ಕೋಲ್ಕತ್ತಾ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬದುರಿಯಾದ ಬ್ಲಾಕ್ ಅಭಿವೃದ್ಧಿ ಅಧಿಕಾರಿ(ಬಿಡಿಒ) ಕಚೇರಿಯ ಮುಂದೆ ಶನಿವಾರ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಸಂದರ್ಭದಲ್ಲಿ ಮೃತಪಟ್ಟವರ ಪಟ್ಟಿ ಸೇರಿದ ಸುಮಾರು 33 ಕ್ಕೂ ಹೆಚ್ಚು 'ಡೆಡ್' ಮತದಾರರು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಬದುರಿಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 45 ಮತ್ತು 80ರ ಮತದಾರರು ತಮ್ಮ ಹೆಸರು ನೋಂದಾಯಿಸುತ್ತಿದ್ದರು. ಈ ವೇಳೆ ಫಾರ್ಮ್-7 ಅನ್ನು ಭರ್ತಿ ಮಾಡುವಾಗ ಬಿಜೆಪಿ ಕಾರ್ಯಕರ್ತರು ಅವರನ್ನು 'ಮೃತ' ಮತದಾರರು ಎಂದು ತಪ್ಪಾಗಿ ಗುರುತಿಸಿದ್ದಾರೆ ಎಂದು ಆರೋಪಿಸಿ, ಪ್ರತಿಭಟನೆ ನಡೆಸಿದರು.
"ಫಾರ್ಮ್-7 ರಲ್ಲಿ 'ಮೃತ' ಎಂದು ಕಾಣಿಸಿಕೊಂಡಿರುವ ಹೆಸರುಗಳಿಗೆ ಸಂಬಂಧಿಸಿದಂತೆ ನಮಗೆ ಹಲವಾರು ಮತದಾರರಿಂದ ದೂರುಗಳು ಬಂದಿವೆ. ಅವರ ದೂರುಗಳನ್ನು ಪರಿಶೀಲಿಸಿದ ನಂತರ ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ" ಎಂದು ಸ್ಥಳೀಯ ಬಿಡಿಒ ಪಾರ್ಥ ಹಜ್ರಾ ಹೇಳಿದ್ದಾರೆ.
"ಇದು ಬಿಜೆಪಿಯ ಒಂದು ಯೋಜನೆ. ಏಕೆಂದರೆ ಅದು SIR ವೇಳೆ ಜೀವಂತ ಮತದಾರರನ್ನು ಮೃತರು ಎಂದು ತೋರಿಸಲು ಪ್ರಯತ್ನಿಸುತ್ತಿದೆ. ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ತೃಣಮೂಲ ಕಾಂಗ್ರೆಸ್ ವಿರುದ್ಧ ಅವರು ಮತ್ತೊಂದು ಅವಮಾನಕರ ಸೋಲನ್ನು ಅನುಭವಿಸಲಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪಿತೂರಿಯಲ್ಲಿ ಭಾಗಿಯಾಗಿರುವ ಸ್ಥಳೀಯ ಬಿಜೆಪಿ ಘಟಕ ಮತ್ತು ಇತರರ ವಿರುದ್ಧ ನಾವು ಎಫ್ಐಆರ್ ದಾಖಲಿಸುತ್ತೇವೆ" ಎಂದು ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕ ಮೆಹಬೂರ್ ಆಲಂ ಆರೋಪಿಸಿದ್ದಾರೆ.
ಇದಕ್ಕೂ ಮೊದಲು, ವಿಧಾನಸಭಾ ಚುನಾವಣೆಗೆ ಪ್ರಚಾರವನ್ನು ಆರಂಭಿಸಿದ ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು, ಕರಡು ಮತದಾರರ ಪಟ್ಟಿಯಲ್ಲಿ ಮೃತ ಮತದಾರರೆಂದು ಗುರುತಿಸಲಾಗಿದ್ದ ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆಯೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು.