ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ ‘ದಿಮಾಗಿ ನಕ್ಸಲ್’ ಹೇಳಿಕೆಗೆ ಟೀಕೆ ವ್ಯಕ್ತಪಡಿಸಿದ್ದು, “ನಾನು ದಿಮಾಗಿ ನಕ್ಸಲ್ ಆಗಿರುವುದಕ್ಕೆ ಹೆಮ್ಮೆಪಡುತ್ತೇನೆ” ಎಂದು ಹೇಳಿದ್ದಾರೆ.
‘ದಿಮಾಗಿ ನಕ್ಸಲರು’ ವ್ಯವಸ್ಥೆಯೊಳಗೆ ಬೇರೂರಿದ್ದು, ನೀತಿಗಳ ಮೇಲೆ ಪ್ರಭಾವ ಬೀರುವ ಮೂಲಕ ಸಮಾಜಕ್ಕೆ ಅಪಾಯವನ್ನುಂಟುಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ನಿನ್ನೆ ದೆಹಲಿಯ ಕೆಂಪುಕೋಟೆಯ ಸ್ವಾತಂತ್ರ್ಯ ಭಾಷಣದಲ್ಲಿ ಹೇಳಿದ್ದರು. ಅಂತಹವರನ್ನು “ಗುರುತಿಸಿ, ಪ್ರತ್ಯೇಕಿಸಿ” ಎಂದು ಪ್ರಧಾನಿ ಜನರಿಗೆ ಕರೆ ನೀಡಿದ್ದರು.
ಕಾಡು ಪ್ರದೇಶಗಳಿಂದ ಸಶಸ್ತ್ರ ನಕ್ಸಲಿಸಂ ನ್ನು ನಿರ್ಮೂಲನೆ ಮಾಡುವಲ್ಲಿ ದೇಶ ಯಶಸ್ವಿಯಾಗಿದೆ. ಆದರೆ ಅದರ ಸಿದ್ಧಾಂತವನ್ನು ಬೆಂಬಲಿಸುವವರು ಹಿಂಸೆ ಮತ್ತು ಅರಾಜಕತೆಯನ್ನು ಉತ್ತೇಜಿಸಲು ಅವಕಾಶಗಳನ್ನು ಹುಡುಕುತ್ತಿದ್ದಾರೆ ಎಂದು ಎಚ್ಚರಿಸಿದರು.
ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯಿಸಿದ ಚಿದಂಬರಂ ಅವರು ಎಕ್ಸ್ನಲ್ಲಿ, “ನಾನು ದಿಮಾಗಿ ನಕ್ಸಲ್ ಆಗಿರುವುದಕ್ಕೆ ಹೆಮ್ಮೆಪಡುತ್ತೇನೆ!” ಎಂದು ಪೋಸ್ಟ್ ಮಾಡಿದ್ದಾರೆ.
ಮಾವೋವಾದಿ ಮನಸ್ಥಿತಿಯುಳ್ಳವರು ಹಲವು ವರ್ಷಗಳಿಂದ ಅಧಿಕಾರದ ಕೇಂದ್ರಗಳಲ್ಲಿ ತಮ್ಮ ಪ್ರಭಾವವನ್ನು ಸ್ಥಾಪಿಸಿಕೊಂಡಿದ್ದು, ಸರ್ಕಾರದ ವಿವಿಧ ಸಮಿತಿಗಳಲ್ಲಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಾ ಸಾರ್ವಜನಿಕ ನೀತಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಮೋದಿ ಆರೋಪಿಸಿದ್ದರು.
ಈ ಸವಾಲನ್ನು ಲಘುವಾಗಿ ಪರಿಗಣಿಸಬಾರದು ಎಂದು ಎಚ್ಚರಿಸಿದ ಅವರು, ಹೆಚ್ಚಿನ ಜಾಗರೂಕತೆ ಅಗತ್ಯವಿದೆ ಎಂದು ಹೇಳಿದ್ದರು.
ದಶಕಗಳ ಕಾಲ ನಡೆದ ನಕ್ಸಲಿಸಂ ಮತ್ತು ಮಾವೋವಾದಿ ಹಿಂಸಾಚಾರವು ಕೋಟ್ಯಂತರ ಯುವಜನರ ಜೀವನ ಹಾಗೂ ಭವಿಷ್ಯದ ಆಶಯಗಳನ್ನು ನಾಶಪಡಿಸಿದೆ. ಈ ಸಂಘರ್ಷದಲ್ಲಿ 3,500ಕ್ಕೂ ಹೆಚ್ಚು ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಈ ಸಂಖ್ಯೆ ಯುದ್ಧಗಳಲ್ಲಿ ಮೃತಪಟ್ಟ ಸೈನಿಕರ ಸಂಖ್ಯೆಯನ್ನೂ ಮೀರಿದೆ ಎಂದು ಮೋದಿ ಹೇಳಿದ್ದರು.
ಹಿಂಸಾಚಾರದ ಮೂಲಕ ನಕ್ಸಲಿಸಂ ಒಂದು ಕಾಲದಲ್ಲಿ ಭಾರತದ ವಿಶಾಲ ಪ್ರದೇಶಗಳು ಮತ್ತು ದೊಡ್ಡ ಜನಸಂಖ್ಯೆಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿತ್ತು, 2014ರಲ್ಲಿ ಅಧಿಕಾರಕ್ಕೆ ಬಂದ ತಮ್ಮ ಸರ್ಕಾರವು ನಕ್ಸಲಿಸಂ ನಿರ್ಮೂಲನೆಗೆ ಆದ್ಯತೆ ನೀಡಿದೆ ಎಂದು ತಿಳಿಸಿದ್ದರು.
ದಶಕಗಳಿಂದ ಬಾಕಿ ಉಳಿದಿರುವ ಸವಾಲುಗಳಿಗೆ ಅಂತ್ಯ ಹಾಡಬೇಕು ಎಂದು ಮೋದಿ ಕರೆನೀಡಿದ್ದರು.
ನಕ್ಸಲಿಸಂ ಮತ್ತು ಮಾವೋವಾದವು ಲಕ್ಷಾಂತರ ಯುವಜನರ ಭವಿಷ್ಯವನ್ನು ನಾಶಪಡಿಸಿದ್ದು, ಅಸಂಖ್ಯಾತ ಕುಟುಂಬಗಳ ಮಕ್ಕಳನ್ನು ಬಲಿ ತೆಗೆದುಕೊಂಡಿದೆ. ಒಂದು ಕಾಲದಲ್ಲಿ ಬಂಡಾಯ ಚಟುವಟಿಕೆಗಳಿಂದ ಬಾಧಿತವಾಗಿದ್ದ ಪ್ರದೇಶಗಳಲ್ಲಿ ಇದೀಗ ಹಿಂಸೆ ಮತ್ತು ರಕ್ತಪಾತದ ಬದಲಿಗೆ ಅಭಿವೃದ್ಧಿ ಹಾಗೂ ರಾಷ್ಟ್ರಧ್ವಜ ಕಾಣಿಸಿಕೊಳ್ಳುತ್ತಿದ್ದು, ನಕ್ಸಲೈಟ್ ಮತ್ತು ಮಾವೋವಾದಿ ಹಿಂಸಾಚಾರಕ್ಕೆ ಅಂತ್ಯ ಹಾಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದ್ದರು.