ನವದೆಹಲಿ: "ನಮ್ಮ ಶಕ್ತಿಯ ಮಹತ್ವದ ಭಾಗವನ್ನು ಹಿಂದಿನ ತಪ್ಪುಗಳನ್ನು ಸರಿಪಡಿಸಲು ವ್ಯಯವಾಗುತ್ತಿದೆ. ಆ ಅವಧಿಯಲ್ಲಿ ಭಾರತದ ಬಗ್ಗೆ ಸೃಷ್ಟಿಯಾದ ಚಿತ್ರಣವನ್ನು ಅಳಿಸಲು ಹೆಚ್ಚಿನ ಪ್ರಯತ್ನ ಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಇಂದು ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, "ನಾವು ಭವಿಷ್ಯಕ್ಕೆ ಸಿದ್ಧವಾಗಿರುವ ನೀತಿಗಳ ಮೇಲೆ ಬಲವಾದ ಒತ್ತು ನೀಡಿದ್ದೇವೆ. ಇಂದು, ದೇಶವನ್ನು ನೀತಿ ಮತ್ತು ಕಾರ್ಯತಂತ್ರದ ಆಧಾರದ ಮೇಲೆ ಆಳಲಾಗುತ್ತಿದೆ. ಭಾರತದ ಮೇಲಿನ ಜಾಗತಿಕ ನಂಬಿಕೆ ಹೆಚ್ಚುತ್ತಿದೆ ಎಂದರು.
ಪ್ರತಿಪಕ್ಷಗಳ ತೀವ್ರ ಗದ್ದಲ ಹಾಗೂ ಕೋಲಾಹದ ನಡುವೆ ದೇಶದ ಪ್ರಗತಿಯ ಕುರಿತು ವಿವರಣೆ ನೀಡಿದ ಪ್ರಧಾನಿ ಮೋದಿ, ಭಾರತ ಈಗ ಎಲ್ಲಾ ಕ್ಷೇತ್ರಗಳಲ್ಲೂ ಮುನ್ನುಗ್ಗುತ್ತಿದೆ ಎಂದರು.
21ನೇ ಶತಮಾನದ ಮೊದಲ ಕಾಲುಭಾಗ ಮುಗಿದು ಹೋಗಿದೆ. ಸ್ವಾತಂತ್ರ್ಯದ ಶತಮಾನೋತ್ಸವದಲ್ಲಿ ಮತ್ತೊಂದು ಕಾಲು ಭಾಗ ಬರಲಿದೆ. 21ನೇ ಶತಮಾನದ ಮತ್ತೊಂದು ಕಾಲುಭಾಗ ಭಾರತದ ಅಭಿವೃದ್ದಿಗೆ ಮೀಸಲು ಎಂದು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ ಆರ್ಥಿಕತೆಯಲ್ಲಿ 6ನೇ ಸ್ಥಾನದಲ್ಲಿ ಭಾರತ ಇತ್ತು. ಇವರೆಲ್ಲಾ ಸೇರಿ 12ನೇ ಸ್ಥಾನಕ್ಕೆ ಇಳಿಸಿ ಬಿಟ್ಟರು. ಆದರೆ ನಾವು ಅಧಿಕಾರಕ್ಕೆ ಬಂದ ಬಳಿಕ 3ನೇ ಸ್ಥಾನಕ್ಕೆ ಬಂದಿದ್ದೇವೆ. ಭಾರತ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದೆ. ದೊಡ್ಡ ದೊಡ್ಡ ಆರ್ಥಿಕತೆಯಲ್ಲಿ ಭಾರತದ ಬೆಳವಣಿಗೆಯೂ ಹೆಚ್ಚಿದೆ. ಹೆಚ್ಚಿನ ಬೆಳವಣಿಗೆ, ಕಡಿಮೆ ಹಣದುಬ್ಬರ ಇದರ ಲಕ್ಷಣವಾಗಿದೆ ಎಂದರು.
"...ಭಾರತವು ಹಲವಾರು ದೇಶಗಳೊಂದಿಗೆ ಭವಿಷ್ಯಕ್ಕೆ ಸಿದ್ಧವಾದ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕುತ್ತಿದೆ. ಕಳೆದ ಕೆಲವು ದಿನಗಳಲ್ಲಿ, ನಾವು ವಿಶ್ವದ 9 ದೊಡ್ಡ ಮತ್ತು ಪ್ರಮುಖ ದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದ್ದೇವೆ. 27 ದೇಶಗಳೊಂದಿಗೆ, ಯುರೋಪಿಯನ್ ಒಕ್ಕೂಟದೊಂದಿಗೆ ಮಾಡಿಕೊಂಡಿರುವ ಒಪ್ಪಂದವೂ ಒಪ್ಪಂದಗಳ ಮಹಾ ತಾಯಿ ಎಂದು ಬಣ್ಣಿಸಿದರು.
ಕೆಂಪುಕೋಟೆಯಲ್ಲಿ ಕಾಂಗ್ರೆಸ್ ಪ್ರಧಾನಿಗಳ ಭಾಷಣ ಕೇಳಿಸಿಕೊಳ್ಳಿ. ಅವರ ಭಾಷಣಗಳಲ್ಲಿ ಯಾವುದೇ ಅಭಿವೃದ್ದಿ ಬಗೆಗಿನ ಮಾತುಗಳು ಇರಲಿಲ್ಲ. ನಮ್ಮ ಹೆಚ್ಚಿನ ಶಕ್ತಿ ಅವರ ತಪ್ಪುಗಳನ್ನು ಸರಿಪಡಿಸುವುದರಲ್ಲಿ ಮುಗಿಯುತ್ತಿದೆ. ಇಂದು ದೇಶ ನೀತಿಗಳ ಆಧಾರದಲ್ಲಿ ನಡೆಯುತ್ತಿದೆ ಎಂದರು.
ಪ್ರತಿಪಕ್ಷಗಳಿಂದ ಸಭಾತ್ಯಾಗ
ಪ್ರಧಾನಿ ಮೋದಿ ಭಾಷಣ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳ ಗದ್ದಲ ಆರಂಭಗೊಂಡಿತು. ಪ್ರಧಾನಿ ಮೋದಿ ವಿರುದ್ಧ ವಿಪಕ್ಷ ನಾಯಕರು ಘೋಷಣೆ ಕೂಗಿದರು. ಸರ್ವಾಧಿಕಾರಿ ಧೋರಣೆ ನಡೆಯುವುದಿಲ್ಲ ಎಂದು ಪ್ರತಿಪಕ್ಷಗಳ ಸದಸ್ಯರು ಘೋಷಣೆ ಕೂಗಿ, ಸಭಾತ್ಯಾಗ ಮಾಡಿದರು.