ಭೋಪಾಲ್: ಭಾರತ- ಅಮೆರಿಕ ನಡುವಿನ ಹೊಸ ವ್ಯಾಪಾರ ಒಪ್ಪಂದಿಂದ ದೇಶ ಶರಣಾಗಿದ್ದು, ದೇಶದ ರೈತರಿಗೆ ಭಾರಿ ಹೊಡೆತ ಬೀಳಲಿದ ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ಹಲವು ನಾಯಕರು ಆರೋಪಿಸುತ್ತಿದ್ದಾರೆ. ಈ ಆರೋಪಗಳನ್ನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನಿರಾಕರಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಚನಾತ್ಮಕ ಮಾತುಕತೆಯ ಮೂಲಕ ಒಪ್ಪಂದ ಮಾಡಿಕೊಳ್ಳಲಾಗಿದೆಯೇ ಹೊರತು 'ಸೌದೆಬಾಜಿ' (ಚೌಕಾಶಿ) ಯಿಂದಲ್ಲ ಎಂದು ಕಿಡಿಕಾರಿದ್ದಾರೆ.
ಒಪ್ಪಂದವು ಕೃಷಿ ಕ್ಷೇತ್ರಕ್ಕೆ ಸಂಪೂರ್ಣ ರಕ್ಷಣೆ ನೀಡುತ್ತದೆ ಮತ್ತು ರೈತರ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಲಿದೆ. ಕೃಷಿಕರಿಗೆ ಪ್ರಮುಖವಾದ ಕೃಷಿ ಉತ್ಪನ್ನಗಳನ್ನು ಒಪ್ಪಂದದಿಂದ ಹೊರಗಿಡಲಾಗಿದೆ ಎಂದು ತಿಳಿಸಿದ್ದಾರೆ.
ಭಾರತೀಯ ರೈತರಿಗೆ ಸಣ್ಣದೊಂದು ಹಾನಿಯನ್ನುಂಟುಮಾಡುವ ಯಾವುದೇ ಉತ್ಪನ್ನವನ್ನು ಈ ಒಪ್ಪಂದದಲ್ಲಿ ಸೇರಿಸಲಾಗಿಲ್ಲ. ಕಾಂಗ್ರೆಸ್ ವರ್ಷಗಳ ಕಾಲ ಆಡಳಿತ ನಡೆಸಿದರೂ, ರೈತರನ್ನು ಜಾಗತಿಕ ಮಾರುಕಟ್ಟೆಗೆ ಸಂಪರ್ಕಿಸಲು ಅಥವಾ ಭಾರತೀಯ ಆರ್ಥಿಕತೆಗೆ ಸ್ಥಿರತೆಯನ್ನು ತರುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಭಾರತದ ನೀತಿಯು ಬದ್ಧತೆಯಾಗಿದೆ, ರಾಜಿ ಅಲ್ಲ ಎಂಬ ಸಂದೇಶವನ್ನು"ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಜಗತ್ತಿಗೆ ರವಾನಿಸಿದೆ. ನಾವು ದೇಶದ ಹಿತಾಸಕ್ತಿಯಲ್ಲಿ ಆತ್ಮ ವಿಶ್ವಾಸದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ" ಎಂದು ಕೇಂದ್ರ ಸಚಿವರು ಹೇಳಿದರು. ವ್ಯಾಪಾರ ಒಪ್ಪಂದದಿಂದ ಭಾರತಕ್ಕೆ ಯಾವುದೇ ಪ್ರಯೋಜನವಾಗಿಲ್ಲ ಮತ್ತು ಇದು ದೇಶದ ಸ್ವಾಭಿಮಾನ ಮತ್ತು ಹಿತಾಸಕ್ತಿಗಳ 'ಒಪ್ಪಂದವಲ್ಲ ಬದಲಾಗಿ ಶರಣಾಗತಿ' ಎಂದು ಕಾಂಗ್ರೆಸ್ ಶನಿವಾರ ಹೇಳಿತ್ತು.
ವಿರೋಧ ಪಕ್ಷದ ಹೇಳಿಕೆಯನ್ನು ತಳ್ಳಿಹಾಕಿದ ಚೌಹಾಣ್, “ನಾವು ಸೌದೆಬಾಜಿ (ಚೌಕಾಶಿ) ಮಾಡಿಲ್ಲ. ಆದರೆ ರಚನಾತ್ಮಕ ಮಾತುಕತೆಯೊಂದಿಗೆ ಸಮತೋಲಿತ ವಿಧಾನದಿಂದ ಮಾಡಿದ್ದೇವೆ. ಒಪ್ಪಂದವು ಭಾರತದ ರಾಜತಾಂತ್ರಿಕತೆ, ಅಭಿವೃದ್ಧಿ ಮತ್ತು ಘನತೆಗೆ ಒಂದು ಅನನ್ಯ ಉದಾಹರಣೆಯಾಗಿದೆ ಎಂದು ಅವರು ಪ್ರತಿಪಾದಿಸಿದರು.
ರಾಜತಾಂತ್ರಿಕತೆ ಎಂದರೆ ರಾಷ್ಟ್ರ ಮೊದಲು, ಅಭಿವೃದ್ಧಿಯು ದೇಶದ ಅಡಿಪಾಯ, ಘನತೆ ಎಂದರೆ ರೈತರ ಘನತೆಗೆ ಸಂಪೂರ್ಣವಾಗಿ ಕಾಳಜಿ ವಹಿಸಲಾಗಿದೆ" ಎಂದು ಅವರು ಹೇಳಿದರು. ಕಾಂಗ್ರೆಸ್ ದಶಕಗಳ ಕಾಲ ದೇಶವನ್ನು ಆಳಿದ್ದರೂ ರೈತರಿಗಾಗಿ ಏನು ಮಾಡಿಲ್ಲ. ದೇಶದ ಆರ್ಥಿಕತೆ ವಿಶ್ವದಲ್ಲಿಯೇ ಮೂರನೇ ಆರ್ಥಿಕತೆಯನ್ನಾಗಿಸುವ ಮೂಲಕ ವೇಗವಾಗಿ ಪ್ರಗತಿ ಸಾಧಿಸುತ್ತಿದ್ದೇವೆ. ಕೃಷಿ ಉತ್ಪನ್ನಗಳನ್ನು ಈ ಒಪ್ಪಂದದಿಂದ ಹೊರಗಿಟ್ಟಿದ್ದೇವೆ. ರಾಷ್ಟ್ರ ಹಾಗೂ ರೈತರ ಹಿತಾಸಕ್ತಿ ಪ್ರಮುಖವಾಗಿದೆ ಎಂದು ಹೇಳಿದರು.