ಲುಧಿಯಾನ: ಪಂಜಾಬ್ ನಲ್ಲಿ ಮತ್ತೆ ಗ್ಯಾಂಗ್`ಸ್ಟರ್ ಗಳ ಹಾವಳಿ ಮಿತಿ ಮೀರಿದ್ದು, ಪೊಲೀಸರಿಂದ ತಪ್ಪಿಸಿಕೊಳ್ಳುವ ವೇಳೆ Thar ಕಾರನ್ನು ವೇಗವಾಗಿ ಚಲಿಸಿದ್ದು ಈ ವೇಳೆ ತೆಂಗಿನಕಾಯಿ ವ್ಯಾಪಾರಿ ಮೇಲೆ ಕಾರು ಹರಿಸಿರುವ ಭೀಕರ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಪೊಲೀಸರಿಂದ ತಪ್ಪಿಸಿಕೊಳ್ಳಲು ವೇಗವಾಗಿ ಥಾರ್ ಚಲಾಯಿಸುತ್ತಿದ್ದ ಕುಖ್ಯಾತ ಗ್ಯಾಂಗ್ಸ್ಟರ್ ಒಬ್ಬ ತೆಂಗಿನಕಾಯಿ ಮಾರಾಟ ಮಾಡುತ್ತಿದ್ದ ಯುವಕನಿಗೆ ಡಿಕ್ಕಿ ಹೊಡೆದ ಘಟನೆ ಪಂಜಾಬ್ನ ಲುಧಿಯಾನಾದಲ್ಲಿ ನಡೆದಿದೆ. ಘಟನೆಯ ಭೀಕರ ದೃಶ್ಯ CCTV ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗಿದೆ.
ಪೊಲೀಸರು ಬೆನ್ನಟ್ಟುತ್ತಿದ್ದ ವೇಳೆ ವೇಗವಾಗಿ ಬಂದ ಥಾರ್ ಕಾರು ತೆಂಗಿನಕಾಯಿ ವ್ಯಾಪಾರಿಯ ಗಾಡಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಯುವಕ ಸುಮಾರು 10 ಅಡಿ ದೂರಕ್ಕೆ ಎಸೆಯಲ್ಪಟ್ಟಿದ್ದಾನೆ. ಆತನ ತೆಂಗಿನಕಾಯಿ ಗಾಡಿಯೂ ರಸ್ತೆಯ ಮತ್ತೊಂದು ಬದಿಗೆ ಎಸೆಯಲ್ಪಟ್ಟಿದೆ.
ಮೂರು ಪೊಲೀಸ್ ವಾಹನಗಳಿಂದ ಗ್ಯಾಂಗ್ಸ್ಟರ್ ಚೇಸ್
ವರದಿಗಳ ಪ್ರಕಾರ, ಫರೀದ್ಕೋಟ್ ಸ್ಪೆಷಲ್ ಟಾಸ್ಕ್ ಫೋರ್ಸ್ಗೆ (STF) ಬೇಕಾಗಿದ್ದ ಗ್ಯಾಂಗ್ಸ್ಟರ್ ಗುರ್ಪ್ರೀತ್ ಸಿಂಗ್ ಲುಧಿಯಾನಾದಲ್ಲಿದ್ದಾನೆ ಎಂಬ ಮಾಹಿತಿ ಲಭಿಸಿತ್ತು. ಮಾಹಿತಿ ಪಡೆದ ಬಳಿಕ STFನ ಮೂರು ವಾಹನಗಳು ಆತನನ್ನು ಬೆನ್ನಟ್ಟಲು ಆರಂಭಿಸಿದ್ದವು. ಸುಂದರ್ ನಗರ ಪ್ರದೇಶದಲ್ಲಿ ಪೊಲೀಸರು ತನ್ನನ್ನು ಸುತ್ತುವರಿಯುತ್ತಿರುವುದನ್ನು ಅರಿತ ಗುರ್ಪ್ರೀತ್ ಥಾರ್ನ ವೇಗವನ್ನು ಮತ್ತಷ್ಟು ಹೆಚ್ಚಿಸಿದ್ದಾನೆ ಎನ್ನಲಾಗಿದೆ.
ಈ ವೇಳೆ ರಸ್ತೆ ಬದಿಯಲ್ಲಿ ತನ್ನ ಗಾಡಿಯ ಬಳಿ ನಿಂತಿದ್ದ ಯುವ ತೆಂಗಿನಕಾಯಿ ವ್ಯಾಪಾರಿ ಗ್ರಾಹಕರೊಬ್ಬರೊಂದಿಗೆ ಮಾತನಾಡುತ್ತಾ ತೆಂಗಿನಕಾಯಿ ಕತ್ತರಿಸುತ್ತಿದ್ದ. ಅದೇ ಸಂದರ್ಭದಲ್ಲಿ ವೇಗವಾಗಿ ಬಂದ ಥಾರ್ ಏಕಾಏಕಿ ಆತನಿಗೆ ಹಾಗೂ ಗಾಡಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದರೂ ನಿಲ್ಲದ ಗ್ಯಾಂಗ್ಸ್ಟರ್
ಡಿಕ್ಕಿಯ ಬಳಿಕವೂ ಥಾರ್ ಚಾಲಕ ವಾಹನ ನಿಲ್ಲಿಸದೆ ಅಲ್ಲಿಂದ ಪರಾರಿಯಾಗಲು ಮುಂದಾಗಿದ್ದಾನೆ. ಆದರೆ ಪೊಲೀಸರು ಬೆನ್ನಟ್ಟುವುದನ್ನು ಮುಂದುವರಿಸಿದ್ದು, ಸ್ವಲ್ಪ ದೂರದಲ್ಲೇ ಗ್ಯಾಂಗ್ಸ್ಟರ್ ಗುರ್ಪ್ರೀತ್ ಸಿಂಗ್ನನ್ನು ಬಂಧಿಸಿದ್ದಾರೆ. ಇದೇ ವೇಳೆ ಆತನ ಕೆಲವು ಸಹಚರರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಆರೋಪಿಗಳು ಹಾಗೂ ಅವರ ಸಹಚರರ ಕ್ರಿಮಿನಲ್ ಹಿನ್ನೆಲೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗಾಯಾಳು ಆಸ್ಪತ್ರೆಗೆ ದಾಖಲು
ಅಪಘಾತದಲ್ಲಿ ಗಾಯಗೊಂಡ ತೆಂಗಿನಕಾಯಿ ವ್ಯಾಪಾರಿಯನ್ನು ಲುಧಿಯಾನಾ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಈ ಸಂಪೂರ್ಣ ಘಟನೆ ಇದೀಗ ಲುಧಿಯಾನಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.