ಕೋಲ್ಕತ್ತಾ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಮಂಡಿಸಿದ 2026-27ನೇ ಸಾಲಿನ ಬಜೆಟ್ ನ್ನು ಹಂಪ್ಟಿ ಡಂಪ್ಟಿ' ಬಜೆಟ್' ಎಂದು ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ. ಬಜೆಟ್ ನಲ್ಲಿ ಜನ ಸಾಮಾನ್ಯರು ಹಾಗೂ ಪಶ್ಚಿಮ ಬಂಗಾಳಕ್ಕೆ ಏನನ್ನೂ ನೀಡಿಲ್ಲ. ಇದೊಂದು ದೂರದಷ್ಟಿ ಇಲ್ಲದ ಹಂಪ್ಟಿ ಡಂಪ್ಟಿ ಎಂದರು.
ದಿಕ್ಕು ದೆಸೆಯಿಲ್ಲದ ಜನ ವಿರೋಧಿ ಬಜೆಟ್ ಆಗಿದೆ. ಮಹಿಳಾ, ರೈತ, ಎಸ್ಸಿ, ಎಸ್ಟಿ ಮತ್ತು ಒಬಿಸಿ ವಿರೋಧಿ ಬಜೆಟ್ ಆಗಿದೆ. ಬಂಗಾಳಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಸಾಮಾಜಿಕ ಭದ್ರತಾ ಸಬ್ಸಿಡಿ ಮತ್ತು ರಸಗೊಬ್ಬರ ಸಬ್ಸಿಡಿ ಜೊತೆಗೆ ಶಿಕ್ಷಣ ನಿಧಿಗಳು ಮತ್ತು ಸಹಾಯಧನವನ್ನು ಕಡಿತಗೊಳಿಸಲಾಗಿದೆ.
ಇದು ಸುಳ್ಳಿನ ಸರಮಾಲೆಯಾಗಿದೆ. ಆರ್ಥಿಕತೆಯು ಸಂಪೂರ್ಣವಾಗಿ ಹಳಿತಪ್ಪಲಿದೆ. ಷೇರು ಮಾರುಕಟ್ಟೆಯಲ್ಲಿನ ಹೊಡೆತ ನೋಡಿದ್ರೆ ಇದು ಎಂತಹ ಬಜೆಟ್ ಎಂಬುದು ತಿಳಿದುಬರಲಿದೆ ಎಂದು ತಿಳಿಸಿದರು.
ಸೆನ್ಸೆಕ್ಸ್ 1,100 ಅಂಕಗಳಿಗಿಂತ ಕಡಿಮೆಯಾಗಿದೆ, ನಿಫ್ಟಿ ಕೂಡಾ 25,000 ಕ್ಕಿಂತ ಕಡಿಮೆಯಾಗಿದೆ. ಬಜೆಟ್ ಪರಿಣಾಮವನ್ನು ಸ್ಪಷ್ಟವಾಗಿ ನೋಡಬಹುದು."ಪಶ್ಚಿಮ ಬಂಗಾಳಕ್ಕೆ ಏನೂ ನೀಡಿಲ್ಲ. ಅವರು ದೊಡ್ಡದಾಗಿ ಮಾತನಾಡುತ್ತಾರೆ, ಆದರೆ ಏನನ್ನೂ ನೀಡುವುದಿಲ್ಲ ಎಂದು ಟಿಎಂಸಿ ಮುಖ್ಯಸ್ಥರೂ ಆಗಿರುವ ಬ್ಯಾನರ್ಜಿ ಆರೋಪಿಸಿದ್ದಾರೆ.
ಮುಂಬರುವ ತಿಂಗಳುಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ ಹಿಂದೆ ಘೋಷಿಸಲಾಗಿದ್ದ ಮೂಲಸೌಕರ್ಯ ಯೋಜನೆಗಳನ್ನು ಪುನರ್ ಹೇಳಲಾಗಿದೆ ಎಂದರು.
ಸರಕು ಸಾಗಣೆ ಕಾರಿಡಾರ್ ಅನ್ನು 2009 ರಲ್ಲಿ ನನ್ನ ರೈಲ್ವೆ ಬಜೆಟ್ನಲ್ಲಿ ಉಲ್ಲೇಖಿಸಿದ್ದೆ, ಕಳೆದ 15 ವರ್ಷಗಳಿಂದ ಇದಕ್ಕೆ ಯಾವುದೇ ಹಣಕಾಸು ನೀಡಿಲ್ಲ. ನಾವು ಈಗಾಗಲೇ ಆರು ಆರ್ಥಿಕ ಕಾರಿಡಾರ್ಗಳನ್ನು ಘೋಷಿಸಿದ್ದೇವೆ. ಅವರು ಮೂರು ಕಾರಿಡಾರ್ಗಳ ಬಗ್ಗೆ ಹೇಳಿದ್ದು ಸುಳ್ಳು ಎಂದು ವಾಗ್ದಾಳಿ ನಡೆಸಿದರು.