ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ವಿಮಾನ ಅಪಘಾತದ ಸುತ್ತ ಎಲ್ಲರಿಗೂ ಅನುಮಾನಗಳಿವೆ ಮತ್ತು ಫೆಬ್ರವರಿ 10 ರಂದು ಅದರ ಬಗ್ಗೆ ವಿವರವಾದ ಮಾಹಿತಿ ನೀಡುವುದಾಗಿ ಎನ್ಸಿಪಿ-ಶರದ್ಚಂದ್ರ ಪವಾರ್ ನಾಯಕ ರೋಹಿತ್ ಪವಾರ್ ಅವರು ಶನಿವಾರ ಹೇಳಿದ್ದಾರೆ.
ಇಂದು ಬಾರಾಮತಿಯಲ್ಲಿ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಜಿತ ಪವಾರ್ ಸಂಬಂಧಿ ಹಾಗೂ ಶಾಸಕ ರೋಹಿತ್ ಪವಾರ್ ಅವರು, ಎನ್ಸಿಪಿ ಬಣಗಳು ಒಂದಾಗಬೇಕೆಂದು ಅಜಿತ್ ಪವಾರ್ ಬಯಸಿದ್ದರು ಮತ್ತು ವಿಲೀನಕ್ಕಾಗಿ ಯತ್ನಿಸುತ್ತಿದ್ದರು ಎಂದರು.
ಕಳೆದ ತಿಂಗಳು ವಿಮಾನ ಪತನದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿನ ನಡುವೆಯೇ ಮಹಾರಾಷ್ಟ್ರದ 12 ಜಿಲ್ಲಾ ಪರಿಷತ್ಗಳು ಮತ್ತು 125 ಪಂಚಾಯತ್ ಸಮಿತಿಗಳಿಗೆ ಶನಿವಾರ ಚುನಾವಣೆ ನಡೆಯುತ್ತಿದೆ.
ಜನವರಿ 28 ರಂದು ಪುಣೆ ಜಿಲ್ಲೆಯ ಬಾರಾಮತಿ ಟೇಬಲ್-ಟಾಪ್ ಏರ್ ಸ್ಟ್ರಿಪ್ನಲ್ಲಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ಲಿಯರ್ಜೆಟ್ 45 ವಿಮಾನ ಪತನವಾಗಿತ್ತು.
"ಈ ವಿಮಾನ ಅಪಘಾತ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಪ್ರಶ್ನೆಗಳನ್ನು ಹುಟ್ಟು ಹಾಕಿದೆ ಮತ್ತು ಅನುಮಾನಗಳಿವೆ. ಫೆಬ್ರವರಿ 10 ರಂದು ಮುಂಬೈನಲ್ಲಿ ನಾನು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ. ಅಪಘಾತ ಏಕೆ ಸಂಭವಿಸಿತು ಮತ್ತು ಅದು ಹೇಗೆ ಸಂಭವಿಸಿರಬಹುದು, ಈ ವಿಷಯಗಳನ್ನು ಫೆಬ್ರವರಿ 10 ರಂದು ಎತ್ತಲಾಗುವುದು" ಎಂದು ರೋಹಿತ್ ಪವಾರ್ ಹೇಳಿದ್ದಾರೆ.