ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಮುಂದಿಟ್ಟುಕೊಂಡು ಕೇಂದ್ರದ ಆಡಳಿತಾರೂಢ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಬುಧವಾರ ವಾಗ್ದಾಳಿ ನಡೆಸಿದೆ.
ಬಿಜೆಪಿ ಭರವಸೆ ನೀಡಿದ್ದ ‘ಅಚ್ಛೇ ದಿನ’ ಬದಲಾಗಿ, ನಿರಂತರ ಬೆಲೆ ಏರಿಕೆಯು ಜನಸಾಮಾನ್ಯರ ಕುಟುಂಬದ ಬಜೆಟ್ ಮೇಲೆ ಒತ್ತಡ ಹೇರುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಸರ್ಕಾರ ಗಮನ ಬೇರೆಡೆ ಸೆಳೆಯುವ ತಂತ್ರಗಳು ಮತ್ತು ಅರ್ಥಹೀನ ಮಾತುಗಳ ಮೂಲಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದ್ದಾರೆ. ಆದರೆ, ಬೆಲೆ ಏರಿಕೆ ಕುರಿತು ಕಾಂಗ್ರೆಸ್ ಹಾಗೂ ಜನರು ಪ್ರಶ್ನೆಗಳನ್ನು ಮುಂದುವರಿಸಲಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ದೈನಂದಿನ ಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಪ್ರಸ್ತಾಪಿಸಿದ ಖರ್ಗೆ, ಕಳೆದ ಒಂದು ವರ್ಷದಲ್ಲಿ ಈರುಳ್ಳಿ ಬೆಲೆ ಶೇ.59ರಷ್ಟು ಏರಿಕೆಯಾಗಿದ್ದು, ಹಲವು ನಗರಗಳಲ್ಲಿ ಕೆ.ಜಿ.ಗೆ ರೂ.50–60ಕ್ಕೆ ಮಾರಾಟವಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಕ್ಕರೆ ಬೆಲೆ ಕೆ.ಜಿ.ಗೆ ರೂ.60–70ರಷ್ಟಿದ್ದು, ಕೆಲವೆಡೆ ರೂ.72ರವರೆಗೂ ತಲುಪಿದೆ. ಸಾಸಿವೆ ಎಣ್ಣೆಯ ಬೆಲೆಯೂ ಲೀಟರ್ಗೆ ರೂ.200ಕ್ಕಿಂತ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಅಲ್ಲದೆ, ಆಹಾರ ಹಣದುಬ್ಬರ ಶೇ.5.52 ಮತ್ತು ಸಗಟು ಹಣದುಬ್ಬರ ಶೇ.9.78ರಷ್ಟಿದೆ ಎಂದು ಹೇಳಿದರುವ ಅವರು, ಹಬ್ಬದ ಋತುವಿನ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯು ಸಾಮಾನ್ಯ ಕುಟುಂಬಗಳ ಮೇಲೆ ಬೀರುತ್ತಿರುವ ಪರಿಣಾಮದ ಬಗ್ಗೆಯೂ ಅವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 12 ವರ್ಷಗಳಾಗಿವೆ. ಆದರೆ, ‘ಅಚ್ಛೇ ದಿನ’ದ ವಾಸ್ತವ ಏನೆಂದರೆ, ಕೆಲವೊಮ್ಮೆ ಬೇಳೆ, ಕೆಲವೊಮ್ಮೆ ತರಕಾರಿ, ಕೆಲವೊಮ್ಮೆ ಎಣ್ಣೆ, ಮತ್ತೆ ಕೆಲವೊಮ್ಮೆ ಸಕ್ಕರೆ—ಹೀಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಜನಸಾಮಾನ್ಯರ ಬಜೆಟ್ ಅನ್ನು ಹಾಳು ಮಾಡುತ್ತಿದೆ ಎಂದು ಹೇಳಿದ್ದಾರೆ.
ಸೋಮವಾರವೂ ಕಾಂಗ್ರೆಸ್ ಅಗತ್ಯ ವಸ್ತುಗಳ ಬೆಲೆಗಳಲ್ಲಿ ‘ಗಗನಕ್ಕೇರುತ್ತಿರುವ’ ಹಣದುಬ್ಬರದ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
‘ಅಚ್ಛೇ ದಿನ’ ತಂದಿದ್ದೇವೆ ಎಂಬ ಸರ್ಕಾರದ ಹೇಳಿಕೆಯ ನಡುವೆಯೂ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ತಮ್ಮ ದೈನಂದಿನ ಖರ್ಚುಗಳನ್ನು ಹೇಗೆ ನಿಭಾಯಿಸಬೇಕು ಎಂದು ಪ್ರಶ್ನಿಸಿತ್ತು.
ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಪದೇಪದೆ ಆರೋಪಿಸುತ್ತಿದ್ದು, ಬೆಲೆ ಏರಿಕೆಯ ಹೊರೆ ಮತದಾರರ ನೆನಪಿನಲ್ಲಿ ಉಳಿಯಲಿದೆ ಎಂದು ಎಚ್ಚರಿಸಿದೆ.