ಲಖನೌ: 'ಚೈನೀಸ್ ಮಾಂಜಾ' (ಗಾಳಿಪಟದ ದಾರ) ದಿಂದ ಉಂಟಾಗುವ ಸಾವುಗಳನ್ನು ಕೊಲೆ ಎಂದೇ ಪರಿಗಣಿಸಲಾಗುತ್ತದೆ ಮತ್ತು ತಪ್ಪಿತಸ್ಥರ ವಿರುದ್ಧ ಸಾಧ್ಯವಾದಷ್ಟು ಕಠಿಣ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ ಆದೇಶಿಸಿದ್ದಾರೆ.
ಬುಧವಾರ ಲಖನೌನ ಬಜಾರ್ಖಲಾ ಪ್ರದೇಶದಲ್ಲಿ ಗಾಳಿಪಟದ ದಾರದಿಂದ ಕುತ್ತಿಗೆ ಸೀಳಿದ ಪರಿಣಾಮ ಬೈಕ್ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇದೇ ರೀತಿಯ ಘಟನೆಗಳು ತೀವ್ರವಾಗಿ ಹೆಚ್ಚವಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಈ ನಿರ್ದೇಶನ ನೀಡಿದ್ದಾರೆ.
'ಚೈನೀಸ್ ಮಾಂಜಾ'ದಿಂದ ಉಂಟಾಗುವ ಸಾವುನೋವುಗಳನ್ನು ಯೋಗಿ ಆದಿತ್ಯನಾಥ್ ಗಂಭೀರವಾಗಿ ಪರಿಗಣಿಸಿದ್ದಾರೆ ಮತ್ತು ರಾಜ್ಯದಾದ್ಯಂತ ಅದರ ತಯಾರಿಕೆ, ಮಾರಾಟ ಮತ್ತು ಬಳಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ' ಎಂದು ಮುಖ್ಯಮಂತ್ರಿ ಕಚೇರಿ 'X' ನಲ್ಲಿ ಪೋಸ್ಟ್ ಮಾಡಿದೆ.
'ಚೈನೀಸ್ ಮಾಂಜಾದಿಂದ ಉಂಟಾಗುವ ಅಪಘಾತಗಳನ್ನು ಗಮನದಲ್ಲಿಟ್ಟುಕೊಂಡು, ಮುಖ್ಯಮಂತ್ರಿಗಳು ಅದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ ಮತ್ತು ಉನ್ನತ ಮಟ್ಟದ ಪರಿಶೀಲನೆಯೊಂದಿಗೆ ರಾಜ್ಯದಾದ್ಯಂತ ಈ ಅಭಿಯಾನ ಕೈಗೊಳ್ಳುವಂತೆ ಆದೇಶಿಸಿದ್ದಾರೆ' ಎಂದು ಹೇಳಿದೆ.
ಇದರಿಂದ ಉಂಟಾಗುವ ಸಾವುಗಳನ್ನು ಕೊಲೆ ವರ್ಗದ ಅಡಿಯಲ್ಲಿ ಪರಿಗಣಿಸಬೇಕು. ಉತ್ತರ ಪ್ರದೇಶ ಸರ್ಕಾರವು ಸಾರ್ವಜನಿಕ ಜೀವನದ ಸುರಕ್ಷತೆಗೆ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಆದಿತ್ಯನಾಥ್ ಪ್ರತಿಪಾದಿಸಿದ್ದಾರೆ ಎಂದು ತಿಳಿಸಿದೆ.
ಬುಧವಾರ ಮಧ್ಯಾಹ್ನ, ದುಬಗ್ಗಾದ ಸಿತೇ ಬಿಹಾರದ ನಿವಾಸಿ ಸೈಯದ್ ಶೋಯೆಬ್ (34) ಅವರು ಬಜಾರ್ಖಾಲಾ ಪ್ರದೇಶದ ಹೈದರ್ ಗಂಜ್ ಮೇಲ್ಸೇತುವೆ ಮೇಲೆ ಚೈನೀಸ್ ಮಾಂಜಾದಿಂದ ಗಂಟಲು ಸೀಳಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈದ್ಯಕೀಯ ಪ್ರತಿನಿಧಿಯಾಗಿರುವ ಶೋಯೆಬ್, ಮಿಲ್ ಪ್ರದೇಶದಿಂದ ಹೈದರ್ ಗಂಜ್ ಕಡೆಗೆ ಮೋಟಾರ್ ಸೈಕಲ್ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ, ರಸ್ತೆ ಮಧ್ಯೆಯಲ್ಲಿ ಗಾಳಿಯಲ್ಲಿ ನೇತಾಡುತ್ತಿದ್ದ ಗಾಳಿಪಟದ ದಾರವು ಇದ್ದಕ್ಕಿದ್ದಂತೆ ಶೋಯೆಬ್ ಅವರ ಕುತ್ತಿಗೆ ಸೀಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈವೇಳೆ ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ರಸ್ತೆಗೆ ಬಿದ್ದಿದೆ. ಕೂಡಲೇ ಸ್ಥಳದಲ್ಲಿದ್ದವರು ಅವರು ಆಸ್ಪತ್ರೆಗೆ ಕರೆದೊಯ್ದರೂ, ಅತಿಯಾದ ರಕ್ತಸ್ರಾವದಿಂದಾಗಿ ಅವರು ಆ ವೇಳೆಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.