ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಸದಸ್ಯರಿಂದ ಬೆದರಿಕೆ ಇತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಗಂಭೀರ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಸ್ಪೀಕರ್ ಹಿಂದೆ ಮೋದಿ "ಅಡಗಿಕೊಂಡಿದ್ದಾರೆ" ಎಂದು ಗುರುವಾರ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ಕೆಲವು ಸದಸ್ಯರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ "ಅನಿರೀಕ್ಷಿತ ಕೃತ್ಯ" ನಡೆಸಲು ಯೋಜಿಸುತ್ತಿದ್ದಾರೆ ಎಂಬ ಹೇಳಿಕೆ "ಸಂಪೂರ್ಣ ಸುಳ್ಳು" ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
"ಪ್ರಧಾನಿ ಮೋದಿ ಅವರಿಗೆ ಸದನಕ್ಕೆ ಬರುವ ಧೈರ್ಯ ಇರಲಿಲ್ಲ. ಹಾಗಾಗಿ ಅವರು ಸ್ಪೀಕರ್ ಮೂಲಕ ಇದನ್ನೆಲ್ಲಾ ಹೇಳಿಸುತ್ತಿದ್ದಾರೆ. ಕ್ಷಮಿಸಿ, ಪ್ರಧಾನಿಯವರು ಸ್ಪೀಕರ್ ಹಿಂದೆ ಅಡಗಿಕೊಂಡಿದ್ದಾರೆ... ಏಕೆಂದರೆ ಅವರ ಪೀಠದ ಮುಂದೆ ಮೂವರು ಮಹಿಳೆಯರು ನಿಂತಿದ್ದರು, ಇದು ಎಂತಹ ಅಸಂಬದ್ಧ" ಎಂದು ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.
ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಏಕೆ ಅವಕಾಶ ನೀಡಲಿಲ್ಲ ಎಂದು ನೀವು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಸರ್ಕಾರವನ್ನು ಕೇಳಬೇಕು ಎಂದು ಮಾಧ್ಯಮಗಳಿಗೆ ಒತ್ತಾಯಿಸಿದರು.
ಕಾಂಗ್ರೆಸ್ ಸಂಸದರು ಮೋದಿ ಅವರ ಆಸೀನದ ಬಳಿ 'ಅನಿರೀಕ್ಷಿತ ಕೃತ್ಯ' ಎಸಗಲು ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ನನಗೆ ಲಭಿಸಿತ್ತು. ಹೀಗಾಗಿ ನಾನೇ ಅವರಿಗೆ ಸದನಕ್ಕೆ ಹಾಜರಾಗದಂತೆ ಸಲಹೆ ನೀಡಿದ್ದಾಗಿ ಸ್ಪೀಕರ್ ಓಂ ಬಿರ್ಲಾ ಅವರು ಅಚ್ಚರಿಯ ಆರೋಪ ಮಾಡಿದ್ದಾರೆ.