬರ್ಗಳು, ಸೋಷಿಯಲ್ ಮೀಡಿಯಾ ಮಂದಿ ಬಾರದಂತೆ ಉತ್ತರ ಪ್ರದೇಶ ಸರ್ಕಾರ ನಿಷೇಧ ಹೇರಿದೆ.
ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಿಕ್ಷಣ ಶಾಲೆಗಳಿಗೆ ಹೊರಗಿನವರು, ಯೂಟ್ಯೂಬರ್ಗಳು ಮತ್ತು ‘ಸೋಷಿಯಲ್ ಮೀಡಿಯಾ ಚಾನೆಲ್ಗಳಿಗೆ ಸಂಬಂಧಿಸಿದ ವ್ಯಕ್ತಿಗಳ’ ಅನಧಿಕೃತ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಜಿಲ್ಲಾ ಮೂಲ ಶಿಕ್ಷಣಾಧಿಕಾರಿ ಮನೀಶ್ ಸಿಂಗ್ ಅವರು ಈ ಕುರಿತು ಶುಕ್ರವಾರ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಪ್ರಾಥಮಿಕ ಶಿಕ್ಷಣ ಶಾಲೆಗಳ ಆವರಣಕ್ಕೆ ಹೊರಗಿನವರು ಅನಧಿಕೃತವಾಗಿ ಪ್ರವೇಶಿಸುವುದನ್ನು ತಡೆಯುವ ಈ ಆದೇಶದ ಉದ್ದೇಶ, ಶಾಲೆಗಳಲ್ಲಿನ ಕಲಿಕೆಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಹಾಗೂ ಶಿಕ್ಷಕ ವೃತ್ತಿಯ ಘನತೆಯನ್ನು ಕಾಪಾಡುವುದಾಗಿದೆ ಎಂದು ಸಿಂಗ್ ಹೇಳಿದ್ದಾರೆ.
“ನನ್ನಿಂದ ಅಥವಾ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಯಾವುದೇ ಹೊರಗಿನ ವ್ಯಕ್ತಿ, ಯೂಟ್ಯೂಬರ್ ಅಥವಾ ಸೋಷಿಯಲ್ ಮೀಡಿಯಾ ಚಾನೆಲ್ಗೆ ಸಂಬಂಧಿಸಿದ ವ್ಯಕ್ತಿ ಶಾಲಾ ಆವರಣ ಪ್ರವೇಶಿಸುವಂತಿಲ್ಲ. ಅಲ್ಲದೆ ಫೋಟೋ ತೆಗೆಯುವುದು ಅಥವಾ ವಿಡಿಯೋಗ್ರಫಿ ನಡೆಸುವುದಕ್ಕೂ ಅವಕಾಶವಿಲ್ಲ” ಎಂದು ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.
ಇದೇ ರೀತಿಯ ಆದೇಶಗಳನ್ನು ಇತರ ಹಲವು ಜಿಲ್ಲೆಗಳಲ್ಲೂ ಹೊರಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕಾರಣವೇನು?
ಬಲಿಯಾ ಜಿಲ್ಲೆಯ ಬೈರಿಯಾ ಪ್ರದೇಶದಲ್ಲಿ ನಡೆದ ಘಟನೆಯೊಂದರ ಕೆಲವೇ ದಿನಗಳ ಬಳಿಕ ಈ ನಿರ್ದೇಶನ ಹೊರಬಿದ್ದಿದೆ. ಶಾಲೆಯೊಂದಕ್ಕೆ ಶಿಕ್ಷಕರೊಬ್ಬರು ತಡವಾಗಿ ಆಗಮಿಸುತ್ತಿರುವುದನ್ನು ತೋರಿಸುವ ವಿಡಿಯೋವನ್ನು ಸೋಷಿಯಲ್ ಮೀಡಿಯಾ ಚಾನೆಲ್ವೊಂದು ಹಂಚಿಕೊಂಡಿತ್ತು ಎನ್ನಲಾಗಿದೆ.