ಹೈದರಾಬಾದ್: ರಸ್ತೆ ಬದಿ ಬರುತ್ತಿದ್ದ ಮಹಿಳೆ ಮೇಲೆ ಕಾರು ಹರಿಸಿ ಗಂಭೀರವಾಗಿ ಗಾಯಗೊಳಿಸಿದ ಆರೋಪ ಚಿತ್ರ ನಿರ್ಮಾಪಕರೊಬ್ಬರ ವಿರುದ್ಧ ಕೇಳಿಬಂದಿದ್ದು, ಅಪಘತದ ವಿಡಿಯೋ ವೈರಲ್ ಆಗುತ್ತಿದೆ.
ಹೈದರಾಬಾದ್ ನ ನಾಂಪಲ್ಲಿಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯೊಬ್ಬರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನಿರ್ಮಾಪಕ ಬೊಮ್ಮಕು ಮುರಳಿ ಅವರಿಗೆ ಸೇರಿದ ಕಾರು ಢಿಕ್ಕಿಯಾಗಿದ್ದು, ಕಾರಿನಡಿ ಸಿಲುಕಿದ ಮಹಿಳೆಯ ಕಾಲು ನಜ್ಜುಗುಜ್ಜಾಗಿದೆ.
ಅಪಘಾತದ ಬಳಿಕ ಕಾರು ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳೀಯರು ಕೂಡಲೇ ಗಾಯಾಳು ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಕಾರಿನ ನಂಬರ್ ಬರೆದುಕೊಂಡಿದ್ದ ಸ್ಥಳೀಯರು ಕಾರು ಚಿತ್ರನಿರ್ಮಾಪಕ ಬೊಮ್ಮಕು ಮುರಳಿ ಅವರದ್ದು ಎಂದು ಪತ್ತೆ ಮಾಡಿ, ಅವರನ್ನು ಸಂಪರ್ಕಿಸಿದ್ದಾರೆ.
ಗಾಯಾಳು ಮಹಿಳೆಯ ಕುಟುಂಬಸ್ಥರು ಕೂಡ ಅವರೊಂದಿಗೆ ಮಾತನಾಡಿ ಚಿಕಿತ್ಸೆ ವೆಚ್ಚ ಭರಿಸುವಂತೆ ಕೇಳಿದ್ದು, ಇದಕ್ಕೆ ನಿರ್ಮಾಪಕ ಮುರಳಿ ನಿರಾಕರಿಸಿದ್ದಾರೆ ಎನ್ನಲಾಗಿದೆ.
ಕಾರು ನನ್ನದೇ.. ಆದರೆ ಕಾರನ್ನು ನಾನು ಚಲಾಯಿಸಿಲ್ಲ. ಡ್ರೈವರ್ ಇದ್ದ.. ಹೀಗಾಗಿ ಆತನ ವಿರುದ್ಧ ಏನಾದರೂ ಕ್ರಮ ಕೈಗೊಳ್ಳಿ ಆದರೆ ನಾನು ಪರಿಹಾರ ನೀಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ.
“ನನ್ನ ಚಾಲಕ ಅಪಘಾತ ಮಾಡಿದರೆ ಅದಕ್ಕೂ ನನಗೂ ಏನು ಸಂಬಂಧ?..ನನ್ನ ಗಮನಕ್ಕೆ ಬಾರದಂತೆ ಚಾಲಕ ಕಾರನ್ನು ತೆಗೆದುಕೊಂಡು ಹೋಗಿದ್ದಾನೆ. ಬೇಕಾದರೆ ಆತನ ವಿರುದ್ಧ ಪ್ರಕರಣ ದಾಖಲಿಸಿ, ಅಗತ್ಯವಿದ್ದರೆ ಕೊಂದುಬಿಡಿ” ಚಿಕಿತ್ಸಾ ಬಿಲ್ ಪಾವತಿಸುವುದು ಅಥವಾ ಪೊಲೀಸ್ ಠಾಣೆಯಲ್ಲಿ ಕುಳಿತುಕೊಳ್ಳುವಂತಹ ವಿಚಾರಗಳಿಗೆ ತಮ್ಮ ಬಳಿ ಸಮಯವಿಲ್ಲ ಎಂದು ಬೊಮ್ಮಕು ಮುರಳಿ ಹೇಳಿದ್ದಾರೆ ಎಂದು ಹೇಳಲಾಗಿದೆ.
ವಿಡಿಯೋ ವೈರಲ್
ಇನ್ನು ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ರಸ್ತೆ ಬದಿ ಬರುತ್ತಿದ್ದ ಮಹಿಳೆಯನ್ನು ಕಾರು ಗುದ್ದಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಅಪಘಾತ ಬಳಿಕ ಮಹಿಳೆ ಚೀರಾಟ ಕೇಳೆ ಕಾರು ನಿಂತಿದೆಯಾದರೂ ಜನ ಸೇರುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿರುವುದು ಕಂಡುಬಂದಿದೆ.