ನವದೆಹಲಿ: 200 ಕೋಟಿ ರೂಪಾಯಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಗುರುವಾರ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರಿಗೆ ಪತ್ರ ಬರೆದಿದ್ದು, ಇನ್ನೂ ಮೂರು 'ಪ್ರಮುಖ ಹಗರಣಗಳನ್ನು' ಬಯಲಿಗೆಳೆಯುವುದಾಗಿ ಬೆದರಿಕೆ ಹಾಕಿದ್ದಾರೆ.
'ಆತ್ಮೀಯ ಕೇಜ್ರಿವಾಲ್ ಜೀ, ಸತ್ಯೇಂದ್ರ ಜೀ ಮತ್ತು 'ಪ್ರಾಕ್ಸಿ'ಯವರೇ, ನಿಮ್ಮ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಡಲಾಗಿದೆ. 2021-22ರ ಅವಧಿಯ ಹಗರಣಗಳ ಬಯಲುಗೊಳಿಸುವಿಕೆಯು ಸರಿಯಾದದ್ದು ಎಂದು ಸಾಬೀತಾಗಿದೆ; ಈಗ 'ಅಬಕಾರಿ ನೀತಿ ಹಗರಣ'ದ ನಂತರ, ಈಗ 'ಜಲ ಮಂಡಳಿ' ಸರದಿ' ಎಂದಿದ್ದಾರೆ.
'ಇತರ ಮೂರು ಪ್ರಮುಖ ಇಲಾಖೆಗಳಲ್ಲಿನ ನಿಮ್ಮ ಇನ್ನೂ ಮೂರು 'ಹಗರಣಗಳು' ಮತ್ತು 'ಭ್ರಷ್ಟಾಚಾರ' ಬಯಲಾಗಲಿವೆ, ಚಿಂತಿಸಬೇಡಿ. ಶೀಘ್ರದಲ್ಲೇ, 'AAP' - 'Anytime, Always Party of scam', ಎಂಬ ನಿಮ್ಮ ಪಕ್ಷದ ಖ್ಯಾತಿಯು, 'ಹಗರಣಗಳು' ಎಂಬ ವಾಸ್ತವದ ಉತ್ತುಂಗಕ್ಕೇರಲಿದೆ' ಎಂದು ಆ ಪತ್ರದಲ್ಲಿ ತಿಳಿಸಲಾಗಿದೆ.
'ಪಂಜಾಬ್ ಜನರನ್ನು ಮತ್ತೆ ಮೂರ್ಖರನ್ನಾಗಿಸುವ ಬಗ್ಗೆ ಮರೆತುಬಿಡಿ; ಜನರು ನಿಮ್ಮನ್ನು ಒದ್ದು ಹೊರಹಾಕಲಿದ್ದಾರೆ. ದೆಹಲಿಯಲ್ಲಿ ನಡೆದಂತೆಯೇ, ಪಂಜಾಬ್ನಲ್ಲಿ ನಿಮ್ಮ ಅಹಂಕಾರ ಮತ್ತು ಹಗರಣಗಳ ಪಕ್ಷಕ್ಕೆ ಜನರು ಇನ್ನೂ ಕಠಿಣವಾದ ಪಾಠ ಕಲಿಸಲಿದ್ದಾರೆ' ಎಂದಿದ್ದಾರೆ.
ದೇಶದ ಯುವಜನತೆಯನ್ನು ಅಥವಾ 'ಜೆನ್ ಝೆಡ್' ಪೀಳಿಗೆಯನ್ನು ಪ್ರಚೋದಿಸಲು ಕೇಜ್ರಿವಾಲ್ ಅವರ 'proxy' ನಡೆಸುವ ತಂತ್ರ ಫಲಿಸುವುದಿಲ್ಲ ಮತ್ತು ಎಲ್ಲಕ್ಕಿಂತ ಮೊದಲು ಸುಕೇಶ್ ಮಾಜಿ ಮುಖ್ಯಮಂತ್ರಿಯ ಬಣ್ಣ ಬಯಲು ಮಾಡಲಿದ್ದಾರೆ ಎಂದು ಆ ಪತ್ರದಲ್ಲಿ ತಿಳಿಸಲಾಗಿದೆ.
'ನಿಮಗೊಂದು ಸುಳಿವು ನೀಡುತ್ತೇನೆ - 'ನೀವು ಮತ್ತು ಪ್ರಾಕ್ಸಿ' ಹಾಗೂ 'ಸಂಸ್ಥಾಪಕರು' - ನನ್ನೊಂದಿಗಿದ್ದ 2015 ಮತ್ತು 2016ರ ಒಡನಾಟ ನಿಮಗೆ ನೆನಪಿರಬಹುದು ಎಂದು ಭಾವಿಸುತ್ತೇನೆ. ನೀವು ಬಹುಶಃ ಭ್ರಮೆಯಲ್ಲಿದ್ದಿರಬಹುದು, ಆದರೆ ನನ್ನ ಬಳಿ ಖಚಿತ ಮಾಹಿತಿ ಇದೆ; ಶೀಘ್ರದಲ್ಲೇ ನಾನು ನಿಮಗೆ ಅಚ್ಚರಿ ನೀಡಲಿದ್ದೇನೆ' ಎಂದು ಪತ್ರದಲ್ಲಿ ಹೇಳಲಾಗಿದೆ.
ನಮ್ಮ ದೇಶದ ಭವಿಷ್ಯ ಹಾಗೂ ಯುವಶಕ್ತಿಯಾಗಿರುವ ನನ್ನ ತಮ್ಮ-ತಂಗಿಯರನ್ನು ಮೂರ್ಖರನ್ನಾಗಿಸಲು ನಾನು ನಿಮ್ಮನ್ನು ಬಿಡುವುದಿಲ್ಲ. ಹಾಗಾಗಿ ಕೇಜ್ರಿವಾಲ್ ಜೀ, ಸತ್ಯೇಂದ್ರ ಜೀ ಮತ್ತು ನಿಮ್ಮ ಪ್ರಾಕ್ಸಿ, ನಾನು ನಿಮ್ಮ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ಸಜ್ಜಾಗಿ ಬರುತ್ತಿದ್ದೇನೆ. ನಿಮ್ಮ ಆಟವನ್ನು ಸಂಪೂರ್ಣವಾಗಿ ಬಯಲಿಗೆಳೆಯುತ್ತೇನೆ. ನಿಮ್ಮೆಲ್ಲರ ಬಣ್ಣ ಬಯಲು ಮಾಡುತ್ತೇನೆ. ಅಪಾರ ಪ್ರೀತಿಯೊಂದಿಗೆ, ನಿಮ್ಮ ಪಾಲಿನ ಅತಿದೊಡ್ಡ ದುಃಸ್ವಪ್ನ' ಎಂದು ಅದರಲ್ಲಿ ಸೇರಿಸಲಾಗಿದೆ.