ಮಹಾಬಲಿಪುರಂ: ದಕ್ಷಿಣದ ರಾಜ್ಯಗಳಿಗೆ ಹೆಚ್ಚಿನ ಆರ್ಥಿಕ ಮತ್ತು ರಾಜಕೀಯ ಸಮಾನತೆ ಸಿಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ ಬಲವಾಗಿ ಪ್ರತಿಪಾದಿಸಿದ್ದಾರೆ. ನಮಗೆ ನಮ್ಮ ನಿಧಿಗಳಲ್ಲಿ , ನಮ್ಮ ಧ್ವನಿಯಲ್ಲಿ ನ್ಯಾಯಬೇಕು. ನಮಗೆ ನ್ಯಾಯಯುತವಾಗಿ ಅನುದಾನ ನೀಡಿ. ದಕ್ಷಿಣ ಭಾರತಕ್ಕೆ ಸಲ್ಲಬೇಕಾದ ನ್ಯಾಯಯುತ ಪಾಲನ್ನು ನೀಡಿ ಎಂದು ಡಿಕೆ ಶಿವಕುಮಾರ್ ಅವರು ಒತ್ತಾಯಿಸಿದ್ದಾರೆ.
ದಕ್ಷಿಣ ಭಾರತವು ಭಾರತೀಯ ಆರ್ಥಿಕತೆಯ ಪ್ರಮುಖ ಚಾಲಕ ಶಕ್ತಿ: ಇಲ್ಲಿ ಗುರುವಾರ ನಡೆದ ದಕ್ಷಿಣ ವಲಯ ಮಂಡಳಿಯ (Southern Zonal Council) 31ನೇ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಶಿವಕುಮಾರ್, ದಕ್ಷಿಣ ಭಾರತವು ಭಾರತೀಯ ಆರ್ಥಿಕತೆಯ ಪ್ರಮುಖ ಚಾಲಕ ಶಕ್ತಿ ಯಾಗಿದೆ ಎಂದು ಬಣ್ಣಿಸಿದರು. ದೇಶದ ಒಟ್ಟು ಜನಸಂಖ್ಯೆಯ ಸುಮಾರು ಶೇ. 20ರಷ್ಟನ್ನು ಹೊಂದಿದ್ದರೂ, ದಕ್ಷಿಣದ ಐದು ರಾಜ್ಯಗಳು ದೇಶದ ಒಟ್ಟು ಆಂತರಿಕ ಉತ್ಪನ್ನದ (GDP) ಸುಮಾರು ಶೇ. 33ರಷ್ಟು ಪಾಲನ್ನು ಹೊಂದಿವೆ ಎಂದು ಅವರು ತಿಳಿಸಿದರು.
ಸಾಫ್ಟ್ವೇರ್ ರಫ್ತು, ವಿದೇಶಿ ಹೂಡಿಕೆ, ಏರೋಸ್ಪೇಸ್, ಕಾಫಿ ಮತ್ತು ನವೋದ್ಯಯ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ರಾಜ್ಯದ ಕೊಡುಗೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಡಿಕೆ ಶಿವಕುಮಾರ್, ಈ ಬೆಳವಣಿಗೆಯಲ್ಲಿ "ಕರ್ನಾಟಕವು ಪ್ರಬಲ ಚಾಲಕ ಶಕ್ತಿಗಳಲ್ಲಿ ಒಂದಾಗಿದೆ" ಎಂದು ಹೇಳಿದರು.
ದೇಶದ ಜಿಡಿಪಿಗೆ ಕರ್ನಾಟಕ ಶೇ. 9ರಷ್ಟು ಕೊಡುಗೆ: ಭಾರತದ ಸಾಫ್ಟ್ವೇರ್ ರಫ್ತಿನಲ್ಲಿ ಕರ್ನಾಟಕವು ಶೇ. 42ರಷ್ಟು ಪಾಲನ್ನು ಹೊಂದಿದ್ದು, ಸುಮಾರು 1,100 ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (Global Capability Centres) ಹೊಂದಿದೆ ಮತ್ತು 2019 ಹಾಗೂ 2025ರ ನಡುವೆ ಭಾರತಕ್ಕೆ ಬಂದ ಒಟ್ಟು ವಿದೇಶಿ ನೇರ ಹೂಡಿಕೆಯ (FDI) ಪೈಕಿ ಶೇ. 21ಕ್ಕೂ ಹೆಚ್ಚು ಹೂಡಿಕೆಯನ್ನು ಆಕರ್ಷಿಸಿದೆ. ದೇಶದ ಜನಸಂಖ್ಯೆಯ ಶೇ. 5.5ರಷ್ಟನ್ನು ಹೊಂದಿರುವ ಕರ್ನಾಟಕವು, ದೇಶದ ಜಿಡಿಪಿಗೆ ಸುಮಾರು ಶೇ. 9ರಷ್ಟು ಕೊಡುಗೆ ನೀಡುತ್ತಿದೆ ಎಂದು ಅವರು ಹೇಳಿದರು.
"ನಮ್ಮ ಸಾಧನೆಯ ಬಗ್ಗೆ ನಮಗೆ ಹೆಮ್ಮೆ ಇದೆ. ಆದರೆ ಅದಕ್ಕೆ ಪ್ರತಿಯಾಗಿ ನ್ಯಾಯಯುತವಾದದ್ದನ್ನು ನಾವು ನಿರೀಕ್ಷಿಸುತ್ತೇವೆ. ನಾವು ಯಾವಾಗಲೂ ನಮ್ಮ ಕರ್ತವ್ಯವನ್ನು ನಿರ್ವಹಿಸಿದ್ದೇವೆ. ನಾವು ಕೊಡುಗೆ ನೀಡುತ್ತೇವೆ, ನಿರ್ಮಿಸುತ್ತೇವೆ, ಬೆಳೆಯುತ್ತೇವೆ ಮತ್ತು ದೇಶವನ್ನು ಮುನ್ನಡೆಸುತ್ತೇವೆ. ಕೇಂದ್ರ ಸರ್ಕಾರದಿಂದ ನಾವು ಕೇಳುವುದು ಇಷ್ಟೇ: ನಾವು ದೇಶದೊಂದಿಗೆ ಹಂಚಿಕೊಳ್ಳುವಷ್ಟೇ ಕಾಳಜಿಯನ್ನು ಸರ್ಕಾರವೂ ನಮ್ಮ ಬಗ್ಗೆ ವಹಿಸಲಿ ಎಂದು ಅವರು ಹೇಳಿದರು.
ನ್ಯಾಯಯುತವಾಗಿ ಅನುದಾನ ನೀಡಿ: ಹಣಕಾಸು ಹಂಚಿಕೆಯ ವಿಷಯವಾಗಿ ಮಾತನಾಡಿದ ಮುಖ್ಯಮಂತ್ರಿ ಶಿವಕುಮಾರ್, 15ನೇ ಹಣಕಾಸು ಆಯೋಗದ ಅಡಿಯಲ್ಲಿ ಹಂಚಿಕೆ ಮಾಡಬಹುದಾದ ನಿಧಿಯಲ್ಲಿ ಕರ್ನಾಟಕದ ಪಾಲು ಶೇ. 4.7 ರಿಂದ ಶೇ. 3.6 ಕ್ಕೆ ಇಳಿಕೆಯಾಗಿದೆ. ಇದರಿಂದಾಗಿ ರಾಜ್ಯಕ್ಕೆ ಆರು ವರ್ಷಗಳಲ್ಲಿ ಅಂದಾಜು 65,000 ಕೋಟಿ ರೂ. ನಷ್ಟವಾಗಿದೆ ಎಂದು ತಿಳಿಸಿದರು. ಅಲ್ಲದೆ, 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ 5,495 ಕೋಟಿ ರೂ.ಗಳ ವಿಶೇಷ ಅನುದಾನ ಮತ್ತು 6,000 ಕೋಟಿ ರೂ.ಗಳ ರಾಜ್ಯ-ನಿರ್ದಿಷ್ಟ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ ಎಂದು ಅವರು ವಿವರಿಸಿದರು.
16ನೇ ಹಣಕಾಸು ಆಯೋಗದ ಅಡಿಯಲ್ಲಿ ಕರ್ನಾಟಕದ ಪಾಲನ್ನು ಶೇ. 4.131 ಕ್ಕೆ ಹೆಚ್ಚಿಸಿರುವುದನ್ನು ಸ್ವಾಗತಿಸಿದ ಮುಖ್ಯಮಂತ್ರಿ ಶಿವಕುಮಾರ್, ರಾಜ್ಯದ ಪಾಲನ್ನು ಅಂತಿಮವಾಗಿ ಮತ್ತೆ ಶೇ. 4.7 ಕ್ಕೆ ಏರಿಸಬೇಕು ಎಂದು ಹೇಳಿದರು. "ಜಿಎಸ್ಟಿ (GST) ಮತ್ತು ಆದಾಯ ತೆರಿಗೆಗೆ ಅತಿ ಹೆಚ್ಚು ಕೊಡುಗೆ ನೀಡುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆರ್ಥಿಕ ಬೆಳವಣಿಗೆ ಮತ್ತು ಆದಾಯ ಸಂಗ್ರಹಣೆಯಲ್ಲಿ ಉತ್ತಮ ಸಾಧನೆ ಮಾಡುವ ರಾಜ್ಯವನ್ನು ದಂಡಿಸುವ ಬದಲು ಪ್ರೋತ್ಸಾಹಿಸಬೇಕು ಎಂದು ಅವರು ಪ್ರತಿಪಾದಿಸಿದರು.
ಬೆಂಗಳೂರು-ಮುಂಬೈ ಹೈ-ಸ್ಪೀಡ್ ರೈಲು ಯೋಜನೆ, ಎಸ್ಟಿಆರ್ಆರ್ (STRR) ದಕ್ಷಿಣ ಮಾರ್ಗ, ರಾಯಚೂರಿನಲ್ಲಿ ಏಮ್ಸ್ (AIIMS) ಸ್ಥಾಪನೆ ಮತ್ತು ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ಸೇರಿದಂತೆ ಹೆಚ್ಚುವರಿ ಯೋಜನೆಗಳ ಮೂಲಕ ಕರ್ನಾಟಕಕ್ಕೆ ಪರಿಹಾರ ಒದಗಿಸುವಂತೆ ಅವರು ಕೇಂದ್ರವನ್ನು ಒತ್ತಾಯಿಸಿದರು.
1971ರ ಜನಸಂಖ್ಯೆಯ ಆಧಾರ: ಕ್ಷೇತ್ರ ಮರು-ವಿಂಗಡಣೆಯ ವಿಷಯವನ್ನೂ ಪ್ರಸ್ತಾಪಿಸಿದ ಮುಖ್ಯಮಂತ್ರಿ, ಜನಸಂಖ್ಯೆ ನಿಯಂತ್ರಣದಲ್ಲಿ ದಕ್ಷಿಣ ಭಾರತದ ರಾಜ್ಯಗಳು ಸಾಧಿಸಿರುವ ಯಶಸ್ಸಿನಿಂದಾಗಿ ಅವುಗಳ ರಾಜಕೀಯ ಪ್ರಭಾವ ಕಡಿಮೆಯಾಗಬಾರದು ಎಂದು ಹೇಳಿದರು.
"ಯಾವುದೇ ದಕ್ಷಿಣ ಭಾರತದ ರಾಜ್ಯವು ತನ್ನ ಸ್ಥಾನಗಳನ್ನು ಕಳೆದುಕೊಳ್ಳುವುದಿಲ್ಲ ಎಂಬ ಭರವಸೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ ಪ್ರಾತಿನಿಧ್ಯ ಎಂದರೆ ಕೇವಲ ಸಂಖ್ಯೆಗಳಲ್ಲ; ಅದು ಪ್ರಭಾವ ಮತ್ತು ಧ್ವನಿಯ ವಿಷಯವಾಗಿದೆ ಎಂದು ಅವರು ನುಡಿದರು. 1971ರ ಜನಸಂಖ್ಯೆಯ ಆಧಾರವನ್ನು ಗೌರವಿಸಬೇಕು ಹಾಗೂ ದಕ್ಷಿಣ ಭಾರತದ ಪ್ರಾತಿನಿಧ್ಯವನ್ನು ನಿಖರ ಸಂಖ್ಯೆ ಮತ್ತು ಪ್ರಮಾಣದ ದೃಷ್ಟಿಯಿಂದ ರಕ್ಷಿಸಬೇಕು ಎಂದು ಸಿಎಂ ಶಿವಕುಮಾರ್ ಆಗ್ರಹಿಸಿದರು.
ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಈಗ ಇರುವಂತೆ ನೋಡಿಕೊಳ್ಳಬೇಕು. ಅದೇ ಸಂಖ್ಯೆಯೊಳಗೆ ಮಹಿಳೆಯರಿಗೆ ಮೀಸಲಾತಿ ಒದಗಿಸುವ ನಿರ್ಣಯವನ್ನು ಅಂಗೀಕರಿಸುವಂತೆ ಅವರು ದಕ್ಷಿಣ ವಲಯ ಮಂಡಳಿಯನ್ನು (Southern Zonal Council) ಒತ್ತಾಯಿಸಿದರು. "ಮಹಿಳೆಯರು ತಮ್ಮ ನ್ಯಾಯಯುತ ಪ್ರಾತಿನಿಧ್ಯಕ್ಕಾಗಿ ಸಾಕಷ್ಟು ಕಾಲ ಕಾಯ್ದಿದ್ದಾರೆ. ಅವರ ಮೀಸಲಾತಿಗಾಗಿ ಜನಗಣತಿಯವರೆಗೆ ಕಾಯುವ ಅಗತ್ಯವಿರಬಾರದು," ಎಂದು ಅವರು ಹೇಳಿದರು.
ಜಲ ವಿವಾದಗಳ ಕುರಿತು ಮಾತನಾಡಿದ ಸಿಎಂ ಶಿವಕುಮಾರ್, ಕಾವೇರಿ, ಕೃಷ್ಣಾ, ತುಂಗಭದ್ರಾ, ಪೆನ್ನಾರ್ ಮತ್ತು ಪಾಲಾರ್ ನದಿಗಳು ದಕ್ಷಿಣ ಭಾರತದ ಜೀವನಾಡಿಗಳಾಗಿವೆ ಎಂದು ಬಣ್ಣಿಸಿದರು.ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಭಾಗವಹಿಸಿದ್ದ ಜೂನ್ 25ರ ಸಭೆಯನ್ನು ಉಲ್ಲೇಖಿಸಿದ ಅವರು, ಅಂತಾರಾಜ್ಯ ಜಲ ವಿವಾದಗಳನ್ನು ಮಾತುಕತೆಯ ಮೂಲಕ ಬಗೆಹರಿಸಬಹುದು ಎಂಬುದನ್ನು ಈ ಮೂರೂ ರಾಜ್ಯಗಳು ಸಾಬೀತುಪಡಿಸಿವೆ ಎಂದು ಹೇಳಿದರು.
ಪ್ರತಿಯೊಂದು ನದಿಪಾತ್ರದ ರಾಜ್ಯಕ್ಕೂ ನ್ಯಾಯಯುತವಾದ ಅಗತ್ಯಗಳಿವೆ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಸಮಾನತೆ, ಪಾರದರ್ಶಕತೆ ಮತ್ತು ಸಹಕಾರ ಎಂಬ ಮೂರು ತತ್ವಗಳ ಮೇಲೆ ನಮ್ಮ ನಿಲುವು ಆಧಾರಿತವಾಗಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಸಹಕಾರವು ಪರಸ್ಪರರ ಹಿತದೃಷ್ಟಿಯಿಂದ ಕೂಡಿರಬೇಕು ಎಂದು ಪ್ರತಿಪಾದಿಸಿದ ಅವರು, ನ್ಯಾಯಮಂಡಳಿಯ ತೀರ್ಪುಗಳ ಅನ್ವಯ ಕರ್ನಾಟಕಕ್ಕೆ ಸಿಗಬೇಕಾದ ಕಾನೂನುಬದ್ಧ ಪಾಲು ಹಾಗೂ ರಾಜ್ಯದ ರೈತರಿಗೆ ಪ್ರಯೋಜನಕಾರಿಯಾದ ಯೋಜನೆಗಳನ್ನು ಸಕಾಲಿಕ ಪೂರ್ಣಗೊಳಿಸಬೇಕು. ಕೃಷ್ಣಾ ನದಿ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ ಮತ್ತು ನದಿ ಜೋಡಣೆ ವಿಷಯಗಳಲ್ಲಿ ಕರ್ನಾಟಕದ ನಿಲುವನ್ನು ಮಂಡಳಿಯ ಮುಂದೆ ಮಂಡಿಸುವುದಾಗಿ ಮುಖ್ಯಮಂತ್ರಿ ಶಿವಕುಮಾರ್ ತಿಳಿಸಿದರು.
ಅಲ್ಲದೆ, ಆರೋಗ್ಯ ರಕ್ಷಣೆಗಾಗಿ ಆರ್ಥಿಕ ನೆರವು, ಶಿಕ್ಷಣ ಮತ್ತು ಪೌಷ್ಟಿಕಾಂಶ, ಬಡ ಕುಟುಂಬಗಳಿಗೆ ವಸತಿ, ಕಡಲ ತೀರದ ಸವಕಳಿ ಮತ್ತು ವಿಪತ್ತು ನಿರ್ವಹಣಾ ನೆರವು, ಗಣಿಗಾರಿಕೆ ಹಕ್ಕುಗಳು, ಕೇಂದ್ರ ಸಂಸ್ಥೆಗಳಿಗೆ ರಾಜ್ಯಗಳು ಒದಗಿಸುವ ಭೂಮಿ, ನ್ಯಾಯ ವಿತರಣೆ, ಡಿಜಿಟಲ್ ಮೂಲಸೌಕರ್ಯ, ಆರ್ಥಿಕ ಒಳಗೊಳ್ಳುವಿಕೆ ಮತ್ತು ರೈತರಿಗೆ ಬೆಂಬಲಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಅವರು ತಮ್ಮ ಕಳವಳಗಳನ್ನು ವ್ಯಕ್ತಪಡಿಸಿದರು.
ಗಣಿಗಾರಿಕೆಯ ವಿಷಯದಲ್ಲಿ, 'ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಮಸೂದೆ, 2026' ಪ್ರಮುಖ ಖನಿಜಗಳ ಮೇಲೆ ತೆರಿಗೆ ವಿಧಿಸುವ ರಾಜ್ಯಗಳ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ ಎಂದು ವಾದಿಸಿದ ಅವರು, ಕೇಂದ್ರವು ಈ ಮಸೂದೆಯನ್ನು ಮರುಪರಿಶೀಲಿಸಬೇಕೆಂದು ಒತ್ತಾಯಿಸಿದರು. ಮಾದಕವಸ್ತು ಕಳ್ಳಸಾಗಣೆಯ ವಿರುದ್ಧ ಕಠಿಣ ಕಾನೂನುಗಳು ಮತ್ತು ಜಾರಿ ಕ್ರಮಗಳ ಅಗತ್ಯವಿದೆಯೆಂದು ಪ್ರತಿಪಾದಿಸಿದ ಅವರು, ಈ ಅಕ್ರಮ ವ್ಯಾಪಾರದಿಂದ ಲಾಭ ಪಡೆಯುವವರು "ತ್ವರಿತ ಮತ್ತು ಕಠಿಣ ಕಾನೂನು ಕ್ರಮ"ವನ್ನು ಎದುರಿಸಬೇಕು ಎಂದು ಹೇಳಿದರು.
"ಇವು ಕೇವಲ ಪ್ರತ್ಯೇಕ ಬೇಡಿಕೆಗಳಲ್ಲ. ನಮ್ಮ ಜನರಿಗಾಗಿ ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು (cooperative federalism) ಹೇಗೆ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಬಹುದು ಎಂಬ ಬೃಹತ್ ಪ್ರಶ್ನೆಗೆ ಇವು ಸಂಬಂಧಿಸಿವೆ. ಕರ್ನಾಟಕ ಇಲ್ಲಿ ದೂರು ನೀಡಲು ಬಂದಿಲ್ಲ. ಭಾರತದ ಅಭಿವೃದ್ಧಿ ಪಯಣದಲ್ಲಿ ನಾವು ಪಾಲುದಾರರಾಗಿ ಬಂದಿದ್ದೇವೆ. ಪ್ರತಿಯಾಗಿ ನಾವು ಕೇಳುವುದು ನ್ಯಾಯವನ್ನು ಮಾತ್ರ ಎಂದು ಅವರು ನುಡಿದರು.
ಕರ್ನಾಟಕ ಬಲವಾಗಿದ್ದಾಗ ದಕ್ಷಿಣ ಭಾರತವು ಇನ್ನಷ್ಟು ಬಲವಾಗುತ್ತದೆ. ಮತ್ತು ದಕ್ಷಿಣ ಭಾರತವು ಬಲವಾಗಿದ್ದಾಗ, ಭಾರತವು ಇನ್ನಷ್ಟು ಬಲಶಾಲಿಯಾಗುತ್ತದೆ. ನಮ್ಮೊಂದಿಗೆ ಕೈಜೋಡಿಸಿ. ನಮಗೆ ನ್ಯಾಯಯುತವಾಗಿ ಅನುದಾನ ನೀಡಿ. ದಕ್ಷಿಣ ಭಾರತಕ್ಕೆ ಸಲ್ಲಬೇಕಾದದ್ದನ್ನು ನೀಡಿ. ಆಗ ನಾವು ಭಾರತದ ಭವಿಷ್ಯವನ್ನು ರೂಪಿಸುವುದನ್ನು ಮುಂದುವರಿಸುತ್ತೇವೆ ಎಂದು ಮುಖ್ಯಮಂತ್ರಿ ಶಿವಕುಮಾರ್ ಹೇಳಿದರು.