ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುವಕರನ್ನು "ಜನರೇಷನ್ ಗಟರ್" ಎಂದು ಟೀಕಿಸಿದ್ದ ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ ಅವರನ್ನು ಯೋಗ ಗುರು ಹಾಗೂ ಉದ್ಯಮಿ ಬಾಬಾ ರಾಮದೇವ್ ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ದೇಶದ ಯುವಕರನ್ನು "ಜನರೇಷನ್ ಗಟರ್" ಎಂದು ಟೀಕಿಸುವುದು ಅವರ "ಕೆಟ್ಟ ಮನಸ್ಥಿತಿಯನ್ನು" ಪ್ರತಿಬಿಂಬಿಸುತ್ತದೆ ಎಂದು ಕಿಡಿ ಕಾರಿದ ಬಾಬಾ ರಾಮ್ದೇವ್ ಅವರು, ಸಂಸದೆ ಕಂಗನಾ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಖಾಸಗಿ ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ಕಂಗನಾ ಹೇಳಿಕೆಗೆ ಪ್ರತಿಕ್ರಿಯಿಸಿದ ಯೋಗಗುರು ಬಾಬಾ ರಾಮ್ದೇವ್, ಆಕೆ ಯಾರು? ಅವಳ ಹಿಂದಿನ ಚಟುವಟಿಕೆಗಳು ಹೇಗಿದ್ದವು? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ನಾನು ಅಂತಹ ಜನರ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದಿದ್ದಾರೆ.
ಬಳಿಕ ಆಕೆ ನಟಿ ಆಗಲೀ, ಸಂಸದೆಯೇ ಆಗಲೀ ಯುವ ಸಮುದಾಯವನ್ನು ಹೀಗೆ ಗಟರ್ ಪೀಳಿಗೆ ಎನ್ನುವುದು ಸರಿಯಲ್ಲ. ಬಿಜೆಪಿ ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ ಎಂದು ನಾನು ಮನವಿ ಮಾಡುತ್ತೇನೆ ಎಂದರು.
ಆಕೆ ಯಾರು? ಅವಳ ಬಾಲ್ಯ ಹಾಗೂ ಯೌವನದ ದಿನಗಳು ಹೇಗಿದ್ದವು? ಅವಳು ಇಲ್ಲಿವರೆಗೆ ಏನೇನು ಮಾಡಿದ್ದಾಳೆ? ಇದರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಹೀಗೆ ಈಡೀ ಪೀಳಿಗೆಯನ್ನೇ ಗಟರ್ಗೆ ಹೋಲಿಸುವುದು ತಪ್ಪು, ಇದು ಆಕೆಯ ಕೆಟ್ಟ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ರಾಮ್ದೇವ್ ಅಕ್ರೋಶ ವ್ಯಕ್ತ ಪಡಿಸಿದ್ದಾರೆ.
ನಂತರ ಸಂದರ್ಶಕರು ಅವರು, ನಿಮ್ಮನ್ನು, ನಿಮ್ಮ ಯೋಗವನ್ನು ಹಿಂಬಾಲಿಸುತ್ತಾರೆ ಹಾಗೂ ತಮ್ಮನ್ನು ಸನಾತನಿ ಎಂದು ಗುರುತಿಸಿಕೊಳ್ಳುತ್ತಾರೆ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ರಾಮ್ದೇವ್, ಆಕೆ ನನ್ನನ್ನು, ನನ್ನ ಯೋಗವನ್ನು ಮೆಚ್ಚಿದರೆ, ನಾನು ಅವಳು ಹೇಳುವ ಎಲ್ಲಾ ಮಾತನ್ನು ಒಪ್ಪಲು ಸಾಧ್ಯವಿಲ್ಲ. ಹಾಗೆಯೇ ಅವಳು ಮಾಡುವ ಪಾಪವನ್ನು ಮರೆಮಾಚಲು ನನ್ನಿಂದ ಸಾಧ್ಯವಿಲ್ಲ ಎಂದಿದ್ದಾರೆ.