ಲಾತೂರ್: ಅನುಮತಿ ಪಡೆಯದೆ ಸರ್ಕಾರಿ ಶಾಲೆಗೆ ಪ್ರವೇಶಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿ, ಶಿಕ್ಷಕರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಸಹವರ್ತಿ ಅಜಿಂಕ್ಯ ಶಿಂಧೆ ಮತ್ತು ಇತರ ಮೂರರಿಂದ ನಾಲ್ಕು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಸರ್ಕಾರಿ ಜಿಲ್ಲಾ ಪರಿಷತ್ ಶಾಲೆಯ ಶಿಕ್ಷಕಿ ಸೈಯದ್ ಶಂಶಾದ್ ಬಾನೋ ಖೈರತಾಲಿ ಅವರು ನೀಡಿದ ದೂರಿನ ಆಧಾರದ ಮೇಲೆ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಔಸಾ ಪೊಲೀಸರು ಅಭಿಜೀತ್ ದೀಪ್ಕೆ ಹಾಗೂ ಇತರರ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಔಸಾ ಪ್ರದೇಶದ ಜಿಲ್ಲಾ ಪರಿಷತ್ ಉರ್ದು ಶಾಲೆಯ 53 ವರ್ಷದ ಶಿಕ್ಷಕಿ, ಸ್ಥಳೀಯ ಅಧಿಕಾರಿಗಳಿಗೆ ಅಧಿಕೃತ ದೂರು ನೀಡಿದ ನಂತರ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಎಫ್ಐಆರ್ ಪ್ರಕಾರ, ಶಾಲಾ ಸಮಯದಲ್ಲಿ ದೀಪ್ಕೆ ಮತ್ತು ಅವರ ಬೆಂಬಲಿಗರು, ಪೂರ್ವ ಅನುಮತಿಯಿಲ್ಲದೆ ಶಾಲಾ ಆವರಣಕ್ಕೆ ಪ್ರವೇಶಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ವಿಡಿಯೋ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ತರಗತಿಗೆ ಪ್ರವೇಶಿಸಿದ ದೀಪ್ಕೆ ಮತ್ತು ಬೆಂಬಲಿಗರು, ವಿದ್ಯಾರ್ಥಿಗಳ ನಡುವೆ ಕುಳಿತು, ಕ್ಯಾಮೆರಾದಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಇಬ್ಬರನ್ನೂ ಪ್ರಶ್ನಿಸಲು ಪ್ರಾರಂಭಿಸಿದರು. ಈ ಮೂಲಕ ನಿಯಮಿತ ಬೋಧನಾ ಚಟುವಟಿಕೆ ಮತ್ತು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸಿಜೆಪಿ 'ಶಾಲೆಗಳನ್ನು ಸರಿಪಡಿಸಿ' ಅಭಿಯಾನ ಆರಂಭಿಸಿದ್ದು, ಇದರ ಭಾಗವಾಗಿ ದೀಪ್ಕೆ ಮತ್ತು ಅವರ ಬೆಂಬಲಿಗರು ಲಾತೂರ್ ಜಿಲ್ಲೆಯ ವಿವಿಧ ಶಾಲೆಗಳಿಗೆ ಭೇಟಿ ನೀಡುತ್ತಿದ್ದು, ಅಲ್ಲಿನ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಿದ್ದಾರೆ.