ಬಾಲಿವುಡ್ ಹಿರಿಯ ನಟ ಸುರೇಶ್ ಒಬೆರಾಯ್ ಅವರು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಮೇಲಿರುವ ಅಭಿಮಾನವನ್ನು ಹಂಚಿಕೊಂಡಿದ್ದು, ಅವರನ್ನು ತಮ್ಮ ಮನೆಗೆ ಉಪಹಾರಕ್ಕೆ ಆಹ್ವಾನಿಸಿದ್ದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸಿದ್ಧಾಂತವನ್ನು ಮೊದಲಿನಿಂದಲೂ ಬೆಂಬಲಿಸುತ್ತಾ ಬಂದಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ, ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ತಮ್ಮ ಮನೆಗೆ ಉಪಹಾರಕ್ಕಾಗಿ ಬಂದಿದ್ದನ್ನು ಸ್ಮರಿಸಿದ್ದಾರೆ. ಇದೇ ವೇಳೆ ತಮ್ಮ ಪತ್ನಿ ಭಾಗವತ್ಗಾಗಿ ಹಲ್ವಾ ತಯಾರಿಸಿದ್ದರು ಎಂದು ಹೇಳಿದ್ದಾರೆ.
ನಿಧಿ ವಾಸಂದಾನಿ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಸುರೇಶ್ ಒಬೆರಾಯ್ ಆರ್ಎಸ್ಎಸ್ ಹಾಗೂ ಮೋಹನ್ ಭಾಗವತ್ ಅವರ ಬಗ್ಗೆ ತಮ್ಮ ಅಭಿಮಾನವನ್ನು ಬಹಿರಂಗಪಡಿಸಿದ್ದಾರೆ.
ಆರ್ಎಸ್ಎಸ್ನೊಂದಿಗಿನ ತಮ್ಮ ಸಂಪರ್ಕವು ಯಾವುದೇ ಅಧಿಕೃತ ಸದಸ್ಯತ್ವಕ್ಕಿಂತ ವೈಯಕ್ತಿಕ ನಂಬಿಕೆಯಿಂದ ಕೂಡಿದೆ ಎಂದು ಹೇಳಿದ್ದಾರೆ.
ನಾನು ಯಾವಾಗಲೂ ಒಳಗಿನಿಂದ ಆರ್ಎಸ್ಎಸ್ನ ಅಭಿಮಾನಿಯಾಗಿದ್ದೇನೆ. ಮೋಹನ್ ಭಾಗವತ್ ಜೀ ಅವರ ಅಭಿಮಾನಿಯೂ ಹೌದು ಎಂದು ತಿಳಿಸಿದ್ದಾರೆ.
ಇದೇ ವೇಳೆ ಮೋಹನ್ ಭಾಗವತ್ ಅವರನ್ನು ಮನೆಗೆ ಉಪಾಹಾರಕ್ಕೆ ಆಹ್ವಾನಿಸಿದ್ದ ಸಂದರ್ಭವನ್ನೂ ನಟ ನೆನಪಿಸಿಕೊಂಡಿದ್ದಾರೆ. ಬಳಿಕ ಭಾಗವತ್ ತಮ್ಮ ಮನೆಗೆ ಆಗಮಿಸಿ ಉಪಾಹಾರ ಸೇವಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ಅವರು ಉಪಾಹಾರಕ್ಕೆ ನನ್ನ ಮನೆಗೆ ಬಂದಿದ್ದರು. ನಮಗೆ ತುಂಬಾ ಸಂತೋಷವಾಗಿತ್ತು. ನನ್ನ ಪತ್ನಿ ತುಂಬಾ ರುಚಿಯಾದ ಹಲ್ವಾ ಮಾಡುತ್ತಾರೆ. ನಾವು ಅವರಿಗೆ ಹಲ್ವಾ ಬಡಿಸಿದ್ದೆವು, ಅವರಿಗೆ ಅದು ತುಂಬಾ ಇಷ್ಟವಾಯಿತು” ಎಂದು ಹೇಳಿದ್ದಾರೆ.
ಆರ್ಎಸ್ಎಸ್ ಸೇರಿಲ್ಲ
ತಾವು ಆರ್ಎಸ್ಎಸ್ನ ಅಭಿಮಾನಿ ಎಂದು ಹೇಳಿಕೊಂಡರೂ, ಸಂಸ್ಥೆಯ ಅಧಿಕೃತ ಸದಸ್ಯರಲ್ಲ ಎಂದು ಸುರೇಶ್ ಒಬೆರಾಯ್ ಸ್ಪಷ್ಟಪಡಿಸಿದ್ದಾರೆ.
ಆರ್ಎಸ್ಎಸ್ನ ನಿಯಮಿತ ಬೆಳಗಿನ ಸಭೆಗಳಿಗೆ ತಾವು ಹಾಜರಾಗುವುದಿಲ್ಲ ಹಾಗೂ ಮೆರವಣಿಗೆಗಳಲ್ಲೂ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.
“ನಾನು ಅಧಿಕೃತವಾಗಿ ಆರ್ಎಸ್ಎಸ್ಗೆ ಸೇರಿಲ್ಲ. ಬೆಳಗಿನ ಸಭೆಗಳಿಗೆ ಹೋಗುವುದಿಲ್ಲ ಅಥವಾ ಕೈಯಲ್ಲಿ ಕೋಲು ಹಿಡಿದು ಮೆರವಣಿಗೆಗಳಲ್ಲಿ ಭಾಗವಹಿಸುವುದಿಲ್ಲ” ಎಂದು ತಿಳಿಸಿದ್ದಾರೆ.
ಇದೇ ಸಂದರ್ಶನದಲ್ಲಿ 2004ರಲ್ಲಿ ಬಿಜೆಪಿಯೊಂದಿಗೆ ತಮ್ಮ ಸಂಪರ್ಕ ಆರಂಭವಾದ ಬಗ್ಗೆಯೂ ಸುರೇಶ್ ಒಬೆರಾಯ್ ಮಾತನಾಡಿದ್ದಾರೆ.
ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿಯಾಗಿದ್ದಾಗಿ ಹೇಳಿದ ಅವರು, ಬಳಿಕ ಸಕ್ರಿಯ ರಾಜಕೀಯದಿಂದ ದೂರ ಸರಿದಿರುವುದಾಗಿ ತಿಳಿಸಿದ್ದಾರೆ.