ಚೆನ್ನೈ: ತಮಿಳುನಾಡು ಕೃಷಿ ಸಚಿವ ಎಂಆರ್ಕೆ ಪನ್ನೀರ್ಸೆಲ್ವಂ ಬುಧವಾರ ಭಾಷಾ ವಿವಾದವನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ. 'ಹಿಂದಿ ಮಾತ್ರ ಕಲಿತಿರುವ' ಉತ್ತರದವರಿಗೆ ದಕ್ಷಿಣದ ರಾಜ್ಯದಲ್ಲಿ ಸೀಮಿತ ಉದ್ಯೋಗಾವಕಾಶಗಳಿವೆ. ಹೀಗಾಗಿ, ಸಣ್ಣಪುಟ್ಟ ಕೆಲಸಗಳನ್ನು ಮಾತ್ರ ಮಾಡುತ್ತಾರೆ. ಆದರೆ, ತಮಿಳು ಮತ್ತು ಇಂಗ್ಲಿಷ್ ಮೇಲೆ ಗಮನ ಕೇಂದ್ರೀಕರಿಸುವ ರಾಜ್ಯದ ದ್ವಿಭಾಷಾ ನೀತಿಯಿಂದಾಗಿ ತಮಿಳರು ಅಮೆರಿಕ ಅಥವಾ ಲಂಡನ್ನಲ್ಲಿ ಉದ್ಯೋಗಗಳನ್ನು ಪಡೆದರು ಎಂದಿದ್ದಾರೆ.
'... ಉತ್ತರದ ರಾಜ್ಯಗಳಿಂದ ಬರುವವರು ತಮಿಳುನಾಡಿಗೆ ಟೇಬಲ್ ಸ್ವಚ್ಛಗೊಳಿಸಲು ಬರುತ್ತಿದ್ದಾರೆ... ಹಿಂದಿ ಮಾತ್ರ ಕಲಿತಿರುವುದರಿಂದ ಅವರು ಇಲ್ಲಿಗೆ ಕಟ್ಟಡ ನಿರ್ಮಾಣ ಕಾರ್ಮಿಕರಾಗಿ, ಪಾನಿ ಪುರಿ ಮಾರಾಟಗಾರರಾಗಿ ಕೆಲಸ ಮಾಡಲು ಬರುತ್ತಿದ್ದಾರೆ. ಆದರೆ ನಮ್ಮ ಮಕ್ಕಳು ವಿದೇಶಕ್ಕೆ ಹೋಗಿದ್ದಾರೆ... ನಾವು ದ್ವಿಭಾಷಾ ನೀತಿಯನ್ನು ಅನುಸರಿಸುತ್ತೇವೆ. ಇಂಗ್ಲಿಷ್ ಅನ್ನು ಚೆನ್ನಾಗಿ ಕಲಿಯುತ್ತೇವೆ. ಅವರು ವಿದೇಶಕ್ಕೆ ಹೋಗಿ ಅಮೆರಿಕ, ಲಂಡನ್ನಲ್ಲಿ ಕೋಟಿಗಟ್ಟಲೆ ಸಂಪಾದಿಸುವ ಅವಕಾಶಗಳನ್ನು ಪಡೆಯುತ್ತಿದ್ದಾರೆ' ಎಂದು ಹೇಳಿದ್ದಾರೆ.
ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿಎಂಕೆ ವಕ್ತಾರ ಡಾ. ಸೈಯದ್ ಹಫೀಜುಲ್ಲಾ, 'ಕಾನೂನಾತ್ಮಕವಾಗಿರುವ ಪ್ರತಿಯೊಂದು ಕೆಲಸದಲ್ಲೂ ಘನತೆ ಇದೆ... ನಾವು ಅದನ್ನು ವಿರೋಧಿಸುವುದಿಲ್ಲ. ತಮಿಳುನಾಡು 'ಹಿಂದಿ ಮಾತನಾಡುವವರು ಅಥವಾ ಅವರು ಮಾಡುವ ಕೆಲಸಗಳ ವಿರುದ್ಧ ಯಾವುದೇ ವಿರೋಧ ಹೊಂದಿಲ್ಲ'' ಎಂದಿದ್ದಾರೆ.
'ದ್ವಿಭಾಷಾ ನೀತಿಯು ತಮಿಳುನಾಡು ಮತ್ತು ಅದರ ಜನರಿಗೆ ಸಹಾಯ ಮಾಡಿದೆ. ಇಂಗ್ಲಿಷ್ ಜನರಿಗೆ ಅಭಿವೃದ್ಧಿ ಮತ್ತು ಜಾಗತಿಕ ಅವಕಾಶಗಳನ್ನು ನೀಡಿದೆ. ಇಂಗ್ಲಿಷ್ಗೆ ಆದ್ಯತೆ ನೀಡದೆ, ಹಿಂದಿ ಮಾತನಾಡುವ ರಾಜ್ಯಗಳ ಜನರು ಶಿಕ್ಷಣದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗಲಿಲ್ಲ...' ಎಂದು ಅವರು ಇಂದು ಬೆಳಿಗ್ಗೆ ಬಿಡುಗಡೆ ಮಾಡಿದ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈಮಧ್ಯೆ, ಡಿಎಂಕೆ ಸಂಸದ ಟಿಆರ್ ಬಾಲು, ತಮ್ಮ ಸಹೋದ್ಯೋಗಿಯ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ.
'ಪನ್ನೀರ್ಸೆಲ್ವಂ ಒಬ್ಬ ಜವಾಬ್ದಾರಿಯುತ ಸಚಿವರು... ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಉತ್ತರ ಭಾರತೀಯರ ವಿರುದ್ಧ ಏನನ್ನೂ ಹೇಳಿಲ್ಲ' ಎಂದ ಅವರು ರಾಜ್ಯದಲ್ಲಿ 'ಹಿಂದಿ ಹೇರಿಕೆ'ಗೆ ವಿರೋಧವಿದೆ ಎಂದರು.