ಬಾರಾಮತಿ: ಮಹಾರಾಷ್ಟ್ರ ಮಾಜಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಂತ್ಯಕ್ರಿಯೆ ಜಾಗ ಅಪರಾಧದ ಸ್ಥಳವಾಗಿ ಪರಿವರ್ತನೆಗೊಂಡಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳ ಮುಂದೆಯೇ ಕೈಚಳಕ ತೋರಿದ ಖದೀಮರು ಅಲ್ಲಿ ನೆರೆದಿದ್ದ ನೂರಾರು ಜನರಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.
ಹೌದು.. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಎನ್ ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಇತ್ತೀಚೆಗೆ ವಿಮಾನ ಅಪಘಾತದಲ್ಲಿ ನಿಧನರಾದರು. ಅವರ ನಿಧನಕ್ಕೆ ಇಡೀ ರಾಜ್ಯವೇ ಕಂಬನಿ ಮಿಡಿದಿತ್ತು. ಅಜಿತ್ ಪವಾರ್ ಅವರ ಅಂತ್ಯಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
ಅಜಿತ್ ದಾದಾ ಅವರಿಗೆ ಕೊನೆಯ ಗೌರವ ಸಲ್ಲಿಸಲು ಲಕ್ಷಾಂತರ ಜನರು ಬಂದಿದ್ದ ಇದೇ ಸಂದರ್ಭದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ನೆರೆದಿದ್ದ ಲಕ್ಷಾಂತರ ಜನರ ದುಃಖದ ವಾತಾವರಣದ ಲಾಭ ಪಡೆದ ಖದೀಮರು ಅಲ್ಲಿ ನೆರೆದಿದ್ದವರ ಮೈಮೇಲೆ ಇದ್ದ ಚಿನ್ನಾಭರಣಗಳನ್ನು ಕದ್ದಿದ್ದಾರೆ.
ಹೀಗೆ ಕಳ್ಳರು ಕದ್ದ ಚಿನ್ನಾಭರಣಗಳ ಮೌಲ್ಯ ಸುಮಾರು 25 ರಿಂದ 30 ಲಕ್ಷ ರೂ ಗಳಾಗಿತ್ತು. ಹೀಗೆ ಖದೀಮರು ಕದ್ದ ಚಿನ್ನದಲ್ಲಿ ಸರ, ಉಂಗುರ, ಚೈನ್ ಮತ್ತು ಬ್ರೇಸ್ ಲೆಟ್ ಗಳು ಸೇರಿವೆ ಎನ್ನಲಾಗಿದೆ.
ಆಗಿದ್ದೇನು?
ಜನವರಿ 28 ರಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದರು. ಅವರ ಮೃತದೇಹವನ್ನು ಬಾರಾಮತಿಯ ವಿದ್ಯಾಪ್ರತಿಷ್ಠ ಮೈದಾನದಲ್ಲಿ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು.
ಈ ಅಂತ್ಯಕ್ರಿಯೆಗೆ ಮಹಾರಾಷ್ಟ್ರದ ಪ್ರತಿಯೊಂದು ಮೂಲೆ ಮತ್ತು ಮೂಲೆಯಿಂದ ಲಕ್ಷಾಂತರ ಜನರು ಕೊನೆಯ ವಿಧಿಗಳಿಗಾಗಿ ಬಾರಮತಿಗೆ ಆಗಮಿಸಿದ್ದರು. ಅಲ್ಲದೆ ಮಹಾರಾಷ್ಟ್ರದ ವಿವಿಧ ನಗರಗಳಾದ್ಯಂತ ಶೋಕಾಚರಣೆಯ ವಾತಾವರಣವಿತ್ತು. ಆದರೆ ಈ ಬೃಹತ್ ಜನಸಮೂಹದ ಲಾಭವನ್ನು ಪಡೆದ, ಕಳ್ಳರ ಗ್ಯಾಂಗ್ ಜನರನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡಿದೆ.
ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು
ಸುಮಾರು 15 ಜನರ ಕುತ್ತಿಗೆಯಿಂದ ಚಿನ್ನದ ಸರಗಳನ್ನು ಕಳವು ಮಾಡಲಾಗಿದ್ದು, ಹೀಗೆ ಕಳ್ಳರು ಕದ್ದ ಆಭರಣಗಳ ಮೌಲ್ಯವು ಸುಮಾರು 25 ರಿಂದ 30 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸಾವಿರಾರು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಆ ದಿನ ಸುಮಾರು 8 ಸಾವಿರ ಪೊಲೀಸ್ ಸಿಬ್ಬಂದಿಯನ್ನು ಬರಾಮತಿಯ ಅಂತ್ಯಕ್ರಿಯೆ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು. ಇದರ ಹೊರತಾಗಿಯೂ, ಅಂತಹ ದೊಡ್ಡ ಮಟ್ಟದ ಕಳ್ಳತನದ ಘಟನೆಯು ಪೊಲೀಸ್ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ.
ಪ್ರಕರಣ ದಾಖಲು ಹಲವರ ಬಂಧನ
ಏತನ್ಮಧ್ಯೆ, ಕೆಲವು ಶಂಕಿತ ಕಳ್ಳರು ನಾಗರಿಕರಿಂದ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಜನರೇ ಕೆಲವು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಚಿನ್ನಾಭರಣ ಕಳೆದುಕೊಂಡ ಸಂತ್ರಸ್ತರ ದೂರಿನ ಮೇರೆಗೆ ಬಾರಾಮತಿ ತಾಲ್ಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಲವು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರನ್ನು ಮೊಹಮ್ಮದ್ ಯೂನಸ್, ರಾಜ್ ಕುಮಾರ್ ಅಠಾವಲೆ, ಇಜಾಜ್ ಮಿರಾವಲೆ, ಮೊಹಮ್ಮದ್ ಸಿರಾಜ್, ಬಾಲು ಬೊಟ್ರೆ ಎಂದು ಗುರುತಿಸಲಾಗಿದೆ.
ಇವರಲ್ಲದೇ ಇತರೆ ಇಬ್ಬರು ಆರೋಪಿಗಳ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಎಲ್ಲಾ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ.