ನವದೆಹಲಿ: ‘ಕಾಕ್ರೋಚ್’ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮತ್ತೆ ಸ್ಪಷ್ಟನೆ ನೀಡಿರುವ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, 'ನನ್ನ ಮಾತನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ' ಎಂದು ಹೇಳಿದ್ದಾರೆ.
ನ್ಯಾಯಾಲಯದ ವಿಚಾರಣೆಗಳ ವಿಡಿಯೊ ತುಣುಕುಗಳನ್ನು ಸೂಕ್ತ ಸಂದರ್ಭವಿಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ತಮ್ಮ ಮೌಖಿಕ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಿ “ದುರುದ್ದೇಶದಿಂದ ದುರುಪಯೋಗಪಡಿಸಿಕೊಳ್ಳಲಾಗಿದ್ದು, ಯುವಕರನ್ನು ದಾರಿ ತಪ್ಪಿಸುವ ದುರುದ್ದೇಶದ ಯತ್ನ” ಎಂದು ಹೇಳಿದ್ದಾರೆ.
ಮೇ 15, 2026ರಂದು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ವೇಳೆ CJI ಸೂರ್ಯಕಾಂತ್ ಅವರು ಕೆಲವು ನಕಲಿ ಪದವಿ ಹೊಂದಿರುವ ವ್ಯಕ್ತಿಗಳನ್ನು ವ್ಯವಸ್ಥೆಯ ವಿರುದ್ಧ ದಾಳಿ ನಡೆಸಲು ಸಾಮಾಜಿಕ ಜಾಲತಾಣ ಅಥವಾ RTI ಕಾರ್ಯಕರ್ತರನ್ನು “ಜಿರಳೆಗಳಿಗೆ” ಹೋಲಿಸಿದ್ದರು.
ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದ ವ್ಯಂಗ್ಯಾತ್ಮಕವಾಗಿ ‘Cockroach Janta Party’ (CJP) ಎಂಬ ಆನ್ಲೈನ್ ಅಭಿಯಾನವೂ ಹುಟ್ಟಿಕೊಂಡಿತ್ತು.
ಇದೀಗ DD Newsಗೆ ನೀಡಿದ ಸಂದರ್ಶನದಲ್ಲಿ ಈ ವಿವಾದದ ಕುರಿತು ಪ್ರತಿಕ್ರಿಯಿಸಿರುವ CJI ಸೂರ್ಯಕಾಂತ್, ನ್ಯಾಯಾಲಯದ ಕಲಾಪಗಳ ವಿಡಿಯೊ ತುಣುಕುಗಳನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸೂಕ್ತ ಸಂದರ್ಭವಿಲ್ಲದೆ ಪ್ರಸಾರ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
“ನನ್ನ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಿ ದುರುಪಯೋಗಪಡಿಸಿಕೊಳ್ಳಲಾಗಿದೆ. ನಾನು ಹೇಳದೇ ಇರುವ ಮಾತನ್ನು ಹೇಳಿದಂತೆ ಬಿಂಬಿಸಲಾಗಿದೆ. ಇದು ಅತ್ಯಂತ ದುರದೃಷ್ಟಕರ. ವಿಶೇಷವಾಗಿ ದೇಶದ ಯುವಕರನ್ನು ದಾರಿ ತಪ್ಪಿಸುವ ದುರುದ್ದೇಶದ ದೊಡ್ಡ ಪ್ರಯತ್ನ ಇದಾಗಿದೆ” ಎಂದು CJI ಹೇಳಿದ್ದಾರೆ.
ಇದೇ ವೇಳೆ ನ್ಯಾಯಾಂಗದ ವಿಚಾರಣೆಗಳ ಕುರಿತು ಮಾಧ್ಯಮಗಳು ಜವಾಬ್ದಾರಿಯುತವಾಗಿ ವರದಿ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ಸಮಾಜದಲ್ಲಿ ಸೌಹಾರ್ದತೆ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು CJI ಸೂರ್ಯಕಾಂತ್ ಇದೇ ವೇಳೆ ಹೇಳಿದ್ದಾರೆ.