ನವದೆಹಲಿ: ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸುಮಾರು 8 ತಿಂಗಳ ಬಳಿಕ ತಮ್ಮ ತಮ್ಮ ಹೊಸ ತಂಡವನ್ನು ಪ್ರಕಟಿಸಲು ಸಜ್ಜಾಗಿದ್ದು, ಮಾಜಿ ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಮತ್ತು ಅನುರಾಗ್ ಠಾಕೂರ್ ಅವರಿಗೆ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿ ನೀಡಲಾಗುತ್ತಿದೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ:
ನಿತಿನ್ ತಂಡಕ್ಕೆ ಸ್ಮೃತಿ, ಅನುರಾಗ್
ಈ ಹಿಂದೆ ಪ್ರಧಾನಿ ಮೋದಿ ಕ್ಯಾಬಿನೆಟ್ನಲ್ಲಿದ್ದ ಈ ಇಬ್ಬರು ಪ್ರಭಾವಿ ನಾಯಕರನ್ನು ಇದೀಗ ನೇರವಾಗಿ ಪಕ್ಷದ ರಾಷ್ಟ್ರೀಯ ಸಂಘಟನೆಗೆ ಕರೆತರಲಾಗುತ್ತಿದೆ. ಇವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಥವಾ ಪ್ರಮುಖ ರಾಜ್ಯಗಳ ಉಸ್ತುವಾರಿಯಂತಹ ಹುದ್ದೆಗಳನ್ನು ನೀಡುವ ಸಾಧ್ಯತೆಯಿದೆ. ಅದರಲ್ಲೂ, ಮುಂಬರುವ ವಿಧಾನಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಬಾರಿ ಶೇ. 33 ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲು ಪಕ್ಷ ನಿರ್ಧರಿಸಿದೆ. ಅದರಂತೆ, ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರಿಗೂ ಪ್ರಮುಖ ಸಂಘಟನಾ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇವರೊಂದಿಗೆ, ಹರೀಶ್ ದ್ವಿವೇದಿ ಹಾಗೂ ವಿನೋದ್ ತಾವ್ಡೆ ಅವರು ಸಂಘಟನೆಗೆ ಸೇರಿಸಿಕೊಳ್ಳಬಹುದು.
ರಾಘವ್ ಚಡ್ಡಾಗೆ ಮಹತ್ವದ ಜವಾಬ್ದಾರಿ
ಆಮ್ ಆದ್ಮಿ ಪಕ್ಷದಿಂದ ಹೊರಬಂದು ಈ ವರ್ಷದ ಏಪ್ರಿಲ್ನಲ್ಲಿ ಬಿಜೆಪಿ ಸೇರಿದ್ದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರಿಗೆ ಈಗಾಗಲೇ ಸಂಸತ್ತಿನಲ್ಲಿ ಮಹತ್ವದ ಸ್ಥಾನ ನೀಡಲಾಗಿದೆ. ಅಂದ್ರೆ, ರಾಘವ್ ಚಡ್ಡಾ ಅವರನ್ನು ರಾಜ್ಯಸಭೆಯ ಅರ್ಜಿಗಳ ಸಮಿತಿ ಅಧ್ಯಕ್ಷರನ್ನಾಗಿ ರಾಜ್ಯಸಭಾ ಸಭಾಪತಿಗಳು ನೇಮಕ ಮಾಡಿದ್ದಾರೆ. ಇದರೊಂದಿಗೆ, ಮುಂಬರುವ ಪಂಜಾಬ್ ರಾಜ್ಯದ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಪಕ್ಷದಲ್ಲೂ ಮಹತ್ವದ ಹುದ್ದೆ ನೀಡುವ ಸಾಧ್ಯೆತೆ ಇದೆ.
ಕ್ಯಾಬಿನೆಟ್ನಿಂದ ಸಂಘಟನೆಗೆ..
ಮುಂಬರುವ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸಚಿವ ಸಂಪುಟದಲ್ಲೂ ಬದಲಾವಣೆಯಾಗಲಿದ್ದು, ಅಲ್ಲಿನ ಕೆಲವು ಹಿರಿಯ ಮಂತ್ರಿಗಳನ್ನು ಪಕ್ಷದ ಕೆಲಸಗಳಿಗೆ ನಿಯೋಜಿಸಲಾಗುತ್ತಿದೆ. ಜೊತೆಗೆ ಕೆಲ ಯುವ ಸಂಸದರಿಗೆ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.