ನವದೆಹಲಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ಶ್ಲಾಘಿಸಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು, ಇದು "ಭಾರತದ ಉಜ್ವಲ ಭವಿಷ್ಯಕ್ಕೆ ಶುಭ ಸೂಚನೆ" ಎಂದು ಮಂಗಳವಾರ ಹೇಳಿದ್ದಾರೆ.
ಭಾರತ ಮತ್ತು ಅಮೆರಿಕ ನಡುವಿನ ಈ ಒಪ್ಪಂದವು ಬಡವರು, ಮೀನುಗಾರರು, ರೈತರು ಮತ್ತು ಯುವಕರಿಗೆ ವಿಶಾಲ ಅವಕಾಶಗಳನ್ನು ಒದಗಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿದ ಒಂದು ದಿನದ ನಂತರ ಸುಂಕವನ್ನು ಶೇಕಡಾ 50 ರಿಂದ 18 ಕ್ಕೆ ಇಳಿಸಿದ್ದು, ಗೋಯಲ್ ಅವರು ಈ ಬಗ್ಗೆ ಸಂಸತ್ತಿನಲ್ಲಿ ಮಾತನಾಡಲು ಬಯಸಿದ್ದರು.
ಈ ಒಪ್ಪಂದದ ಬಗ್ಗೆ ಸಂಸತ್ತಿನಲ್ಲಿ ಮಾತನಾಡಲು ಬಯಸಿದ್ದೆ. ಆದರೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಸೃಷ್ಟಿಸಿದ ಗೊಂದಲಗಳಿಂದಾಗಿ ಅದು ಸಾಧ್ಯವಾಗಲಿಲ್ಲ ಎಂದು ಗೋಯಲ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಜೊತೆ ಬಹುನಿರೀಕ್ಷಿತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿದ್ದಾರೆ ಮತ್ತು ಇಡೀ ರಾಷ್ಟ್ರವು ಅವರನ್ನು ಅಭಿನಂದಿಸುತ್ತಿದೆ ಎಂದು ಸಚಿವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ವೈಯಕ್ತಿಕ ಬಾಂಧವ್ಯವು ಈ ವ್ಯಾಪಾರ ಒಪ್ಪಂದ ಯಶಸ್ವಿಗೆ ಕಾರಣ ಎಂದು ಅವರು ತಿಳಿಸಿದ್ದಾರೆ.
ಭಾರತವು ಸೂಕ್ಷ್ಮ ಕ್ಷೇತ್ರಗಳ, ವಿಶೇಷವಾಗಿ ಕೃಷಿ, ಡೈರಿ ಮತ್ತು ಪಶುಸಂಗೋಪನೆಗಳ ಹಿತಾಸಕ್ತಿಗಳನ್ನು ಕಾಪಾಡಿದೆ. ನರೇಂದ್ರ ಮೋದಿ ಅವರು ಯಾವಾಗಲೂ ಕೃಷಿ ಮತ್ತು ಡೈರಿ ವಲಯದ ಕಲ್ಯಾಣಕ್ಕಾಗಿ ವಿಶೇಷ ಗಮನ ನೀಡಿದ್ದಾರೆ ಎಂದ ಪಿಯೂಷ್ ಗೋಯಲ್ ಹೇಳಿದರು.
ವ್ಯಾಪಾರ ಒಪ್ಪಂದದ ಅಂತಿಮ ವಿವರಗಳನ್ನು ಇನ್ನೂ ಕೆಲಸ ಮಾಡಲಾಗುತ್ತಿದೆ. ಅಂತಿಮವಾದ ನಂತರ ಭಾರತ-ಅಮೆರಿಕ ಜಂಟಿ ಹೇಳಿಕೆಯನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ಗೋಯಲ್ ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಗೋಯಲ್, ಒಪ್ಪಂದದ ಬಗ್ಗೆ ರಾಷ್ಟ್ರವನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿರುವುದು "ವಿಷಾದನೀಯ" ಮತ್ತು "ಭಾರತದ ಪ್ರಗತಿಯ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲ" ಎಂದು ಟೀಕಿಸಿದರು.