ಉಕ್ರುಲ್ (ಮಣಿಪುರ): ಮಣಿಪುರದಲ್ಲಿ ಹಿಂಸಾಾರ ಮತ್ತೆ ಭುಗಿಲೆದ್ದಿದೆ. ಉಖ್ರುಲ್ ಜಿಲ್ಲೆಯಲ್ಲಿ ಭಾನುವಾರ ಸಂಜೆ ಎರಡು ಬುಡಕಟ್ಟು ಗುಂಪುಗಳು ನಡುವೆ ಹಿಂಸಾಚಾರ ನಡೆದಿದ್ದು, ಜಿಲ್ಲಾಡಳಿತವು ಬಿಎನ್ಎಸ್ಎಸ್ನ ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿದೆ.
ಉಖ್ರುಲ್ನಲ್ಲಿ ಎರಡು ಗುಂಪುಗಳು ಕಲ್ಲು ತೂರಾಟ ನಡೆಸಿದೆ. ಈ ಘಟನೆ ನಡೆಯುತ್ತಿದ್ದಂತೆ ಜಿಲ್ಲೆಯ “ಲಿಟನ್ ಪ್ರದೇಶದಲ್ಲಿ ಶಾಂತಿ ಮತ್ತು ಸಾರ್ವಜನಿಕ ಸಾಮರಸ್ಯಕ್ಕೆ ಭಂಗ ಬರಬಹುದೆಂಬ ಆತಂಕದ ಹಿನ್ನೆಲೆಯಲ್ಲಿ ನಿಷೇಧಾಜ್ಞೆಗಳನ್ನು ಹೊರಡಿಸಲಾಗಿದೆ” ಎಂದು ಉಖ್ರುಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಶಿಶ್ ದಾಸ್ ಹೇಳಿದ್ದಾರೆ.
ಯಾವುದೇ ವ್ಯಕ್ತಿ ತಮ್ಮ ಮನೆಯಿಂದ ಹೊರಗೆ ಓಡಾಡುವುದು, ಶಾಂತಿಗೆ ಭಂಗ ತರುವ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಹಾಗೆಯೇ ಆಡಳಿತವು ಸೈನ್ಯ ಮತ್ತು ಅರೆಸೈನಿಕ ಪಡೆಗಳನ್ನು ನಿಯೋಜಿಸುವಂತೆ ಜಿಲ್ಲಾಡಳಿತ ಕೋರಿದೆ.
ತಂಗ್ಖುಲ್ ಸಮುದಾಯದ ಸದಸ್ಯರ ಮೇಲೆ ಕುಕಿ-ಝೋ ಬುಡಕಟ್ಟು ಜನಾಂಗದವರ ಗುಂಪೊಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ಬೆನ್ನಲ್ಲೇ ಲಿಟನ್ನಲ್ಲಿ ಕುಕಿ-ಝೋ ಮತ್ತು ನಾಗಾ ಸಮುದಾಯದ ನಡುವೆ ಉದ್ವಿಗ್ನತೆ ಉಂಟಾಗಿದೆ.
ಲಿಟಾನ್ ಸರೈಖೋಂಗ್ ಗ್ರಾಮದಲ್ಲಿ ಮಧ್ಯರಾತ್ರಿ ಹಲವು ಮನೆಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಪರಿಣಾಮ ನಾಗಾ ಮತ್ತು ಕುಕಿ ಎರಡೂ ಸಮುದಾಯಗಳಿಗೆ ಸೇರಿದ ಮನೆಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರದೇಶದ ಹಲವಾರು ನಾಗಾ ಬುಡಕಟ್ಟು ಸಮುದಾಯದ ನಿವಾಸಿಗಳು ಹಲ್ಲೆ ನಡೆಸಿದ ದುಷ್ಕರ್ಮಿಗಳಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಉಖ್ರುಲ್ ನಾಗಾ ಸಮುದಾಯ ಹೆಚ್ಚಾಗಿ ಇರುವ ಜಿಲ್ಲೆಯಾಗಿದ್ದು, ಪ್ರಸ್ತುತ ಇಲ್ಲಿನ ಪರಿಸ್ಥಿತಿ ಉದ್ವಿಗ್ನವಾಗಿದೆ.
ಘಟನೆ ಹಿನ್ನೆಲೆಯಲ್ಲಿ ಮಹಾದೇವ್, ಲಂಬುಯಿ, ಶಾಂಗ್ಕೈ ಸೇರಿದಂತೆ ಲಿಟಾನ್ಗೆ ಹೋಗುವ ಮಾರ್ಗಗಳಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಹಾನಿಯ ಪ್ರಮಾಣವನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
2023ರ ಮೇ ತಿಂಗಳಿಂದ ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಗುಂಪುಗಳ ನಡುವೆ ಜನಾಂಗೀಯ ಹಿಂಸಾಚಾರ ನಡೆಯುತ್ತಿದ್ದು, 260ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ.
ಲಿಟಾನ್ ಪ್ರದೇಶದಲ್ಲಿ ಕುಕಿ ಜನಸಂಖ್ಯೆ ಹೆಚ್ಚು ಇದ್ದರೂ, ಉಕ್ರುಲ್ ಜಿಲ್ಲೆಯಲ್ಲಿ ಟಾಂಗ್ಖುಲ್ ನಾಗಾ ಜನಸಂಖ್ಯೆಯ ಪ್ರಾಬಲ್ಯವಿದೆ. ಈ ಪ್ರದೇಶದಲ್ಲಿ ಭೂ ವಿವಾದ, ಜನಾಂಗೀಯ ಸಂಘರ್ಷ ಮತ್ತು ಹಿಂದಿನ ಹಿಂಸಾಚಾರಗಳಿಂದ ಉದ್ವಿಗ್ನತೆ ಇತಿಹಾಸಪೂರ್ವದಿಂದಲೇ ಇದೆ. ಹಲ್ಲೆಯ ಘಟನೆಯೇ ದೊಡ್ಡ ಜನಾಂಗೀಯ ಹಿಂಸಾಚಾರಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಣಿಪುರದಲ್ಲಿ ಈಗಾಗಲೇ ಜನಾಂಗೀಯ ಉದ್ವಿಗ್ನತೆ ಇದ್ದು, ಇದರ ನಡುವೆ ಉಕ್ರುಲ್ ಜಿಲ್ಲೆಯಲ್ಲಿ ನಡೆದ ಈ ಹಿಂಸಾಚಾರ ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿದೆ. ಆಡಳಿತ ಮತ್ತು ಭದ್ರತಾ ಪಡೆಗಳು ಶಾಂತಿ ಸ್ಥಾಪನೆಗಾಗಿ ಕ್ರಮ ಕೈಗೊಂಡಿದ್ದರೂ, ಈ ಪ್ರದೇಶದಲ್ಲಿ ಇನ್ನೂ ಉದ್ವಿಗ್ನ ವಾತಾವರಣ ಮುಂದುವರಿದಿದೆ.