ಗಾಂಧಿನಗರ: ಇತ್ತೀಚೆಗೆ ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಕಾಕ್ರೋಚ್ ಜನತಾ ಪಕ್ಷ(ಸಿಜೆಪಿ)ದ ಪ್ರತಿಭಟನೆಯ ಸಂದರ್ಭದಲ್ಲಿ ಸರ್ಕಾರಿ ವಿರೋಧಿ ನಿರೂಪಣೆಗಳು ಕಂಡುಬಂದವು. ಇದನ್ನು ಎದುರಿಸಲು ಬಿಜೆಪಿಗೆ ನೈತಿಕ ಬೆಂಬಲ ಘೋಷಿಸಿ ಗುಜರಾತ್ ಪೊಲೀಸ್ ಕಾನ್ಸ್ಟೆಬಲ್ ಒಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಇತ್ತೀಚಿನ ರಾಜಕೀಯ ಬೆಳವಣಿಗೆಗಳು ತನಗೆ ಸರ್ಕಾರಿ ಹುದ್ದೆ ತ್ಯಾಗ ಮಾಡಲು ಪ್ರೇರೇಪಿಸಿವೆ ಎಂದು ಗುಜರಾತ್ ನ ಗಾಂಧಿಧಾಮ್ನ ಪೂರ್ವ ಕಚ್ನಲ್ಲಿರುವ ಅದೇಸರ್ ಪೊಲೀಸ್ ಠಾಣೆಯಲ್ಲಿ ನಿಯೋಜನೆಗೊಂಡಿರುವ ರಾಮಗರ್ ಮೋಹನಗರ್ ಗೋಸಾಯಿ ಅವರು ಹೇಳಿಕೊಂಡಿದ್ದಾರೆ.
2029ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಗೆ ಬೆಂಬಲ ನೀಡುವುದಕ್ಕಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ರಾಮಗರ್ ಮೋಹನಗರ್ ಗೋಸಾಯಿ ಅವರು ಹೇಳಿದ್ದಾರೆ.
ಈ ಕುರಿತು ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಗೋಸಾಯಿ ಅವರು, ಪೊಲೀಸ್ ಇಲಾಖೆಯಲ್ಲಿ ಸ್ಥಾನ ಪಡೆಯಲು ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ನಂತರ ಕೆಲಸ ಸಿಕ್ಕಿತು. ಆದರೆ, ಈಗ ಸೇವೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.
ಜಂತರ್ ಮಂತರ್ ಪ್ರತಿಭಟನೆಯ ನಂತರ ಪ್ರಧಾನಿಯವರು ದೇಶದ ಯುವಜನರ ಪರವಾಗಿ ನಿರ್ಧಾರಗಳನ್ನು ತೆಗೆದುಕೊಂಡರು. ಇದು ಸರ್ಕಾರಿ ಸೇವೆಗಿಂತ ಹೆಚ್ಚಾಗಿ ನಾಗರಿಕ ಮತ್ತು ಸಾಮಾಜಿಕ-ರಾಜಕೀಯ ಚಟುವಟಿಕೆಗೆ ನನ್ನ ಜೀವನವನ್ನು ಮುಡಿಪಾಗಿಡಲು ಪ್ರೇರೇಪಿಸಿತು ಎಂದು ಹೇಳಿದ್ದಾರೆ.