ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಕೆಂಪುಕೋಟೆಯ ಬಳಿ ನಡೆದ ಭೀಕರ ಕಾರು ಬಾಂಬ್ ಸ್ಫೋಟದ ತನಿಖೆಯಲ್ಲಿ ಜಾಗತಿಕ ಮಟ್ಟದ ಸ್ಫೋಟಕ ತಿರುವು ಸಿಕ್ಕಿದ್ದು, ದಾಳಿ ಹಿಂದೆ ಅಲ್-ಖೈದಾ ಕೈವಾಡದ ಕುರಿತು ಮಹತ್ವದ ಸಾಕ್ಷ್ಯ ದೊರೆತಿದೆ.
ಈ ದಾಳಿಯನ್ನು 'ಅಲ್-ಖೈದಾ ಇನ್ ದಿ ಇಂಡಿಯನ್ ಸಬ್ಕಾಂಟಿನೆಂಟ್' (AQIS) ಉಗ್ರ ಸಂಘಟನೆಯೇ ನಡೆಸಿರುವುದು ಅಧಿಕೃತವಾಗಿ ಸಾಬೀತಾಗಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ತಿಳಿಸಿದೆ.
ಐಎಸ್ಐಎಲ್ (ISIL) ಮತ್ತು ಅಲ್ಖೈದಾ ಕುರಿತ 1267 ನಿರ್ಬಂಧ ಸಮಿತಿಗೆ ಸಲ್ಲಿಸಲಾದ ವಿಶ್ಲೇಷಣಾ ಬೆಂಬಲ ಮತ್ತು ನಿರ್ಬಂಧಗಳ ಮೇಲ್ವಿಚಾರಣಾ ತಂಡದ 38ನೇ ವರದಿಯಲ್ಲಿ ಈ ಮಾಹಿತಿ ಉಲ್ಲೇಖಿಸಲಾಗಿದೆ.
AQIS ಸಂಘಟನೆಯು ಚದುರಿದ ಉಗ್ರ ಸಂಘಟನೆಯಿಂದ ಪ್ರಾದೇಶಿಕ ಭಯೋತ್ಪಾದಕ ಸಂಘಟನೆಯಾಗಿ ತನ್ನ ಕಾರ್ಯವೈಖರಿಯನ್ನು ಬದಲಿಸಿಕೊಂಡಿದೆ ಎಂದು ವರದಿ ಹೇಳಿದೆ. ದೊಡ್ಡ ಗುಂಪುಗಳ ಬದಲಿಗೆ ಸಣ್ಣ ವಿಭಾಗಗಳ ಮೂಲಕ ಸಂಘಟನೆ ತನ್ನ ಸಾಗಣೆ ಹಾಗೂ ಹಣಕಾಸು ಜಾಲಗಳನ್ನು ಅಭಿವೃದ್ಧಿಪಡಿಸಿಕೊಂಡಿದೆ ಎಂದು ತಿಳಿಸಲಾಗಿದೆ.
2025ರ ನವೆಂಬರ್ನಲ್ಲಿ ದೆಹಲಿಯ ಕೆಂಪುಕೋಟೆ ಬಳಿ ನಡೆದ ದಾಳಿಗೆ ಅಲ್-ಖೈದಾ ಇನ್ ದಿ ಇಂಡಿಯನ್ ಸಬ್ಕಾಂಟಿನೆಂಟ್ (AQIS) ಅನ್ನು ಅಧಿಕೃತವಾಗಿ ಹೊಣೆಗಾರರನ್ನಾಗಿ ಮಾಡಲಾಗಿದೆ” ಎಂದು ವರದಿಯಲ್ಲಿ ಹೇಳಲಾಗಿದೆ.
ಭೀಕರ ಭಯೋತ್ಪಾದಕ ದಾಳಿ
ದೆಹಲಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಗಳಲ್ಲಿ ಇದೂ ಒಂದಾಗಿದ್ದು, ಕೆಂಪುಕೋಟೆ ಮೆಟ್ರೋ ನಿಲ್ದಾಣದ ಸಮೀಪದ ಟ್ರಾಫಿಕ್ ಸಿಗ್ನಲ್ನಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಕಾರಿನಲ್ಲಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಸುಮಾರು 15 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.
ಅಲ್-ಖೈದಾ ಇನ್ ದಿ ಇಂಡಿಯನ್ ಸಬ್ಕಾಂಟಿನೆಂಟ್ ಬಾಂಗ್ಲಾದೇಶವನ್ನು ಬಳಸಿಕೊಂಡು ಅಲ್ಲಿ ತನ್ನ ಉಗ್ರ ಸಂಘಟನೆಗಳನ್ನು ಸ್ಥಾಪಿಸಲು ಪ್ರಯತ್ನಿಸುತ್ತಿರುವ ಬಗ್ಗೆಯೂ ವರದಿ ಕಳವಳ ವ್ಯಕ್ತಪಡಿಸಿದೆ. ಅಲ್ಖೈದಾ ಮತ್ತು ಐಎಸ್ಐಎಲ್ (ದಾಇಶ್) ಸಂಘಟನೆಗಳು ರಾಸಾಯನಿಕ ಹಾಗೂ ಜೈವಿಕ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರಂತರ ಆಸಕ್ತಿ ಹೊಂದಿವೆ. ಆದರೆ, ತಾಂತ್ರಿಕ ಸವಾಲುಗಳನ್ನು ಎದುರಿಸಲು ಅವುಗಳಿಗೆ ಇದುವರೆಗೆ ಸಾಧ್ಯವಾಗಿಲ್ಲ ಎಂದು ವರದಿ ತಿಳಿಸಿದೆ.
ಫೆಬ್ರವರಿಯಲ್ಲಿ ಐಎಸ್ಐಎಲ್ನ ಇಂಗ್ಲಿಷ್ ಭಾಷೆಯ Invade ನಿಯತಕಾಲಿಕದಲ್ಲಿ ಬೊಟುಲಿನಮ್ ವಿಷ ಮತ್ತು ಸಯನೈಡ್ ತಯಾರಿಸುವ ಕುರಿತು ಸೂಚನೆಗಳನ್ನು ಪ್ರಕಟಿಸಲಾಗಿತ್ತು ಎಂದು ವರದಿ ಹೇಳಿದೆ. ಐಎಸ್ಐಎಸ್-ಖೊರಾಸನ್ (ISIL-K) ಸಂಘಟನೆ ರಿಸಿನ್ ಅಭಿವೃದ್ಧಿಪಡಿಸುವಲ್ಲಿ ವಿಶೇಷ ಆಸಕ್ತಿ ತೋರಿದ್ದು, ಕಳೆದ ಒಂದು ವರ್ಷದಲ್ಲಿ ಅದಕ್ಕೆ ಸಂಬಂಧಿಸಿದ ಸೂಚನೆಗಳನ್ನು ಹರಡಿತ್ತು ಎಂದು ವರದಿ ತಿಳಿಸಿದೆ.
ಮೂವರ ಬಂಧನ
2025ರ ಅಂತ್ಯದಲ್ಲಿ ಭಾರತೀಯ ಅಧಿಕಾರಿಗಳು ಮೂವರನ್ನು ಬಂಧಿಸಿದ್ದರು. ಅವರಲ್ಲಿ ಓರ್ವ ವೈದ್ಯನಾಗಿದ್ದು, ವಿದೇಶದಲ್ಲಿದ್ದ ಐಎಸ್ಐಎಲ್ ವಿಭಾಗವನ್ನು ರಿಸಿನ್ ಅಭಿವೃದ್ಧಿಪಡಿಸುವಂತೆ ಅವರಿಗೆ ಸೂಚಿಸಿತ್ತು ಎಂದು ಆರೋಪಿಸಲಾಗಿತ್ತು.
ಪ್ರಾದೇಶಿಕ ಭದ್ರತಾ ಪರಿಸ್ಥಿತಿಯ ಕುರಿತು, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ನಿರಂತರ ಗಡಿಯಾಚೆಗಿನ ದಾಳಿಗಳ ನಡುವೆ ದಕ್ಷಿಣ ಏಷ್ಯಾದಲ್ಲಿ ಉದ್ವಿಗ್ನತೆ ಇನ್ನೂ ಹೆಚ್ಚಿನ ಮಟ್ಟದಲ್ಲಿದೆಎಂದು ವರದಿ ಹೇಳಿದೆ.
ಅಫ್ಘಾನಿಸ್ತಾನದಿಂದ ಎದುರಾಗುತ್ತಿರುವ ಭಯೋತ್ಪಾದಕ ಬೆದರಿಕೆ ಬಹುತೇಕ ಬದಲಾಗದೆ ಮುಂದುವರಿದಿದೆ. ಅಫ್ಘಾನಿಸ್ತಾನದಲ್ಲಿ ಹಲವಾರು ಉಗ್ರ ಸಂಘಟನೆಗಳು ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರುವುದು ನೆರೆಯ ರಾಷ್ಟ್ರಗಳು ಹಾಗೂ ಮಧ್ಯ ಏಷ್ಯಾಕ್ಕೆ ನಿರಂತರ ಬೆದರಿಕೆಯಾಗಿದೆ ಎಂದು ವರದಿ ಹೇಳಿದೆ.
ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಹಾಗೂ ಇತರ ಉಗ್ರ ಸಂಘಟನೆಗಳನ್ನು ನಿಯಂತ್ರಿಸಲು ಅಫ್ಘಾನಿಸ್ತಾನದ ವಾಸ್ತವಿಕ ಆಡಳಿತ ಪ್ರಯತ್ನಿಸುತ್ತಿದ್ದರೂ, ಭಯೋತ್ಪಾದಕ ಸಮಸ್ಯೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂದು ವರದಿ ತಿಳಿಸಿದೆ.
ಇದೇ ವೇಳೆ, ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (TTP) ಡಿಸೆಂಬರ್ 25ರಂದು ತನ್ನ ವಾರ್ಷಿಕ ನಾಯಕತ್ವ ಮಂಡಳಿ ಸಭೆಯ ಬಳಿಕ ಹೊಸ ಸಂಘಟನೆ ರಚನೆಯನ್ನು ಘೋಷಿಸಿದೆ. ಬಲೂಚಿಸ್ತಾನ ಮತ್ತು ಮಧ್ಯ ಪ್ರದೇಶ, ಕಾಶ್ಮೀರ ಮತ್ತು ಗಿಲ್ಗಿಟ್ಗಾಗಿ ಎರಡು ಹೊಸ ವಿಭಾಗಗಳನ್ನು ರಚಿಸಲಾಗಿದೆ. ಇದರ ಜೊತೆಗೆ ‘TTP ಏರ್ ಫೋರ್ಸ್’ ಎಂದು ಕರೆಯಲಾಗಿರುವ ಹೊಸ ವಿಭಾಗವನ್ನೂ ರಚಿಸಲಾಗಿದೆ ಎಂದು ವರದಿ ತಿಳಿಸಿದೆ.