ಭುವನೇಶ್ವರ: ತಮ್ಮ ಪಕ್ಷದ ಕೆಲವು ಸಹೋದ್ಯೋಗಿಗಳು ತಮ್ಮ ಹೆಸರಿಗೆ ಕಳಂಕ ತರುವ ಮೂಲಕ ಸಂಪುಟದಿಂದ ತಮ್ಮನ್ನು ಹೊರಹಾಕಲು ಪಿತೂರಿ ನಡೆಸುತ್ತಿದ್ದಾರೆ ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಮತ್ತು ಬಿಜೆಪಿ ಹಿರಿಯ ನಾಯಕ ಜುವಾಲ್ ಓರಾಮ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ಸಂಘಟಿತ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾದ ರೂರ್ಕೆಲಾದಲ್ಲಿ ಅವರ ಆಪ್ತರಲ್ಲಿ ಒಬ್ಬರಾದ ರಾಕೇಶ್ ಪಾಸ್ವಾನ್ ಅವರನ್ನು ಬಂಧಿಸಿದ ನಂತರ ಕೇಂದ್ರ ಸಚಿವರು ಈ ಹೇಳಿಕೆ ನೀಡಿದ್ದು, ಹೆಚ್ಚು ಮಹತ್ವ ಪಡೆದುಕೊಂಡಿದೆ. ಆದರೆ ಪಾಸ್ವಾನ್ ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಸುಂದರ್ಗಢ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಓರಾಮ್, ತಮ್ಮ ಖ್ಯಾತಿಗೆ ಹಾನಿ ಮಾಡಲು ಯಾರಾದರೂ ಪ್ರಯತ್ನಿಸಿದರೆ, ‘ಅವರ ಕೈಗಳನ್ನು ಕತ್ತರಿಸಿ ಎಸೆಯುವ’ ಶಕ್ತಿ ತನಗಿದೆ ಎಂದು ಓರಾಮ್ ಅವರು ಕಠಿಣ ಎಚ್ಚರಿಕೆ ನೀಡಿದರು.
‘ಇತರ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಯಾದ ನಾಯಕರು’ ಇಂತಹ ಪ್ರಯತ್ನಗಳ ಹಿಂದೆ ಇದ್ದಾರೆ ಎಂದು ಅವರು ಆರೋಪಿಸಿದರು.
ಸರ್ಕಾರದ ಅತಿಥಿ ಗೃಹದಲ್ಲಿ ಅಪರಾಧಿಗಳಿಗೆ ಆಶ್ರಯ ನೀಡಿದ ಆರೋಪದ ಮೇಲೆ ಬಂಧಿಸಲ್ಪಟ್ಟ ಪಾಸ್ವಾನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತಮ್ಮ ಯಾವುದೇ ಆಕ್ಷೇಪಣೆ ಇಲ್ಲ ಎಂದು ಓರಾಮ್ ಈ ಹಿಂದೆ ಹೇಳಿದ್ದರು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇತ್ತೀಚೆಗೆ ಪೊಲೀಸರು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಏಳು ಮಂದಿಯನ್ನು ಬಂಧಿಸಿದ್ದರು. ಈ ಏಳು ಮಂದಿಗೆ ಸರ್ಕ್ಯೂಟ್ ಹೌಸ್ ನಲ್ಲಿ ಕೊಠಡಿಗಳನ್ನು ಕಾಯ್ದಿರಿಸಿದ್ದ ಆರೋಪದಡಿ ಪ್ರಕಾಶ್ ಪಾಸ್ವಾನ್ ಅವರನ್ನು ರೂರ್ಕೆಲಾ ಪೊಲೀಸರು ಬಂಧಿಸಿದ್ದಾರೆ.