ನವದೆಹಲಿ: ಮಾಜಿ ಸೇನಾ ಮುಖ್ಯಸ್ಥ ಎಂಎಂ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆಯ ಕೆಲವೊಂದು ಅಂಶಗಳನ್ನು ಉಲ್ಲೇಖಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸ್ಪೀಕರ್ ಓಂ ಬಿರ್ಲಾ ಅನುಮತಿ ನಿರಾಕರಿಸಿದ್ದಕ್ಕಾಗಿ ವಿಪಕ್ಷಗಳು ಲೋಕಸಭೆಯಲ್ಲಿಂದು ತೀವ್ರ ಪ್ರತಿಭಟನೆ ನಡೆಸಿದವು.
ಇದರಿಂದಾಗಿ ಕಲಾಪವನ್ನು ಮಧ್ಯಾಹ್ನ 12 ಗಂಟೆಗೆ ತದನಂತರ 2 ಗಂಟೆಗೆ ಮುಂದೂಡಲಾಯಿತು. ಇಂದು ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆಯೇ ಸದನದ ಬಾವಿಗಿಳಿದ ವಿಪಕ್ಷ ಸದಸ್ಯರು, ಶರಣಾದ ಮೋದಿ ಎಂದು ಘೋಷಣೆ ಕೂಗಿ ಗದ್ದಲ ಎಬ್ಬಿಸಿದರು.
ಸ್ಪೀಕರ್ ಕೇವಲ ಒಂದು ಪ್ರಶ್ನೆಯನ್ನಷ್ಟೇ ತೆಗೆದುಕೊಂಡರು. ತದನಂತರ ವಿಪಕ್ಷ ಸದಸ್ಯರು ಪ್ರತಿಭಟನೆ ಆರಂಭಿಸಿದರು. ಈ ವೇಳೆ ಮಾತನಾಡಿದ ಸ್ಪೀಕರ್ ವಿವಿಧ ರಂಗಗಳಲ್ಲಿ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲು ಪ್ರಶ್ನೋತ್ತರ ಕಲಾಪ ವಿಪಕ್ಷಗಳಿಗೆ ನೆರವಾಗುತ್ತದೆ ಎಂದು ಹೇಳಿ ವಿಪಕ್ಷ ಸದಸ್ಯರನ್ನು ಮನವೊಲಿಸಲು ಯತ್ನಿಸಿದರು. ಆದರೆ, ವಿಪಕ್ಷ ಸದಸ್ಯರು ಪ್ರತಿಭಟನೆಯನ್ನು ತೀವ್ರಗೊಳಿಸಿದರು.
ಯೋಜಿತ ರೀತಿಯಲ್ಲಿ ಕಲಾಪಕ್ಕೆ ಅಡ್ಡಿಪಡಿಸುವುದು ಸಂಸದರಿಗೆ ಯೋಗ್ಯವಲ್ಲ ಎಂದು ಬಿರ್ಲಾ ಹೇಳಿದ ಸ್ಪೀಕರ್, ಸುಮಾರು ಒಂದು ಗಂಟೆಗಳ ಕಾಲ ಕಲಾಪವನ್ನು ಮುಂದೂಡಿದರು. ಬಳಿಕ ಸಮಾವೇಶಗೊಂಡಾಗಲೂ ಪ್ರತಿಭಟನೆ ಮುಂದುವರೆದರಿಂದ ಕಲಾಪವನ್ನು ಮಧ್ಯಾಹ್ನ2 ಗಂಟೆಗೆ ಮುಂದೂಡಿದರು. ನಿನ್ನೆಯೂ ಇದೇ ವಿಚಾರವಾಗಿ ಲೋಕಸಭೆಯಲ್ಲಿ ಕೋಲಾಹಲವೇ ಉಂಟಾಗಿತ್ತು.