ಜೈಪುರ: ರಾಷ್ಟ್ರಗೀತೆ 'ವಂದೇ ಮಾತರಂ'ಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಆರೋಪಿಸಿದ್ದು, ಪಕ್ಷವು ಜನರು ಹಾಗೂ ಈ ಗೀತೆಯನ್ನು ರಚಿಸಿದ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರಲ್ಲಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಚಿತ್ತೋರ್ಗಢದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾ, ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ, ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರು 'ವಂದೇ ಮಾತರಂ' ಗೀತೆಯನ್ನು ಅರ್ಧದಲ್ಲೇ ನಿಲ್ಲಿಸುವಂತೆ ಸೂಚಿಸಿದ್ದರು ಎಂದು ಆರೋಪಿಸಿದರು.
ವೋಟ್ ಬ್ಯಾಂಕ್ ರಾಜಕಾರಣದಿಂದಾಗಿ ಕಾಂಗ್ರೆಸ್ 'ವಂದೇ ಮಾತರಂ' ಅನ್ನು ಮರೆತಿದೆ. 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೆಂಪು ಕೋಟೆ ಹಾಗೂ ಧ್ವಜಾರೋಹಣ ನಡೆದ ಇತರ ಎಲ್ಲ ಸ್ಥಳಗಳಲ್ಲಿ 'ವಂದೇ ಮಾತರಂ' ಹಾಡಲಾಯಿತು ಎಂದು ಶಾ ಹೇಳಿದರು.
'ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕ್ರಾಂತಿಕಾರಿ ಘೋಷಣೆಯಾಗಿದ್ದ 'ವಂದೇ ಮಾತರಂ' ಅನ್ನು ಹಾಡಿದ ಕಾರಣಕ್ಕಾಗಿ ಸಾವಿರಾರು ಜನರು ಗುಂಡು ಹಾಗೂ ಲಾಠಿ ಏಟುಗಳನ್ನು ತಿಂದರು ಮತ್ತು ಜೈಲು ಸೇರಿದರು' ಎಂದು ಹೇಳಿದರು.
ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ, ಸೋನಿಯಾ ಗಾಂಧಿ ಅವರು ಪಕ್ಷದ ಅಧ್ಯಕ್ಷರಿಗೆ ಆ ಹಾಡನ್ನು ಅರ್ಧದಲ್ಲೇ ನಿಲ್ಲಿಸುವಂತೆ ಸೂಚಿಸಿದ್ದರು ಎಂದು ಅವರು ಆರೋಪಿಸಿದರು.
'ನಾವೆಲ್ಲರೂ ಇದನ್ನು ದೂರದರ್ಶನದಲ್ಲಿ ನೋಡಿದ್ದೇವೆ. ಸೋನಿಯಾ ಗಾಂಧಿ ಅವರು ಜನರಿಗೆ ಹಾಗೂ ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಅವರ ಆತ್ಮಕ್ಕೆ ಕ್ಷಮೆಯಾಚಿಸಬೇಕು. ನಿಮ್ಮಲ್ಲಿ ಕೊಂಚವಾದರೂ ನಾಚಿಕೆ ಉಳಿದಿದ್ದರೆ, ನೀವು ಕೈಮುಗಿದು ಬಂಕಿಮ್ ಬಾಬು ಅವರ ಅಮರ ಆತ್ಮ ಹಾಗೂ ಜನರ ಬಳಿ ಕ್ಷಮೆ ಯಾಚಿಸಬೇಕು' ಎಂದು ಅವರು ಹೇಳಿದರು.
ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದು ನಡೆದ 'ಅಟಲ್ ಗೌರವ ಸ್ಮೃತಿ ಸಮಾರಂಭ'ದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕೊಡುಗೆಗಳನ್ನು ಸ್ಮರಿಸಿದರು. ಪೋಖ್ರಾನ್ ಪರೀಕ್ಷೆಗಳ ನಂತರ ಅಂತರರಾಷ್ಟ್ರೀಯ ಒತ್ತಡವಿದ್ದರೂ ಭಾರತವನ್ನು ಪರಮಾಣು ಶಕ್ತಿಯನ್ನಾಗಿ ಪರಿವರ್ತಿಸುವುದು ಸೇರಿದಂತೆ ವಾಜಪೇಯಿ ಅವರು ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡರು ಎಂದು ಹೇಳಿದರು.
ವಾಜಪೇಯಿ ಅವರ ಸರ್ಕಾರವು ತಮ್ಮ ಅಧಿಕಾರಾವಧಿಯಲ್ಲಿ ಹಳ್ಳಿಗಳನ್ನು ರಸ್ತೆಗಳ ಮೂಲಕ ಸಂಪರ್ಕಿಸಿತು. ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಿತು ಮತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿತು. ಅಲ್ಲದೆ, ಬುಡಕಟ್ಟು ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಿದ ಕೀರ್ತಿಯೂ ವಾಜಪೇಯಿ ಅವರಿಗೆ ಸಲ್ಲುತ್ತದೆ ಎಂದು ಅವರು ತಿಳಿಸಿದರು.
ಬುಡಕಟ್ಟು ಕುಟುಂಬವೊಂದರಿಂದ ಬಂದು ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ದ್ರೌಪದಿ ಮುರ್ಮು ಅವರು ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವುದು, ಬುಡಕಟ್ಟು ಕಲ್ಯಾಣ ಕ್ಷೇತ್ರದಲ್ಲಿ ಸಾಧಿಸಲಾದ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಬುಡಕಟ್ಟು ಕಲ್ಯಾಣಕ್ಕೆ ನಿರಂತರವಾಗಿ ಆದ್ಯತೆ ನೀಡುತ್ತಾ ಬಂದಿದ್ದಾರೆ ಎಂದು ಅವರು ತಿಳಿಸಿದರು.